ರೌಡಿಸಂ, ಡ್ರಗ್ಸ್ ಮತ್ತು ಸೈಬರ್ ಕ್ರೈಂ ನಿಯಂತ್ರಣಕ್ಕೆ ಪ್ಲಾನ್: ಗೃಹ ಸಚಿವ
ಶಿವಮೊಗ್ಗ, ಆಗಸ್ಟ್ 21: ಸೈಬರ್ ಅಪರಾಧ, ರೌಡಿಸಂ, ಮಾದಕ ವಸ್ತುಗಳು, ರಿಯಲ್ ಎಸ್ಟೇಟ್ ದಂಧೆಕೋರರಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ. ಈ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಲಾಗಿದೆ.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, "ಸೈಬರ್ ಕ್ರೈಂ ನಿಯಂತ್ರಣ ವಿಭಾಗವನ್ನು ಬಲಪಡಿಸಲಾಗುತ್ತಿದೆ. ಅತ್ಯಾಧುನಿಕ ತಂತ್ರಾಂಶಗಳು, ಸಾಧನಗಳನ್ನು ಅಳವಡಿಸಿಕೊಳ್ಳಲಾಗಿದೆ," ಎಂದು ಹೇಳಿದರು.
ಇನ್ಫೋಸಿಸ್ ಸಂಸ್ಥೆಯ ನೆರವು
"ರಾಜ್ಯದ ಪೊಲೀಸರಿಗೆ ಸೈಬರ್ ಕ್ರೈಂ ನಿಗ್ರಹಕ್ಕೆ ಇನ್ಫೋಸಿಸ್ ಸಂಸ್ಥೆ ನೆರವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಸೈಬರ್ ಕ್ರೈಂ ಕಡಿವಾಣ ಹಾಕುವ ಸಂಬಂಧ ರಾಜ್ಯದ ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ. ಹೊರ ರಾಜ್ಯದ ಪೊಲೀಸರು ಇಲ್ಲಿ ಬಂದು ತರಬೇತಿ ಪಡೆದುಕೊಳ್ಳುತ್ತಿದ್ದಾರೆ," ಎಂದು ತಿಳಿಸಿದರು.

ರೌಡಿಸಂ, ರಿಯಲ್ ಎಸ್ಟೇಟ್, ಮಾದಕ ವಸ್ತು
"ಬೆಂಗಳೂರಿನಲ್ಲಿ ರೌಡಿಸಂ ಮಟ್ಟಹಾಕಲು ಪೊಲೀಸರಿಗೆ ಖಡಕ್ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಹಗಲು, ರಾತ್ರಿ ಕೆಲಸ ಮಾಡುತ್ತಿದ್ದಾರೆ. ರೌಡಿಗಳ ಮನೆಗಳಿಗೆ ರೇಡ್ ಮಾಡಲಾಗಿದೆ. ಆದರೂ ಕೆಲವರು ಅಲ್ಲಲ್ಲಿ ಕೃತ್ಯ ಎಸಗುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ," ಎಂದರು.
"ಅಲ್ಲದೆ ಮಾದಕ ವಸ್ತು ಜಾಲ ಭೇದಿಸಲು ಯೋಜಿಸಲಾಗಿದೆ. ಇನ್ನು, ಯಾರದ್ದೋ ಸೈಟಿಗೆ ಬೇಲಿ ಹಾಕಿ ಸಮಸ್ಯೆ ಉಂಟು ಮಾಡುತ್ತಿರುವ ರಿಯಲ್ ಎಸ್ಟೇಟ್ ದಂಧೆಕೋರರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ," ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಅಫ್ಘಾನ್ನಲ್ಲಿರುವ ಕನ್ನಡಿಗರಿಗೆ ನೆರವು
"ಇನ್ನು ತಾಲಿಬಾನ್ ಹಿಡಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಈ ಜವಾಬ್ದಾರಿ ವಹಿಸಿಕೊಂಡಿದೆ. ಕೇಂದ್ರದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಸಿಒಡಿಯ ಪ್ರಮುಖ ಅಧಿಕಾರಿ ಉಮೇಶ್ರನ್ನು ನೇಮಿಸಿದ್ದೇವೆ. ಈ ಹಿಂದೆ ಕೂಡ ಹಲವು ದೇಶದಲ್ಲಿ ಅವರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ತೀರ್ಥಹಳ್ಳಿ ಮೂಲದ ಪಾದ್ರಿ ಸೇರಿದಂತೆ ಎಲ್ಲರನ್ನು ರಕ್ಷಿಸುತ್ತೇವೆ," ಎಂದು ತಿಳಿಸಿದರು.
