ತಾಳಗುಪ್ಪ-ಹೊನ್ನಾವರ ಹೊಸ ರೈಲು ಮಾರ್ಗ, ಅಪ್ಡೇಟ್
ಶಿವಮೊಗ್ಗ, ಮಾರ್ಚ್ 22: ಉತ್ತರ ಕನ್ನಡ ಮತ್ತು ಶಿವಮೊಗ್ಗವನ್ನು ಬೆಸೆಯುವ ಮಹತ್ವದ ರೈಲು ಯೋಜನೆಯ ಬಗ್ಗೆ ಸಮೀಕ್ಷೆ ನಡೆಸಲು ಹಣ ಮಂಜೂರು ಮಾಡಲಾಗಿದೆ. ದಶಕಗಳ ಕಾಲದ ಬೇಡಿಕೆ ಇದಾಗಿದ್ದು, ಈ ಯೋಜನೆ ಜಾರಿಯಾದರೆ ಎರಡೂ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. 20212ರಲ್ಲಿಯೇ ಈ ಯೋಜನೆ ಜಾರಿಗೊಳಿಸುವ ಭರವಸೆಯನ್ನು ಅಂದಿನ ರೈಲ್ವೆ ಖಾತೆ ರಾಜ್ಯ ಸಚಿವರ ಕೆ. ಎಚ್. ಮುನಿಯಪ್ಪ ನೀಡಿದ್ದರು.
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕುರಿತು ಮಾಹಿತಿ ನೀಡಿದ್ದಾರೆ. ತಾಳಗುಪ್ಪ-ಹೊನ್ನಾವರ ರೈಲು ಸಂಪರ್ಕ ಯೋಜನೆಯ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಲು ರೈಲ್ವೆ ಇಲಾಖೆ ಅನುದಾನ ಮಂಜೂರು ಮಾಡಿದೆ ಎಂದು ಹೇಳಿದ್ದಾರೆ. ಅರಣ್ಯದಲ್ಲಿ ಈ ಯೋಜನೆ ಹಾದು ಹೋಗುವ ಕಾರಣ ಹಲವಾರು ವರ್ಷಗಳಿಂದ ಚರ್ಚೆಯ ಹಂತದಲ್ಲಿದೆ.

ತಾಳಗುಪ್ಪ ಶಿವಮೊಗ್ಗ ಜಿಲ್ಲೆಯ ಕೊನೆಯ ರೈಲು ನಿಲ್ದಾಣ. ಮೈಸೂರು, ಬೆಂಗಳೂರು ನಗರಿಂದ ಇಲ್ಲಿಗೆ ರೈಲು ಸೇವೆ ಇದೆ. ಉತ್ತರ ಕನ್ನಡ ಜಿಲ್ಲೆಗೆ ಸಂಚಾರ ನಡೆಸುವ ಜನರು ತಾಳಗುಪ್ಪ ತನಕ ರೈಲಿನಲ್ಲಿ ಬಂದು, ಮುಂದೆ ಬಸ್, ಖಾಸಗಿ ವಾಹನದ ಮೂಲಕ ಸಂಚಾರವನ್ನು ನಡೆಸಬೇಕಿದೆ. ಆದರೆ ಈಗ ತಾಳಗುಪ್ಪದಿಂದ ಮುಂದಕ್ಕೂ ರೈಲು ಸಂಪರ್ಕ ಕಲ್ಪಿಸುವ ಕುರಿತು ಚರ್ಚೆಗಳು ಆರಂಭವಾಗಿದೆ.
ತಾಳಗುಪ್ಪದಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲಕ ಹುಬ್ಬಳ್ಳಿಗೆ ರೈಲು ಮಾರ್ಗ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆಯೂ ಇದೆ. ಈ ವರ್ಷದ ಜನವರಿಯಲ್ಲಿ ನೈಋತ್ಯ ರೈಲ್ವೆ ಹೈದ್ರಾಬಾದ್ ಮೂಲದ ಕಂಪನಿಗೆ ಟೆಂಡರ್ ಒಂದನ್ನು ನೀಡಿದ್ದು, ಈ ಮಾರ್ಗದ ಸರ್ವೆಕಾರ್ಯ ನಡೆಸಿ, ಒಂದು ವರ್ಷದ ಅವಧಿ ಒಳಗೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ವರದಿ ನೀಡಬೇಕೆಂದು ಸೂಚಿಸಿದೆ.
2012ರಲ್ಲಿ ಭರವಸೆ: 2012ರಲ್ಲಿಯೂ ತಾಳಗುಪ್ಪ-ಹೊನ್ನಾವರ ರೈಲು ಯೋಜನೆ ಕುರಿತು ಚರ್ಚೆಗಳು ನಡೆದಿದ್ದವು. ಆಗ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೆ. ಎಚ್. ಮುನಿಯಪ್ಪ, "ಈ ರೈಲು ಯೋಜನೆ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ" ಎಂದು ಭರವಸೆ ನೀಡಿದ್ದರು.
