'ನಿಂಬೆ ಮಾರ್ತಿದ್ದವನ್ನ ಸಿಎಂ ಮಾಡಿದ್ರು, ಮೋದಿಯನ್ನ?'
ಶಿವಮೊಗ್ಗ, ಜ.27: ಕಾಂಗ್ರೆಸ್ಸಿನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರು 'ಮೋದಿ ಕಾಂಗ್ರೆಸ್ ಕಚೇರಿಯಲ್ಲಿ ಚಹಾ ಮಾರೋಕ್ಕೆ ಲಾಯಕ್ಕು' ಎಂದು ಜರಿದಿರುವುದಕ್ಕೆ ಬಿಜೆಪಿಗೆ ಮರಳಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮದೇ ದೃಷ್ಟಾಂತವನ್ನು ನೀಡಿ ಅಯ್ಯರಿಗೆ ತಿರುಗೇಟು ನೀಡಿದ್ದಾರೆ.
'ಮಂಡ್ಯದಲ್ಲಿ ತರಕಾರಿ, ನಿಂಬೆಹಣ್ಣು ಮಾರುತ್ತಿದ್ದ ನನ್ನನ್ನು ರಾಜ್ಯದ ಜನತೆ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಅದೇ ರೀತಿ ಚಹಾ ಮಾರುತ್ತಿದ್ದ ನರೇಂದ್ರ ಮೋದಿಯವರನ್ನು ಈ ದೇಶದ ಪ್ರಧಾನಿ ಮಾಡುವ ಶಕ್ತಿಯೂ ಈ ಜನರಲ್ಲಿದೆ' ಎಂದು ಯಡಿಯೂರಪ್ಪ ಹೇಳಿದ್ದಾರೆ.
ಕೆಜೆಪಿಯನ್ನು ಕಟ್ಟಿ ಕೆಟ್ಟೆ: 'ಕೆಜೆಪಿ-ಬಿಜೆಪಿ ವಿಲೀನ ಮತ್ತು ಕೆಜೆಪಿ ಕಾರ್ಯಕರ್ತರ ಬಿಜೆಪಿ ಸೇರ್ಪಡೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಬದುಕಿನಲ್ಲಿ ಕೆಜೆಪಿ ಹುಟ್ಟು ಹಾಕಿದ್ದು ಕೆಟ್ಟ ಕನಸು. ಅದನ್ನೆಲ್ಲಾ ಮರೆತು ನರೇಂದ್ರ ಮೋದಿಯವರನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡಲು ಪ್ರಾಮಾಣಿಕತೆಯಿಂದ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಲೋಕ ಚುನಾವಣೆಯಲ್ಲಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಬೇಕು
'ಕೆಜೆಪಿ ಹುಟ್ಟು ಹಾಕಿ ನಾವು ಕೂಡ ಸಾಧನೆ ಮಾಡಲು ಆಗಲಿಲ್ಲ. ಬಿಜೆಪಿ ಕೂಡ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗಲಿಲ್ಲ. ಇದೀಗ ರಾಜ್ಯದಲ್ಲಿ ಹೊಸ ಶಕೆ ಪ್ರಾರಂಭವಾಗಿದೆ. ಯಾವುದೇ ಸ್ಥಾನಮಾನದ ಅಪೇಕ್ಷೆಯಿಲ್ಲದೆ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೋದಿ ಕೈ ಬಲಪಡಿಸಬೇಕು' ಎಂದರು.

ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಅಪಥ್ಯ:
'ರಾಜ್ಯದ ಪರಿಸ್ಥಿತಿ ಗಮನಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತಮ್ಮ ನಾಯಕನೆಂದು ಒಪ್ಪಿಕೊಳ್ಳುವ ಸ್ಥಿತಿ ಅವರದ್ದೇ ಕಾಂಗ್ರೆಸ್ ಪಕ್ಷದಲ್ಲಿ ಕಾಣುತ್ತಿಲ್ಲ. ಅಧಿಕಾರಿಗಳು ಸಹ ಮುಖ್ಯಮಂತ್ರಿಗೆ ಸಹಕರಿಸುತ್ತಿಲ್ಲ' ಎಂದು ಹೇಳಿದರು

ಏಪ್ರಿಲಿನಲ್ಲಿ ಮಹಾ ಚುನಾವಣೆ
ಮಾ. 1 ರ ನಂತರ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಬಿಜೆಪಿ ಪಕ್ಷದ ವತಿತಿಂದ ಯಾವುದೇ ಸಮಾವೇಶ ನಡೆಸುವುದಾದರೆ ಫೆಬ್ರವರಿ ಅಂತ್ಯದೊಳಗೆ ನಡೆಸಬೇಕು ಎಂದು ಪಕ್ಷದ ಮುಖಂಡರಿಗೆ ಅವರು ಸೂಚ್ಯವಾಗಿ ತಿಳಿಸಿದರು.

ಯಡಿಯೂರಪ್ಪ ಮತ್ತೆ ಸಿಎಂ ಆಗುವುದು ಖಚಿತ
ಇದೇ ವೇಳೆ, ಮೋದಿ ದೇಶದ ಪ್ರಧಾನಿ ಆಗುವುದು ನಿಶ್ಚಿತ. ಈ ವೇಳೆ ಅನಂತಕುಮಾರ್ ಜೊತೆ ಯಡಿಯೂರಪ್ಪ ಕೂಡ ಕೇಂದ್ರ ಸಚಿವರಾಗಬೇಕು. ಇದು ನನ್ನ ಅಭಿಲಾಷೆ. ಮುಂದಿನ ವಿಧಾನಸಭೆ ಚುನಾವಣೆಯನ್ನು ಯಡಿಯೂರಪ್ಪನವರ ನೇತೃತ್ವದಲ್ಲೇ ಎದುರಿಸಲಾಗುವುದು. ಆಗವರು ಮತ್ತೆ ಸಿಎಂ ಆಗುವುದು ಖಚಿತ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.












Click it and Unblock the Notifications