ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಸಚಿವ ಈಶ್ವರಪ್ಪ ಸ್ಪಷ್ಟನೆ
ಶಿವಮೊಗ್ಗ, ಏಪ್ರಿಲ್ 13: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ವಿಚಾರವಾಗಿ ಶಿವಮೊಗ್ಗದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಸಂತೋಷ್ ಯಾರು ಎಂಬುದೇ ಗೊತ್ತಿಲ್ಲ, ನನ್ನ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದು ತಿಳಿಸಿದರು.

ಗುತ್ತಿಗೆದಾರ ಸಂತೋಷ್ ಯಾವುದೇ ಡೆತ್ ನೋಟ್ ಬರೆದಿಲ್ಲ, ಅಲ್ಲಿರುವುದು ವಾಟ್ಸಪ್ ಸಂದೇಶ ಮಾತ್ರ ಎಂದು ಸ್ಪಷ್ಟಪಡಿಸಿದ ಸಚಿವ ಈಶ್ವರಪ್ಪ, ವರ್ಕ್ ಆರ್ಡರ್ ಇಲ್ಲದೆ ಕಾಮಗಾರಿ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಯಾವುದೇ ಅಕ್ರಮವಾಗಿಲ್ಲ, ಕಾಂಗ್ರೆಸ್ನವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಇದನ್ನು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ನಮ್ಮ ರಾಜ್ಯಾಧ್ಯಕ್ಷರಿಗೂ ತಿಳಿಸಿದ್ದೇನೆ. ಈ ಪ್ರಕರಣದ ಬಗ್ಗೆ ಅಮೂಲಾಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಕಾನೂನು ಬಾಹಿರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ನನ್ನ ರಾಜೀನಾಮೆಯನ್ನು ಕೇಳುತ್ತಿದ್ದಾರೆ. ಡೆತ್ ನೋಟ್ ಬರೆದಿಲ್ಲ. ಡೆತ್ ನೋಟ್ ಬರೆಯದೇ, ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇಲಾಖೆಯಲ್ಲಿ ವರ್ಕ್ ಆರ್ಡರ್ ನೀಡಲು ಟೆಕ್ನಿಕಲ್ ಆಗಿ, ನೀತಿ, ನಿಯಮ ಇರುತ್ತದೆ ಎಂದು ಹೇಳಿದರು.
ಇಷ್ಟು ವರ್ಷ ಆಡಳಿತ ನಡೆಸಿ ಅಧಿಕಾರ ನಡೆಸಿದ್ದಿರಲ್ಲಾ? ವರ್ಕ್ ಆರ್ಡರ್ ನೀಡದೇ ಬಿಲ್ ಪೇಮೆಂಟ್ ಮಾಡಿದ್ದಿರಾ? ಎಂದು ವಿಪಕ್ಷ ಕಾಂಗ್ರೆಸ್ಗೆ ಸಚಿವ ಈಶ್ವರಪ್ಪ ಪ್ರಶ್ನಿಸಿದರು. ನನಗೆ ಎಲ್ಲೆಡೆಯಿಂದ ನನಗೆ ಫೋನ್ ಬರುತ್ತಿದೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತಿದ್ದಾರೆ ಎಂದರು.
ಡಿವೈಎಸ್ಪಿ ಗಣಪತಿ ವಿಚಾರದಲ್ಲಿ, ಗಣಪತಿ ಡೆತ್ ನೋಟ್ ಬರೆದಿದ್ದರು. ಗಣಪತಿ ಬಾಡಿ ಬಳಿಯೇ ಡೆತ್ ನೋಟ್ ಇತ್ತು. ನಾನು ವಾಟ್ಸಪ್ಲ್ಲಿ ಟೈಪ್ ಮಾಡುತ್ತೇನೆ. ಇಂತಹವರ ಸಾವಿಗೆ ಇವರೇ ಕಾರಣ ಎಂದು ಹೇಳಿದರೆ ನಂಬುತ್ತಾರಾ? ಇದುವರೆಗೂ ನಾನು ಸಂತೋಷ್ ಮುಖವನ್ನೇ ನೋಡಿಲ್ಲ. ಆದರೆ, ನೂರಾರು ಸಲ ನಮ್ಮನೆಗೆ ಬಂದಿದ್ದರು ಎಂದು ಹೇಳಿದ್ದಾರಂತೆ.
ಹಲವಾರು ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ. ಇವರಿಗೆ ಫ್ಲೈಟ್ ಟಿಕೆಟ್ ಮಾಡಿಸಿಕೊಟ್ಟವರು ಯಾರು? ನಾನು ಬಡತನದಲ್ಲಿದ್ದೇನೆ ಎಂದು ಹೇಳಿದ್ದರು. ಖಾಸಗಿ ಚಾನಲ್ ಮತ್ತು ಸಂತೋಷ್ ಪಾಟೀಲ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ನೋಟಿಸ್ಗೆ ಹೆದರಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಈ ಬಗ್ಗೆ ನನಗೆ ಅನುಮಾನವಿದೆ ಎಂದು ಈಶ್ವರಪ್ಪ ತಿಳಿಸಿದರು.
ಕಾನೂನು, ನೀತಿ, ನಿಯಮ ಗಾಳಿಗೆ ತೂರಿ ಇಲಾಖೆ ಕಾರ್ಯ ನಿರ್ವಹಿಸಲ್ಲ. ಇದು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಯ್ಯರಿಗೆ ಗೊತ್ತಾಗುವುದಿಲ್ಲವಾ? ಅಮೂಲಾಗ್ರ ತನಿಖೆಯಾದಾಗಲೇ ಈ ಬಗ್ಗೆ ತಿಳಿಯಲಿದೆ. ವಾಟ್ಸಪ್ಲ್ಲಿ ಮಾಡಿರುವ ಸಂದೇಶ ಡೆತ್ ನೋಟ್ ಆಗುತ್ತಾ? ಎಂದು ಪ್ರಶ್ನಿಸಿದರು.
ಎಂತೆದ್ದೆದೋ ಟಾರ್ಗೆಟ್ ಮಾಡಿದರು, ಈ ಟಾರ್ಗೆಟ್ಗೆ ಹೆದರುತ್ತೇನಾ? ಇಂತಹ ಟಾರ್ಗೆಟ್ಗೆಲ್ಲಾ ನಾನು ಹೆದರಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಗೆ ನಿರಾಸೆಯಾಗಿದೆ ಎಂದರು.
Recommended Video
ಈಶ್ವರಪ್ಪ ಪುತ್ರ ಕಾಂತೇಶ್ ಮತ್ತು ಶಾಸಕರೊಬ್ಬರು ಸಂತೋಷ್ ಪಾಟೀಲ್ಗೆ ಬೆದರಿಕೆ ಹಾಕಿದ್ದರು ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಲಕ್ಷ್ಮಿ ಹೆಬ್ಬಾಳ್ಕರ್ಗೂ ತಲೆ ಕೆಟ್ಟಿದ್ದರೆ, ನಾನೇನು ಮಾಡಲಿ. ಆರೋಪ ಮಾಡಿದರೆ ನಾನು ಬಗ್ಗಬೇಕು. ಸುಖಾ ಸುಮ್ಮನೆ ಆರೋಪ ಮಾಡಬಾರದು ಎಂದರು.
ಹೆಣ್ಣುಮಕ್ಕಳ ಮೇಲೆ ನನಗೆ ಬಹಳ ಗೌರವವಿದೆ, ಲಕ್ಷ್ಮಿ ಹೆಬ್ಬಾಳ್ಕರ್ ಮೇಲೂ ಗೌರವವಿದೆ. ಮುಸಲ್ಮಾನರಿಗೆ ನಾವು ಗೌರವ ನೀಡುತ್ತೇವೆ. ಆದರೆ, ಗೂಂಡಾ ಮುಸಲ್ಮಾನರಿಗೆ ನಾವು ಈಗಲೂ ಎಚ್ಚರಿಕೆ ನೀಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ಈಶ್ವರಪ್ಪ ಹೇಳಿದರು.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications