ಸಾಗರದಲ್ಲಿ ಯುವಕನಿಗೆ ಜ್ವರ: ನಿಪಾಹ್ ಭೀತಿ
ಶಿವಮೊಗ್ಗ, ಮೇ 24: ರಾಜ್ಯದ ಕೆಲವು ಗಡಿಭಾಗಗಳಲ್ಲಿ ಕಾಣಿಸಿಕೊಂಡಿದ್ದ ನಿಪಾಹ್ ವೈರಸ್ ಭೀತಿ ಈಗ ಮಲೆನಾಡಿಗೂ ಆವರಿಸಿದೆ.
ಸಾಗರ ತಾಲ್ಲೂಕಿನ ಶಿರವಂತೆ ಗ್ರಾಮದ ಯುವಕ ಮಿಥುನ್ ಅವರು ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಅವರಿಗೆ ನಿಪಾಹ್ ವೈರಸ್ ತಗಲಿರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಮಿಥುನ್ ಅವರ ರಕ್ತದ ಮಾದರಿಯನ್ನು ಪಡೆದುಕೊಂಡು ಪರೀಕ್ಷೆಗಾಗಿ ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮಿಥುನ್ ಅವರು ಕೆಲವು ದಿನಗಳ ಹಿಂದಷ್ಟೇ ಕೇರಳಕ್ಕೆ ಪ್ರವಾಸಕ್ಕೆ ಹೋಗಿ ಬಂದಿದ್ದರು ಎನ್ನಲಾಗಿದೆ. ಅವರಿಗೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರೂ, ದಾಖಲಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ತಾಲ್ಲೂಕಿನ ಮರತ್ತೂರು ಗ್ರಾಮದ ಬಾವಿಯಲ್ಲಿ ಸತ್ತು ಬಿದ್ದಿರುವ ಎರಡು ಬಾವಲಿಗಳು ಪತ್ತೆಯಾಗಿರುವುದರಿಂದ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದೆ. ಇಬ್ಬರು ಸ್ಥಳೀಯ ನಿವಾಸಿಗಳ ರಕ್ತದ ಮಾದರಿಯನ್ನು ಸಹ ಪುಣೆಗೆ ರವಾನಿಸಲಾಗಿದೆ.
ಫ್ರೂಟ್ ಬ್ಯಾಟ್ಸ್ ಎಂಬ ಬಾವಲಿಗಳಿಂದ ಹರಡುವ ಈ ವೈರಸ್ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಕಂಡುಬರುತ್ತಿದೆ. ಈ ರೋಗಕ್ಕೆ ಇದುವರೆಗೂ ಯಾವುದೇ ರೀತಿಯ ಪರಿಣಾಮಕಾರಿ ಚಿಕಿತ್ಸೆ ಕಂಡುಹಿಡಿಯಲು ಸಾಧ್ಯವಾಗಿಲ್ಲ.












Click it and Unblock the Notifications