'ಸಾಗರದಲ್ಲಿ ಬಿಜೆಪಿ ಟಿಕೆಟ್ ನನಗೆ ಕೊಡಿ, ಇಲ್ಲ ಬ್ರಾಹ್ಮಣರ ಸಿಟ್ಟು ಎದುರಿಸಿ'
ಸಾಗರ (ಶಿವಮೊಗ್ಗ ಜಿಲ್ಲೆ), ಏಪ್ರಿಲ್ 7: ಯಡಿಯೂರಪ್ಪ ಅವರೇ ಬ್ರಾಹ್ಮಣ ಸಮುದಾಯದ ಆಕ್ರೋಶಕ್ಕೆ ಕಾರಣ ಆಗಬೇಡಿ. ಈ ಸಲ ಸಾಗರದಿಂದ ಬ್ರಾಹ್ಮಣ ಸಮುದಾಯದವರಿಗೆ ಟಿಕೆಟ್ ಕೊಡಿ ಎಂದು ಸ್ಪರ್ಧಾಕಾಂಕ್ಷಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಸಾಗರ ತಾಲೂಕಿನ ಕರೂರು ಹೋಬಳಿಯ ಸತ್ಯನಾರಾಯಣ್ ಭಟ್ ಈಗ ಹೊಸದಾಗಿ ಉದಯಿಸಿರುವ ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಹತ್ತು ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ. ಆದ್ದರಿಂದ ನನಗೆ ಟಿಕೆಟ್ ನೀಡಬೇಕು. ಈ ಸಲ ಬ್ರಾಹ್ಮಣ ಸಮುದಾಯದವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಪತ್ರಿಕಾ ಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ. ಆ ಮೂಲಕ ಇದೀಗ ಟಿಕೆಟ್ ಹಂಚಿಕೆ ವಿಚಾರವಾಗಿ ಹೊಸ ಪೀಕಲಾಟ ಶುರುವಾಗಿದೆ.
ಯಾವುದೇ ಕಾರಣಕ್ಕೂ ಗೋಪಾಲಕೃಷ್ಣ ಬೇಳೂರುಗೆ ಬಿಜೆಪಿಯ ಟಿಕೆಟ್ ನೀಡಬಾರದು. ಅವರು ಎರಡು ಬಾರಿ ಶಾಸಕನಾಗಿ ಆಯ್ಕೆಯಾದರೂ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದ ಸತ್ಯನಾರಾಯಣ ಭಟ್, ಒಂದು ವೇಳೆ ತಮಗೆ ಈ ಬಾರಿ ಟಿಕೆಟ್ ನೀಡದಿದ್ದಲ್ಲಿ ಬ್ರಾಹ್ಮಣ ಸಮುದಾಯದ ಸಿಟ್ಟಿಗೆ ಯಡಿಯೂರಪ್ಪ ಗುರಿ ಆಗುತ್ತಾರೆ ಎಂದು ಕೂಡ ಹೇಳಿದ್ದಾರೆ.