11 ಕೋಟಿ ರೂ. ಮೌಲ್ಯದ ಕೊಕೇನ್ ವಶ
ಮಾದಕ ವಸ್ತು ಕಳ್ಳ ಸಾಗಣೆ ಮಾಡುತ್ತಿದ್ದ ವಿದೇಶಿ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಆಫ್ರಿಕಾ ಮೂಲದ ಪ್ರಜೆ ಎಂದು ಗುರುತಿಸಲಾಗಿದ್ದು, ಈತ ಸುಮಾರು 1.3 ಕೆ.ಜಿ. ಕೊಕೇನ್ ಮಾತ್ರೆಗಳನ್ನು ಸಾಗಟ ಮಾಡಲು ಯತ್ನಿಸಿದ್ದಾನೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೆಂಗಳೂರು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ತಂಡವು ಮಾದಕ ವಸ್ತು ಕಳ್ಳ ಸಾಗಣೆದಾರನಿಗಾಗಿ ಬಲೆ ಬೀಸಿದ್ದರು. ಅದರಂತೆ ಸುಮಾರು 11 ಕೋಟಿ ರೂ. ಮೌಲ್ಯದ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
Recommended Video
"ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶದಿಂದ ಕೊಕೇನ್ ಸಾಗಾಟ ಮಾಡುತ್ತಿರುವ ಸುಳಿವೊಂದು ಡಿಆರ್ಐಗೆ ಲಭಿಸಿತ್ತು. ಹೀಗಾಗಿ ಪಶ್ಚಿಮ ಏಷ್ಯಾದಿಂದ ಬಂದ ವಿಮಾನದಲ್ಲಿ ಪ್ರಯಾಣಿಕರ ವಿವರಗಳನ್ನು ಪಡೆದು ಪರಿಶೀಲಿಸಲಾಗಿತ್ತು. ಇದೇ ವೇಳೆ ಮೂತ್ರಪಿಂಡದ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿರುವುದಾಗಿ 30 ವರ್ಷದ ವ್ಯಕ್ತಿಯೊಬ್ಬ ವೈದ್ಯಕೀಯ ಉದ್ದೇಶಗಳಿಗಾಗಿ ವೀಸಾ ಪಡೆದಿದ್ದನು."
"ಆತನನ್ನು ತಡೆದು ವಿಚಾರಣೆ ನಡೆಸಲಾಯಿತು. ಈ ವೇಳೆ ಆತನ ನಡುವಳಿಕೆ ಸಂಶಯಕ್ಕೆ ಕಾರಣವಾಗಿತ್ತು. ಆದರೆ ಯಾವುದೇ ರೀತಿಯಲ್ಲೂ ಪರಿಶೀಲಿಸಿದರೂ ಆತನ ಬಳಿ ಮಾದಕ ವಸ್ತುಗಳು ಕಂಡು ಬಂದಿರಲಿಲ್ಲ. ಇದಾಗ್ಯೂ ಸಂಶಯದ ಆಧಾರದ ಮೇಲೆ ಆತನನ್ನು ವೈದ್ಯಕೀಯ ಸ್ಕ್ಯಾನ್ಗಾಗಿ ಕರೆದೊಯ್ದಿದ್ದಾರೆ. ಈ ವೇಳೆ ಆತನ ಹೊಟ್ಟೆಯಲ್ಲಿ ಕೊಕೇನ್ ಮಾತ್ರೆಗಳಿರುವುದು ಕಂಡು ಬಂದಿದೆ," ಎಂದು ಡಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications