ಶಿವಮೊಗ್ಗ; ಲಾಂಚ್ ಮುಳುಗಿ ಜನರ ಪರದಾಟ, ಸಮಸ್ಯೆ ಪರಿಹಾರ ಯಾವಾಗ?
ಶಿವಮೊಗ್ಗ, ಅಕ್ಟೋಬರ್ 1: ಸೂಕ್ತ ನಿರ್ವಹಣೆ ಇಲ್ಲದೆ ಶಿಗ್ಗಲು - ಕರೂರು ಲಾಂಚ್ ನೀರಿನಲ್ಲಿ ಮುಳುಗಿದೆ. ಇದನ್ನು ಮೇಲೆತ್ತಿ, ಪುನಃ ಸೇವೆ ಆರಂಭಿಸುವ ಪ್ರಯತ್ನವಾಗಿಲ್ಲ. ಹಾಗಾಗಿ ಈ ಭಾಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಅನುಕೂಲಕ್ಕೆ ಎಂದು ಕಳೆದ ವರ್ಷ ಲಾಂಚ್ ಸೇವೆ ಆರಂಭಿಸಲಾಗಿತ್ತು. ಆದರೆ ಈ ಲಾಂಚ್ ನೀರಿನಲ್ಲಿ ಮುಳುಗಿ ನಾಲ್ಕು ತಿಂಗಳಾಗಿದೆ. ಆದರೂ ಮೇಲಕ್ಕೆತ್ತದಿರುವುದರಿಂದ ಚನ್ನಗೊಂಡ ಮತ್ತು ಸುತ್ತಮುತ್ತಲ ಜನರು ಪರದಾಡುವಂತಾಗಿದೆ.
ಶಿಗ್ಗಲು - ಕರೂರು ನಡುವೆ ಲಾಂಚ್ ಸೇವೆ ಆರಂಭಿಸುವಂತೆ ಜನರು ಬೇಡಿಕೆ ಇತ್ತು. ಹಾಗಾಗಿ ಒಳನಾಡು ಮತ್ತು ಜಲಸಾರಿಗೆ ಇಲಾಖೆಯ ಹಸಿರುಮಕ್ಕಿಯ ಹಳೆ ಲಾಂಚ್ ಅನ್ನು, ಇಲ್ಲಿಗೆ ತರಿಸಲಾಗಿತ್ತು. ಶಾಸಕ ಹರತಾಳು ಹಾಲಪ್ಪ ಅವರು ಲಾಂಚ್ ಸೇವೆಗೆ ಚಾಲನೆ ನೀಡಿದ್ದರು. ಆದರೆ ಸಮರ್ಪಕ ನಿರ್ವಹಣೆ ಇಲ್ಲದೆ ಲಾಂಚ್ ನೀರಿನಲ್ಲಿ ಮುಳುಗಿದೆ.
ಗ್ರಾಮ ಪಂಚಾಯಿತಿಗೆ ಹೊರೆಯಾದ ಲಾಂಚ್
ಒಳನಾಡು ಮತ್ತು ಜಲಸಾರಿಗೆ ಬದಲಾಗಿ ಚನ್ನಗೊಂಡು ಗ್ರಾಮ ಪಂಚಾಯಿತಿಗೆ ಈ ಲಾಂಚ್ ನಿರ್ವಹಣೆ ಜವಾಬ್ದಾರಿ ವಹಿಸಲಾಯಿತು. ಆದರೆ ಲಾಂಚ್ ನಿರ್ವಹಣೆ ಮಾಡಲು ಗ್ರಾಮ ಪಂಚಾಯಿತಿಗೆ ಸಾದ್ಯವಾಗಲಿಲ್ಲ. 25 ಲಕ್ಷ ಮೌಲ್ಯದ ಲಾಂಚ್ ಸೂಕ್ತ ನಿರ್ವಹಣೆ ಇಲ್ಲದೆ ಕೆಸರಿನಲ್ಲಿ ಸಿಲುಕಿ ಮುಳುಗಿದೆ.

ಗ್ರಾಮ ಪಂಚಾಯಿತಿಯಿಂದ ಲಾಂಚ್ ನಿರ್ವಹಣೆ ಕಷ್ಟಕರ. ಕೆಸರಿನಲ್ಲಿ ಸಿಕ್ಕಿಬಿದ್ದ ಲಾಂಚ್ ಮೇಲೆತ್ತಲು ನಡೆಸಿದ ಪ್ರಯತ್ನಗಳು ವಿಫಲವಾಗಿದೆ. ಈ ಬಗ್ಗೆ ಒಳನಾಡು ಮತ್ತು ಜಲಸಾರಿಗೆ ಇಲಾಖೆ, ಶಾಸಕರಿಗೆ ಹಲವು ಭಾರಿ ತಿಳಿಸಲಾಗಿದೆ ಎಂದು ಚನ್ನಗೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮರಾಜ್ ತಿಳಿಸಿದ್ದಾರೆ.
ಇಲಾಖೆ ಇತ್ತ ಮುಖ ಹಾಕಿಲ್ಲ
ಲಾಂಚ್ ಗ್ರಾಮ ಪಂಚಾಯಿತಿಯ ಜವಾಬ್ದಾರಿಗೆ ಬಿಟ್ಟಿದ್ದರಿಂದ ಒಳನಾಡು ಮತ್ತು ಜಲಸಾರಿಗೆ ಇಲಾಖೆ ಇತ್ತ ಮುಖ ಮಾಡಿಲ್ಲ. ಗ್ರಾಮ ಪಂಚಾಯಿತಿಯ ಮನವಿಗೂ ಸ್ಪಂದಿಸಿಲ್ಲ. ಈ ಹಗ್ಗ ಜಗ್ಗಾಟದಲ್ಲಿ ಲಾಂಚ್ ಮುಳುಗಿ ನಾಲ್ಕು ತಿಂಗಳಾಗಿದೆ. ಜನರು ಅಗತ್ಯ ಕೆಲಸಗಳಿಗೆ ಓಡಾಡಲು ಹರಸಾಹಸ ಪಡಬೇಕಾಗಿದೆ. ಸಣ್ಣಪುಟ್ಟ ಕಾರ್ಯಗಳಿಗೆ ಸುತ್ತಿ ಬಳಸಿ ಬರಬೇಕಿದೆ. ಇದಕ್ಕೆ ಶಾಶ್ವತ ಪರಿಹಾರ ಸೂಚಿಸುವಂತೆ ಜನರು ಒತ್ತಾಯಿಸಿದ್ದಾರೆ.












Click it and Unblock the Notifications