Sigandur Bridge: ಸಿಗಂದೂರು ಸೇತುವೆ ಯಾವಾಗ ಸಂಚಾರಕ್ಕೆ ಮುಕ್ತ
ಶಿವಮೊಗ್ಗ, ಸೆಪ್ಟೆಂಬರ್ 15: ಸಿಂಗದೂರು ಸೇತುವೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಮುಳುಗಡೆ ಪ್ರದೇಶದ ಜನರ ಹಲವು ದಶಕಗಳ ಬೇಡಿಕೆಯಾಗಿದೆ. ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಸೇತುವೆ ನಿರ್ಮಾಣವಾಗುತ್ತಿದೆ. 2018ರಲ್ಲಿ ಶಂಕಸ್ಥಾಪನೆಗೊಂಡ ಕಾಮಗಾರಿ 2025ರಲ್ಲಿ ಉದ್ಘಾಟನೆಯಾಗುವ ನಿರೀಕ್ಷೆ ಇದೆ. ಇದರಿಂದಾಗಿ ಈ ಭಾಗದ ಪ್ರವಾಸೋದ್ಯಮಕ್ಕೂ ಸಹ ಉತ್ತೇಜನ ಸಿಗುವ ನಿರೀಕ್ಷೆ ಇದೆ.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಸೇತುವೆಯ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಅಧಿಕಾರಿಗಳಿಂದ ಈ ಕುರಿತು ಮಾಹಿತಿಯನ್ನು ಪಡೆದರು. ಈ ಸೇತುವೆಯ ನಿರ್ಮಾಣ ವೆಚ್ಚ ಸುಮಾರು 423.15 ಕೋಟಿ ರೂ.ಗಳು. 2.25 ಕಿ. ಮೀ.ಉದ್ದದ ಸೇತುವೆ ವಿಶಿಷ್ಟ ವಿನ್ಯಾಸವನ್ನು ಹೊಂದಿದ್ದು, ಕಾಮಗಾರಿ ಚುರುಕಿನಿಂದಲೇ ನಡೆಯುತ್ತಿದೆ.

ಯಾವಾಗ ಕಾಮಗಾರಿ ಪೂರ್ಣ?; ಸೇತುವೆ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ, "ಶರಾವತಿ ಮುಳುಗಡೆ ಜನರ ಹಲವು ದಶಕಗಳ ಕನಸು ಈಡೇರುವ ದಿನ ಹತ್ತಿರವಾಗುತ್ತಿದ್ದು, ಸಿಂಗದೂರು ಸೇತುವೆ ಉದ್ಘಾಟನೆ 2025 ಏಪ್ರಿಲ್, ಮೇ ಹೊತ್ತಿಗೆ ನಡೆಯಲಿದೆ" ಎಂದು ಹೇಳಿದರು.
"ನಾಡಿಗೆ ಬೆಳಕು ನೀಡಲು ಜಲ ವಿದ್ಯುತ್ ಯೋಜನೆಗಾಗಿ ಈ ಭಾಗದ ಜನರು ತಮ್ಮ ಬದುಕನ್ನು ತ್ಯಾಗ ಮಾಡಿದ್ದಾರೆ. ಅವರಿಗಾಗಿ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಇದರ ಜೊತೆಗೆ ಸಿಗಂದೂರು ಕ್ಷೇತ್ರಕ್ಕೆ ಬರುವ ಅಪಾರ ಸಂಖ್ಯೆಯ ಭಕ್ತರಿಗೂ ಸೇತುವೆಯಿಂದ ಅನುಕೂಲವಾಗಲಿದೆ" ಎಂದು ರಾಘವೇಂದ್ರ ತಿಳಿಸಿದರು.
"ಈ ಸೇತುವೆ ವಿಶಿಷ್ಟ ವಿನ್ಯಾಸ ಹೊಂದಿದ್ದು, ಕಾಮಗಾರಿ ಭರದಿಂದ ಸಾಗಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲು ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಇರುವ ಸಂಪರ್ಕದ ದೂರವನ್ನು ಕಡಿಮೆ ಮಾಡುವುದು ಕೂಡ ಪ್ರಮುಖ ಸಂಗತಿಯಾಗಿದೆ" ಎಂದು ಸಂಸದರು ವಿವರಿಸಿದರು.
ರಾಷ್ಟ್ರೀಯ ಹೆದ್ದಾರಿ 369ಇ ನಲ್ಲಿ ಕಳಸವಳ್ಳಿ-ಅಂಬಾರಗೋಡ್ಲು ನಡುವೆ ಈ ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಸಿಗಂದೂರು ಕ್ಷೇತ್ರಕ್ಕೆ ಲಾಂಚ್ನಲ್ಲಿ ಹೋಗುವ ಭಕ್ತರು ಸೇತುವೆ ನಿರ್ಮಾಣದ ಕಾಮಗಾರಿಯನ್ನು ಕಾಣಬಹುದು. ಶರಾವತಿ ಹಿನ್ನೀರು ಭಾರೀ ಪ್ರಮಾಣದಲ್ಲಿ ಕುಸಿದ ಪರಿಣಾಮ ಕಾಮಗಾರಿ ಸ್ವಲ್ಪ ವಿಳಂಬವಾಗಿತ್ತು. ಈಗ ಮತ್ತೆ ಕಾಮಗಾರಿ ಚುರುಕು ಪಡೆದುಕೊಂಡಿದೆ.
ಲಿಂಗನಮಕ್ಕಿ ಜಲಾಶಯದ ಶರಾವತಿ ನದಿಯ ಹಿನ್ನೀರಿನಲ್ಲಿಯೇ ಈ ಸೇತುವೆಯನ್ನು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನಿರ್ಮಾಣ ಮಾಡಲಾಗುತ್ತಿದೆ. ಈ ಸೇತುವೆ ಪೂರ್ಣಗೊಂಡ ಬಳಿಕ ಇದು ರಾಜ್ಯದ 2ನೇ ಅತಿ ದೊಡ್ಡ ಸೇತುವೆ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ. ವಿನೂತನ ಕೇಬಲ್ ಮಾದರಿಯ ಸೇತುವೆ ಇದಾಗಿದ್ದು, ವಿನ್ಯಾಸ ಈಗಾಗಲೇ ಜನರ ಗಮನ ಸೆಳೆಯುತ್ತಿದೆ.
ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಸೇತುವೆ ನಿರ್ಮಾಣ ಜನರ ದಶಕಗಳ ಕನಸಾಗಿತ್ತು. ಜನರು ಸಹ ಈ ಸೇತುವೆ ನಿರ್ಮಾಣವಾಗುವುದಿಲ್ಲ ಎಂದೇ ಭಾವಿಸಿದ್ದರು. ಆದರೆ ಬಿ. ಎಸ್. ಯಡಿಯೂರಪ್ಪ ಸೇತುವೆ ನಿರ್ಮಾಣದ ಕುರಿತು ಆಸಕ್ತಿ ವಹಿಸಿದರು. ಸಂಸದ ಬಿ. ವೈ. ರಾಘವೇಂದ್ರ ಕೇಂದ್ರದಿಂದ ಅಗತ್ಯ ಅನುದಾನ ತಂದರು. ಸ್ವತಃ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸೇತುವೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದರು.












Click it and Unblock the Notifications