ಕಿಸಾನ್ ಸಮ್ಮಾನ್ ಸಹಾಯಧನ ಬೇಡ; ಮೋದಿಗೆ ಯುವ ರೈತನ ಪತ್ರ!
ಶಿವಮೊಗ್ಗ, ಮಾರ್ಚ್ 23: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಡಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಲಾಗಿದೆ. ದೇಶಾದ್ಯಂತ ಹಲವಾರು ರೈತರು ಈ ಯೋಜನೆಯಡಿ ಲಾಭ ಪಡೆಯುತ್ತಿದ್ದಾರೆ. ಶಿವಮೊಗ್ಗದ ಯುವ ರೈತರೊಬ್ಬರು ಯೋಜನೆಯಡಿ ಸಹಾಯಧನ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆಯಡಿ ಬರುತ್ತಿರುವ ಧನ ಸಹಾಯವನ್ನು ತಿರಸ್ಕರಿಸಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಗ್ರಾಮದ ಯುವ ರೈತ ಸಂದೇಶ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಇನ್ನು ಮುಂದೆ ನನ್ನ ಖಾತೆಗೆ ಹಣ ಹಾಕಬೇಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
ಈ ಯೋಜನೆಯಡಿ ಕೇಂದ್ರ ಸರ್ಕಾರದಿಂದ ವಾರ್ಷಿಕ 6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4 ಸಾವಿರ ಒಟ್ಟು 10 ಸಾವಿರ ಹಣ ರೈತರ ಖಾತೆಗೆ ಜಮೆಯಾಗುತ್ತದೆ. ಆದರೆ, ಯುವ ರೈತ ಸಂದೇಶ್ ಈ ಸೌಲಭ್ಯ ನನಗೆ ಬೇಡ, ಇದನ್ನು ನಾನು ತ್ಯಜಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ರೈತರು ಉಪಯೋಗಿಸುತ್ತಿರುವ ಬೀಜ, ಗೊಬ್ಬರ, ಔಷಧಗಳು, ಕೃಷಿ ಸಲಕರಣೆಗಳು, ಕೃಷಿ ಯಂತ್ರೋಪಕರಣಗಳು ಹಾಗೂ ನೀರಾವರಿಗೆ ಬಳಸುವ ಪೈಪ್ , ಮೋಟಾರುಗಳು ತೀವ್ರ ದುಬಾರಿಯಾಗಿದೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಕೃಷಿ ಸಲಕರಣೆಗಳ ಮೇಲೆ ವಿಧಿಸುತ್ತಿರುವ ತೆರಿಗೆಯನ್ನು ಮನ್ನ ಮಾಡಬೇಕು ಎಂದು ಪತ್ರದಲ್ಲಿ ಕಾರಣಗಳನ್ನು ನೀಡಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆಯಡಿ ಬರುತ್ತಿರುವ ಧನ ಸಹಾಯವನ್ನು ತಿರಸ್ಕರಿಸಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಗ್ರಾಮದ ಯುವ ರೈತ ಸಂದೇಶ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. #Sandesh #KisanSamman #Shikaripura pic.twitter.com/dgijt7Qj1h
— oneindiakannada (@OneindiaKannada) March 23, 2021
ರೈತರು ಬೆಳೆದ ಬೆಲೆ ಸೂಕ್ತ ಮಾರುಕಟ್ಟೆ ಕಲ್ಪಿಸಿಕೊಡಬೇಕು, ರೈತರು ಎದುರಿಸುತ್ತುರುವ ಆರ್ಥಿಕ ಸಂಕಷ್ಟಗಳನ್ನು ಹೋಗಲಾಡಿಸಲು ನುರಿತ ಅಧಿಕಾರಿಗಳ ನಿಯೋಗ ರಚಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿರುವ ರೈತ ಸಂದೇಶ್ ಸಹಾಯಧನ ಬೇಡ ಎಂದು ಹೇಳಿದ್ದಾರೆ.
ಸಂದೇಶ್ ಕೇವಲ ಮೋದಿಗೆ ಪತ್ರವನ್ನು ಬರೆದಿಲ್ಲ. ಶಿಕಾರಿಪುರ ತಾಲ್ಲೂಕಿನ ಕೃಷಿ ಇಲಾಖೆ ಅಧಿಕಾರಿಯನ್ನು ಖುದ್ದಾಗಿ ಭೇಟಿಯಾಗಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನನಗೆ ಹಣ ಸಂದಾಯವಾಗುವುದು ಬೇಡ ಎಂದ ಮನವಿ ಪತ್ರ ಕೊಟ್ಟು ಬಂದಿದ್ದಾರೆ.












Click it and Unblock the Notifications