ಶಿವಮೊಗ್ಗದ 40 ಎಕರೆ ಪ್ರದೇಶದಲ್ಲಿ ಸಸಿ ನೆಡಲು ಸಿದ್ಧತೆ: ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ, ಆಗಸ್ಟ್ 18: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 11 ಕಡೆ ಒಟ್ಟು 40 ಎಕರೆ ಪ್ರದೇಶದಲ್ಲಿ ಸಸಿಗಳನ್ನು ನೆಡಲು ಸ್ಥಳ ಗುರುತಿಸಲಾಗಿದ್ದು, ಇದಕ್ಕೆ ಅಗತ್ಯ ಸಿದ್ಧತೆಗಳನ್ನು ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ಅರಣ್ಯೀಕರಣಕ್ಕೆ ಪ್ರಸಿದ್ಧ ಮಾದರಿಯಾಗಿರುವ ಮಿಯಾವಕಿ ಮಾದರಿಯನ್ನು ಕೆಲವು ಕಡೆಗಳಲ್ಲಿ ಅನುಷ್ಟಾನಗೊಳಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಜಪಾನಿನ ಮಿಯಾವಕಿ ಮಾದರಿಯಲ್ಲಿ ಅತಿ ಕಡಿಮೆ ಸ್ಥಳದಲ್ಲಿ ದಟ್ಟ ಅರಣ್ಯವನ್ನು ಬಹಳ ಬೇಗನೆ ಬೆಳೆಸಬಹುದಾಗಿದೆ. ಇದರ ಸಾಧ್ಯತೆಯನ್ನು ಪರಿಶೀಲಿಸುವಂತೆ ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರ ಹಸಿರೀಕರಣಕ್ಕೆ 3.81 ಕೋಟಿ ರೂ. ನಿಗದಿಪಡಿಸಲಾಗಿದೆ. ಸಸಿಗಳ ನೆಡುವುದು ಹಾಗೂ ಐದು ವರ್ಷಗಳ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ಆದಷ್ಟು ಬೇಗನೆ ಆರಂಭಿಸಬೇಕು. ಶಿವಮೊಗ್ಗ ನಗರದಲ್ಲಿ ಕನಿಷ್ಟ 7 ಸಾವಿರ ಸಸಿಗಳನ್ನು ನೆಡುವ ಯೋಜನೆ ಇದಾಗಿದ್ದು, ಶಿವಮೊಗ್ಗ ನಗರದ ಹಸಿರೀಕರಣದಲ್ಲಿ ಮಹತ್ವದ ಹೆಜ್ಜೆ ಇದಾಗಲಿದೆ ಎಂದರು.

ಹೂವಿನ ಮರಗಳು, ಗಿಡಗಳು, ಅರಳಿ, ಬೇವು, ರಂಜಲು, ಬನ್ನಿ, ಬಿಲ್ವಪತ್ರೆ, ಮದ್ದಾಲೆ, ಔಷಧಿ ಗಿಡಗಳು, ಅತ್ತಿ, ಸಿಹಿ ಹುಣಸೆ, ಹೊಳೆ ಮತ್ತಿ, ತಾರೆ, ಹೆಬ್ಬಿದಿರು, ಕಿರುಬಿದಿರು, ಪೈಕಸ್ ಮರಗಳು, ಮಿಯಾವಕಿ ಮಾದರಿ ಅರಣ್ಯಕ್ಕೆ ಪೂರಕವಾದ ಸಸಿಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್, ಯೋಜನಾ ನಿರ್ದೇಶಕ ನಾಗೇಂದ್ರ ಹೊನ್ನಳ್ಳಿ ಸೇರಿದಂತೆ ಅಧಿಕಾರಿಗಳು ಹಾಗೂ ಪರಿಸರಾಸಕ್ತರು ಇದ್ದರು.












Click it and Unblock the Notifications