"ರಾಜ್ಯ ಸರ್ಕಾರದ ಬೇಡಿಕೆಯಂತೆ ತಾಳಗುಪ್ಪ-ಹೊನ್ನಾವರ ರೈಲು ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಹಣಕಾಸಿನ ಪಾಲುದಾರಿಕೆ ವಹಿಸುವುದಾದರೆ ಯೋಜನೆ ಕುರಿತು ಪ್ರಧಾನಿಗಳ ಜೊತೆ ಚರ್ಚಿಸುತ್ತೇನೆ. ಈ ಉದ್ದೇಶಿತ ಯೋಜನೆಗೆ ಮಲೆನಾಡಿನ ಸುಮಾರು 1 ಸಾವಿರ ಎಕರೆ ದಟ್ಟಾರಣ್ಯ ಸಿಗಲಿದೆ. 60 ಕಿ. ಮೀ. ಸುರಂಗ ಮಾರ್ಗ ನಿರ್ಮಾಣವಾಗಬೇಕು ಎಂದು ಅಂದಾಜಿಸಲಾಗಿದೆ. ಸುಮಾರು 4 ಸಾವಿರ ಕೋಟಿ ರೂ. ಯೋಜನೆಗೆ ಬೇಕು ಎಂದು ಅಂದಾಜಿಸಲಾಗಿದೆ" ಎಂದು ಕೆ. ಎಚ್. ಮುನಿಯಪ್ಪ ಯೋಜನೆ ಬಗ್ಗೆ ವಿವರಿಸಿದ್ದರು.
ಆದರೆ ಬಳಿಕ ಯೋಜನೆ ಕುರಿತು ಯಾವುದೇ ಪ್ರಗತಿ ಕಂಡುಬರಲಿಲ್ಲ. 2016-17ನೇ ಸಾಲಿನ ಬಜೆಟ್ನಲ್ಲಿ ತಾಳಗುಪ್ಪ-ಹೊನ್ನಾವರ ಹೊಸ ರೈಲು ಮಾರ್ಗದ ಸಮೀಕ್ಷೆಯನ್ನು ಪ್ರಸ್ತಾಪಿಸಲಾಗಿತ್ತು. ಸುಮಾರು 82.15 ಕಿ. ಮೀ. ರೈಲು ಮಾರ್ಗ ಇದಾಗಿದ್ದು, 2025ರಲ್ಲಿ ಮತ್ತೆ ಯೋಜನೆ ಕುರಿತು ಚರ್ಚೆಗಳು ಆರಂಭವಾಗಿದೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಾಳಗುಪ್ಪ-ಹೊನ್ನಾವರ ಮತ್ತು ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೆ ಯೋಜನೆ ಅಂತಿಮ ಸಮೀಕ್ಷೆಗಾಗಿ ಮಾರ್ಚ್ 19ರಂದು ರೈಲ್ವೆ ಇಲಾಖೆ 23.90 ಕೋಟಿ ರೂ.ಗಳನ್ನು ನೀಡಿದೆ. ಪ್ರವಾಸೋದ್ಯಮ, ವಾಣಿಜ್ಯ ಚಟುವಟಿಕೆಗಳಿಗೆ ಈ ರೈಲು ಮಾರ್ಗಗಳು ಸಹಕಾರಿಯಾಗಿವೆ ಎಂದು ಸಂಸದರು ಹೇಳಿದ್ದಾರೆ.
ತಾಳಗುಪ್ಪ-ಹೊನ್ನಾವರ ನೂತನ ರೈಲು ಮಾರ್ಗದ ಪ್ರಾಥಮಿಕ ಸಮೀಕ್ಷೆ ಮುಗಿದಿದೆ. ಅಂತಿಮ ಹಂತದ ಸಮೀಕ್ಷೆಯಲ್ಲಿ ನಿಖರವಾದ ಮಾರ್ಗ, ಭೂ ಪ್ರದೇಶಗಳು, ಪರಿಸರದ ಮೇಲೆ ಉಂಟಾಗುವ ಪ್ರಭಾವ, ಆರ್ಥಿಕ ದೃಷ್ಟಿಯಿಂದ ಯೋಜನೆಯ ಜಾರಿ ಮುಂತಾದವುಗಳ ಕುರಿತು ಮಾಹಿತಿ ಸಂಗ್ರಹಿಸಿ ವರದಿ ತಯಾರಿಸಲಾಗುತ್ತದೆ.
ಅಂತಿಮ ಹಂತದ ಸಮೀಕ್ಷೆಯನ್ನು ನಡೆಸಿ ರೈಲ್ವೆ ಮಂಡಳಿಗೆ ವರದಿ ಸಲ್ಲಿಕೆ ಮಾಡಲಾಗುತ್ತದೆ. ವರದಿಯನ್ನು ಪರಿಶೀಲನೆ ಮಾಡಿದ ಬಳಿಕ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದರೆ ತಾಳಗುಪ್ಪ-ಹೊನ್ನಾವರ ರೈಲು ಮಾರ್ಗದ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಾಗಲಿದೆ.
ಈಗಾಗಲೇ ರೈಲ್ವೆ ಮಂಡಳಿ ಮಲೆನಾಡು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ಈ ವರ್ಷದ ಜನವರಿ 16ರಂದು ಅನುಮೋದನೆ ನೀಡಿದೆ. ಹೊಸ ರೈಲು ಮಾರ್ಗ 167 ಕಿ. ಮೀ. ಎಂದು ಅಂದಾಜಿಸಲಾಗಿದ್ದು, ಇದು ಸಹ ಶಿವಮೊಗ್ಗ ಜಿಲ್ಲೆಯನ್ನು ಉತ್ತರ ಕನ್ನಡದ ಶಿರಸಿಗೆ ಸಂಪರ್ಕ ಕಲ್ಪಿಸುತ್ತದೆ.












Click it and Unblock the Notifications