ತಾಳಗುಪ್ಪ ರೈಲು ನಿಲ್ದಾಣದಲ್ಲಿ ಪಾರ್ಸೆಲ್ ಸೇವಾ ಕೇಂದ್ರ
ಶಿವಮೊಗ್ಗ, ಫೆಬ್ರವರಿ 14; ನೈಋತ್ಯ ರೈಲ್ವೆ ಶಿವಮೊಗ್ಗ ಜಿಲ್ಲೆಯ ಜನರಿಗೆ ಸಿಹಿ ಸುದ್ದಿ ನೀಡಿದೆ. ತಾಳಗುಪ್ಪ ರೈಲು ನಿಲ್ದಾಣದಲ್ಲಿ ಶೀಘ್ರದಲ್ಲೇ ಪಾರ್ಸೆಲ್ ಸೇವಾ ಕೇಂದ್ರ ಆರಂಭವಾಗಲಿದೆ. ಈ ಕುರಿತು ಅಧಿಕೃತ ಆದೇಶ ಸಹ ಹೊರಡಿಸಲಾಗಿದೆ.
ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಜನವರಿ ತಿಂಗಳಿನಲ್ಲಿ ಸಾಗರ, ತಾಳಗುಪ್ಪ ರೈಲು ನಿಲ್ದಾಣದ ಪರಿಶೀಲನೆ ನಡೆಸಿದ್ದರು. ಆ ಸಂದರ್ಭದಲ್ಲಿ ರೈಲ್ವೆ ಹೋರಾಟ ತಾಳಗುಪ್ಪದಲ್ಲಿ ಪಾರ್ಸೆಲ್ ಸೇವಾ ಕೇಂದ್ರ ಆರಂಭಿಸುವಂತೆ ಮನವಿ ಮಾಡಿತ್ತು.
ಫೆಬ್ರವರಿ 9ರಂದು ರೈಲ್ವೆ ಪಾರ್ಸೆಲ್ ಕೇಂದ್ರ ಆರಂಭಿಸುವ ಕುರಿತು ಆದೇಶ ಹೊರಡಿಸಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಸೇವಾ ಕೇಂದ್ರ ಕಾರ್ಯಾರಂಭ ಮಾಡಲಿದೆ. ಇದರಿಂದ ಸರಕು ಸಾಗಣೆಗೆ ಅನುಕೂಲವಾಗಲಿದೆ.

ಮೊದಲು ತಾಳಗುಪ್ಪ ರೈಲು ನಿಲ್ದಾಣದಲ್ಲಿ ಪಾರ್ಸೆಲ್ ಸೇವಾ ಕೇಂದ್ರವಿತ್ತು. ನಂತರ ಅದನ್ನು ಮುಚ್ಚಲಾಗಿತ್ತು. ಈಗ ಬೇಡಿಕೆಯಂತೆ ಪುನಃ ಪಾರ್ಸೆಲ್ ಕೇಂದ್ರ ಆರಂಭವಾಗಲಿದೆ. ತಾಳಗುಪ್ಪ ಕಟ್ಟಕಡೆಯ ನಿಲ್ದಾಣವಾಗಿದ್ದು, ಪಾರ್ಸೆಲ್ಗಳನ್ನು ರೈಲಿಗೆ ತುಂಬಲು ಸಹಾಯಕವಾಗಿದೆ.
ಪಾರ್ಸೆಲ್ ಕೇಂದ್ರ ಆರಂಭವಾದರೆ ಕೃಷಿ ಉತ್ಪನ್ನಗಳನ್ನು ಕಳಿಸಲು, ಬೆಂಗಳೂರು, ಮೈಸೂರು ನಗರಗಳಿಗೆ ಬೈಕ್ ಕಳಿಸಲು, ತರಿಸಿಕೊಳ್ಳಲು ಸಹಾಯಕವಾಗಲಿದೆ. ಖಾಸಗಿ ಬಸ್ ಮೂಲಕ ಪಾರ್ಸೆಲ್ ಕಳಿಸಿದರೆ ದುಬಾರಿ ಶುಲ್ಕವನ್ನು ಕಟ್ಟಬೇಕಿದೆ.
ತಾಳಗುಪ್ಪ ರೈಲು ನಿಲ್ದಾಣದಿಂದ ಬೆಂಗಳೂರು ಮತ್ತು ಮೈಸೂರಿಗೆ ರೈಲು ಸಂಚಾರ ನಡೆಸುತ್ತದೆ. ಬೆಂಗಳೂರು ಮತ್ತು ಮೈಸೂರಿನಿಂದ ಬರುವ ರೈಲುಗಳಿಗೆ ತಾಳಗುಪ್ಪ ಕೊನೆಯ ನಿಲ್ದಾಣವಾಗಿದೆ.












Click it and Unblock the Notifications