ಬೆಂಗಳೂರಿಗೆ ಶರಾವತಿ ನೀರು : ಶಿವಮೊಗ್ಗದಲ್ಲಿ ಹೋರಾಟಕ್ಕೆ ವೇದಿಕೆ ಸಿದ್ಧ
ಶಿವಮೊಗ್ಗ, ಜೂನ್ 24 : ಬೆಂಗಳೂರು ನಗರಕ್ಕೆ ಶರಾವತಿ ನದಿ ನೀರು ತೆಗೆದುಕೊಂಡು ಹೋಗುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಶಿವಮೊಗ್ಗದಲ್ಲಿ ವಿರೋಧ ವ್ಯಕ್ತವಾಗಿದೆ. ಸರ್ಕಾರದ ಪ್ರಸ್ತಾವನೆ ಖಂಡಿಸಿ, ಜುಲೈ 10ರಂದು ಶಿವಮೊಗ್ಗ ಬಂದ್ಗೆ ಕರೆ ನೀಡಲಾಗಿದೆ.
ಶರಾವತಿ ಉಳಿಸಿ ಎಂಬ ಕೂಗಿನೊಂದಿಗೆ ಪರಿಸರವಾದಿಗಳು ಒಂದಾಗಿದ್ದಾರೆ. ಬೆಂಗಳೂರಿಗೆ ಶರಾವತಿ ನೀರು ತೆಗೆದುಕೊಂಡು ಹೋಗುವ ಅವೈಜ್ಞಾನಿಕ ಯೋಜನೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ದೊಡ್ಡ ಹೋರಾಟ ನಡೆಸಲು ವೇದಿಕೆ ಸಿದ್ಧವಾಗಿದೆ.
ಬೆಂಗಳೂರಿಗೆ ಲಿಂಗನಮಕ್ಕಿ ನೀರು ಕೊಂಡೊಯ್ಯಲು ಬಿಡೊಲ್ಲ: ರಾಘವೇಂದ್ರ
ಸೋಮವಾರ ಶಿವಮೊಗ್ಗದಲ್ಲಿ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿದರು. ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಘೋಷಣೆ ಮಾಡಿದರು.
ಬೆಂಗಳೂರಿನ ದಾಹ ತಣಿಸಲು ಶರಾವತಿ, ತುಂಗಾ ಭದ್ರಾ ನೀರು
ಹಿರಿಯ ಸಾಹಿತಿ ನಾ.ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟವನ್ನು ರಚನೆ ಮಾಡಲಾಗಿದೆ. ಹಲವು ಪರಿಸರ ಹೋರಾಟಗಾರರು, ಪತ್ರಕರ್ತರು, ಸಂಘ ಸಂಸ್ಥೆಗಳ ಸದಸ್ಯರು ಈ ಒಕ್ಕೂಟದಲ್ಲಿದ್ದಾರೆ....
ನಾ.ಡಿಸೋಜ ಹೇಳಿದ್ದೇನು?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾ.ಡಿಸೋಜ ಅವರು, 'ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಿದ್ದು ನಮಗಿರುವ ವಿದ್ಯುತ್ ಅವಶ್ಯಕತೆ ನೀಗಿಸಲು, ಅಂದು ಜನರನ್ನ ನಿರ್ದಾಕ್ಷಿಣ್ಯವಾಗಿ ಕಾಡಿನೊಳಗೆ ಬಿಸಾಡಿ ಬಂದರು. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಮಧ್ಯೆ ಜನರು ಹೈರಾಣಾಗಿದ್ದಾರೆ. ಈಗಾಗಲೇ ಆದ ಅನಾಹುತದಿಂದ ಚೇತರಿಕೊಂಡಿಲ್ಲ ಈಗ ಮತ್ತೊಂದು ಯೋಜನೆ. ಎಷ್ಟೊಂದು ಅರಣ್ಯ ನಾಶ, ಎಷ್ಟು ಜಮೀನು ತೆರವು, ಈ ಯೋಜನೆಯ ಲಾಭವನ್ನು ಚುನಾವಣೆಗೆ ಬಳಸುವ ಹುನ್ನಾರವಿದೆ' ಎಂದು ಆರೋಪಿಸಿದರು.
