ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಮನೆ, ಅಂಗಡಿಗಳಿಗೆ ನುಗ್ಗಿದ ಮಳೆ ನೀರು
ಶಿವಮೊಗ್ಗ, ಆಗಸ್ಟ್, 04: ನಗರದಲ್ಲಿ ಭಾರಿ ಮಳೆ ಸುರಿದ ಕಾರಣ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದ್ದಾರೆ. ಮತ್ತೊಂದೆಡೆ ರಸ್ತೆಗಳೆಲ್ಲ ಕೆರೆಯಂತಾಗಿ ವಾಹನ ಸವಾರರು ಕಂಗಾಲಾಗಿದ್ದಾರೆ.
ಶಿವಮೊಗ್ಗದ ಬೈಪಾಸ್ ರಸ್ತೆ, ಊರುಗಡೂರು, ಸೂಳೆಬೈಲು ಸುತ್ತಮುತ್ತ ವರುಣ ಅಬ್ಬರಿಸಿದ್ದಾನೆ. ಚರಂಡಿಗಳ ನೀರು ರಸ್ತೆ ಮೇಲೆ ಹರಿಯುತ್ತಿದೆ. ಚರಂಡಿಗಳ ಅಕ್ಕಪಕ್ಕದ ಮನೆಗಳು, ಕಟ್ಟಡಗಳಿಗೂ ಮಳೆ ನೀರು ನುಗ್ಗಿ ಜನರು ಆತಂಕಕ್ಕೀಡಾಗಿದ್ದಾರೆ. ಆರ್.ಎಂ.ಎಲ್ ನಗರದಲ್ಲೂ ವಿವಿಧೆಡೆ ಮಳೆ ನೀರು ಮನೆ, ಮಳಿಗೆಗಳಿಗೆ ನುಗ್ಗಿದೆ. ಅಲ್ಲಿನ ಜನರು ಮಳೆ ನೀರನ್ನು ಹೊರಗೆ ಹಾಕಲು ಹರಸಾಹಸ ಪಟ್ಟರು. ಅಂಗಡಿ, ಮಳಿಗೆಗಳಲ್ಲಿದ್ದ ವಸ್ತುಗಳೆಲ್ಲ ನೀರುಪಾಲಾಗಿ ವ್ಯಾಪಾರಸ್ಥರು ಬೀದಿಗೆ ಬಿದ್ದಿದ್ದಾರೆ.
ಇನ್ನು ಎನ್.ಟಿ.ರಸ್ತೆಯಲ್ಲಿಯೂ ಮಳಿಗೆಗಳಿಗೆ ನೀರು ನುಗ್ಗಿ ಅಲ್ಲಿನ ವ್ಯಾಪರಸ್ಥರು ತಲ್ಲಣಗೊಂಡಿದ್ದಾರೆ. ಕಟ್ಟಡಗಳ ನೆಲ ಅಂತಸ್ತಿನ ಅಂಗಡಿಗಳಲ್ಲಿ ಮೂರ್ನಾಲ್ಕು ಅಡಿಯಷ್ಟು ನೀರು ತುಂಬಿಕೊಂಡಿದೆ. ಭಾರೀ ಮಳೆಯಿಂದಾಗಿ ಶಿವಮೊಗ್ಗ ನಗರದ ತಗ್ಗು ಪ್ರದೇಶಗಳಲ್ಲಿನ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ಇನ್ನು ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಭಾರೀ ಮಳೆಗೆ ಭದ್ರಾವತಿಯ ಬೈಪಾಸ್ ರಸ್ತೆಯೂ ನೀರಿನಿಂದ ಮುಚ್ಚಿಹೋಗಿದೆ. ಬಿಳಕಿ ಕ್ರಾಸ್ ಬಳಿ ರಸ್ತೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ.
ಬಿಳಕಿ ಕ್ರಾಸ್ನಲ್ಲಿ ರಸ್ತೆ ಜಲಾವೃತ ಆಗಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಭದ್ರಾವತಿ ನಗರದಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಚರಂಡಿಗಳು ತುಂಬಿ, ರಸ್ತೆ ಮೇಲೆ ಹರಿಯುತ್ತಿವೆ. ತಗ್ಗು ಪ್ರದೇಶದ ಮನೆಗಳು, ಮಳಿಗೆಗಳಿಗೆ ನೀರು ನುಗ್ಗಿ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಮಲೆನಾಡು ಪ್ರದೇಶವಾದ ಶಿವಮೊಗ್ಗದಲ್ಲಿ ಮಳೆರಾಯನ ಆರ್ಭಟ ಸರ್ವೇ ಸಾಮಾನ್ಯ. ಅಲ್ಲಿನ ಸುತ್ತಮುತ್ತಲಿನ ಜನರು ಮಳೆಗಾಲ ಬಂತೆಂದರೆ ಸಾಕು ಆತಂಕಕ್ಕೊಳಗಾಗಿ ಬಿಡುತ್ತಾರೆ. ಅದರಲ್ಲೂ ಇಂತಹ ಪರಿಸ್ಥಿತಿಯಲ್ಲಿ ನದಿ ತೀರದ ಪ್ರದೇಶಗಳಲ್ಲಿರುವ ಜನರಂತೂ ಜೀವವವನ್ನು ಕೈಯಲ್ಲಿ ಹಿಡಿದು ಜೀವನ ನಡೆಸುತ್ತಾರೆ.
ಈಗಾಗಲೇ ನದಿ ಪ್ರದೇಶಗಳ ಜನರಿಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜನರು ಭಯಭೀತರಾಗಿದ್ದಾರೆ. ಪ್ರವಾಹದಂತಹ ಮಳೆ ಸುರಿಯುತ್ತಿರುವುದರಿಂದ ಯಾವಾಗ ಏನು ಆಗುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅದಕ್ಕಾಗಿಯೇ ನದಿ ತೀರದ ಪ್ರದೇಶಗಳ ಜನರಿಗೆ ಹವಾಮಾನ ಇಲಾಖೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಶಿವಮೊಗ್ಗದಲ್ಲಿ ಈಗಾಗಲೇ ಹಲವು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.