ಯೋಜನೆ ಒಪ್ಪುವುದು ಸಾಧ್ಯವೇ ಇಲ್ಲ
ನಾ.ಡಿಸೋಜ ಅವರು ಮಾತನಾಡಿ, 'ಲಿಂಗನಮಕ್ಕಿ ಅಣೆಕಟ್ಟಿನಿಂದ ಜನರು ಬೀದಿಗೆ ಬಂದರು. ಬೆಂಗಳೂರಿಗೆ ನೀರು ನೀಡಲು ಹೊರಟರೆ ಮತ್ತೆ ಸಾವಿರಾರು ಜನರು ನಿರಾಶ್ರಿತರಾಗುತ್ತಾರೆ. ಜೊತೆಗೆ ಸಾವಿರಾರು ಎಕರೆ ಅರಣ್ಯ ನಾಶವಾಗುತ್ತದೆ. ಚುನಾವಣೆಗೆ ಹಣ ಹೊಂದಿಸಲು ಸರ್ಕಾರ 12 ಸಾವಿರ ಕೋಟಿ ರೂಪಾಯಿಯ ಯೋಜನೆ ರೂಪಿಸುತ್ತಿದೆಯೇನೋ ಎಂಬ ಅನುಮಾನ ಕಾಡುತ್ತಿದೆ. ಸಮುದ್ರಕ್ಕೆ ಪೋಲಾಗುವ ನೀರು ಎಂದು ಪರಮೇಶ್ವರ ಹೇಳುತ್ತಾರೆ. ಆದರೆ, ಪರಿಸರದಲ್ಲಿ ಪೋಲು ಎನ್ನುವುದು ಇಲ್ಲವೇ ಇಲ್ಲ. ಶರಾವತಿ ಅತಿ ಚಿಕ್ಕ ನದಿ, ಈ ನದಿಯನ್ನು ಸರ್ಕಾರ ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿದೆ. ಈ ಚಿಕ್ಕ ನದಿಗೆ 5 ಜಲಾಶಯ ನಿರ್ಮಿಸಲಾಗಿದೆ. ಇದರಿಂದ ಅಮೂಲ್ಯವಾದ ಜಲಚರಗಳು ಅವನತಿಯತ್ತ ಸಾಗುತ್ತಿವೆ. ಹೀಗಿರುವಾಗ ಮತ್ತೆ ಬೆಂಗಳೂರಿಗೆ ನೀರು ನೀಡುವುದನ್ನು ಒಪ್ಪುವುದು ಸಾಧ್ಯವೆ ಇಲ್ಲ' ಎಂದು ಹೇಳಿದರು.
ತುಂಗಾ ಹೋರಾಟದಲ್ಲಿ ಗೆದ್ದಿದ್ದೇವೆ
ಸಾಹಿತಿ ಡಾ.ಶ್ರೀಕಂಠ ಕೂಡಿಗೆ ಅವರು ಮಾತನಾಡಿ, 'ತುಂಗಾ ಹೋರಾಟದಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂಬ ಮನೋಸ್ಥೈರ್ಯ ನಮ್ಮಲಿದೆ. ಈಗ ಶರಾವತಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇಂತಹ ಯೋಜನೆಯ ಹಿಂದೆ ರಾಜಕಾರಣ, ಮತಬ್ಯಾಂಕ್ ಉದ್ದೇಶ ಬಿಟ್ಟರೆ ಮತ್ತೇನೂ ಇಲ್ಲ. ಹೋರಾಟ ಪಕ್ಷಾತೀತವಾಗಿ ಎಲ್ಲರನ್ನೊಳಗೊಂಡು ಆಗಬೇಕು, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು' ಎಂದು ಒತ್ತಾಯಿಸಿದರು.
ಸರ್ಕಾರ ಯೋಜನೆ ಕೈ ಬಿಡಬೇಕು
ಲಿಂಗನಮಕ್ಕಿ ಹೋರಾಟ ಸಮಿತಿಯ ಹರ್ಷ ಕುಮಾರ್ ಕುಗ್ವೆ ಮಾತನಾಡಿ, 'ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆ ಮೂರ್ಖತನದ್ದು. ಈ ಯೋಜನೆಗೆ ಯಾವುದೇ ಕಾರಣಕ್ಕೂ ಈ ಭಾಗದ ಜನತೆ ಅವಕಾಶ ನೀಡುವುದಿಲ್ಲ. ಈಗಾಗಲೇ ಈ ಸಂಬಂಧ ಹೋರಾಟವೂ ಆರಂಭಗೊಂಡಿದೆ. ಸರ್ಕಾರ ಈ ಕೂಡಲೇ ಯೋಜನೆಯನ್ನು ಕೈಬಿಡಬೇಕು. ಡಿಪಿಆರ್ ತಯಾರಿಸುವುದರಿಂದ ಹಿಂದೆ ಸರಿಯಬೇಕು' ಎಂದು ಆಗ್ರಹಿಸಿದರು.