ಮಂಜುನಾಥ ಗೌಡರಿಗೆ ಹಿನ್ನಡೆ; ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹೊಸ ಅಧ್ಯಕ್ಷರು
ಶಿವಮೊಗ್ಗ, ಜುಲೈ 20 : ಶಿವಮೊಗ್ಗದ ಮಹತ್ವದ ಬೆಳವಣಿಗೆಯೊಂದರಲ್ಲಿ ಡಿಸಿಸಿ ಬ್ಯಾಂಕ್ಗೆ ಹೊಸ ಅಧ್ಯಕ್ಷರನ್ನು ನೇಮಿಸಲಾಗಿದೆ. ಆರ್. ಎಂ. ಮಂಜುನಾಥ ಗೌಡಗೆ ಹಿನ್ನಡೆಯಾಗಿದ್ದು, ನಿರ್ದೇಶಕರ ಸ್ಥಾನದಿಂದಲೂ ಅನರ್ಹರಾಗಿದ್ದಾರೆ.
Recommended Video
ಸೋಮವಾರ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಪ್ರಭಾರ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿದ್ದ ಎಂ. ಬಿ. ಚನ್ನವೀರಪ್ಪ ನೇಮಕವಾಗಿದ್ದಾರೆ, ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ. ಆರ್. ಎಂ. ಮಂಜುನಾಥ ಗೌಡ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಯುವ ತನಕ ಎಂ. ಬಿ. ಚನ್ನವೀರಪ್ಪ ಅವರು ಪ್ರಭಾರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಬ್ಯಾಂಕ್ನಲ್ಲಿ 18 ನಿರ್ದೇಶಕರ ಸ್ಥಾನಗಳಿವೆ. ಆರ್. ಎಂ. ಮಂಜುನಾಥ ಗೌಡ ನಿರ್ದೇಶಕ ಸ್ಥಾನದಿಂದ ಅನರ್ಹರಾಗಿದ್ದು, ಅಧ್ಯಕ್ಷ ಸ್ಥಾನದಿಂದಲೂ ಕೆಳಗಿಳಿದಿದ್ದಾರೆ.

ಶೀಘ್ರದಲ್ಲಿಯೇ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಚುನಾವಣಾಧಿಕಾರಿಯಾಗಿ ನಾಗೇಂದ್ರ ಹೊನ್ನಾಳಿ ನೇಮಕಗೊಂಡಿದ್ದಾರೆ.
ನಕಲಿ ಚಿನ್ನ ಅಡಮಾನ, ಹೊರ ಜಿಲ್ಲೆಗಳ ಸಕ್ಕರೆ ಕಾರ್ಖನೆಗಳಿಗೆ 90 ಕೋಟಿಗೂ ಅಧಿಕ ಸಾಲ ಸೇರಿದಂತೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿತ್ತು. ಬೆಂಗಳೂರಿನಿಂದ ಆಗಮಿಸಿದ್ದ ಅಧಿಕಾರಿಗಳ ತಂಡ ಬ್ಯಾಂಕ್ ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು.
ಈ ಬೆಳವಣಿಗೆ ಹಿನ್ನಲೆಯಲ್ಲಿಯೇ ಆರ್. ಎಂ. ಮಂಜುನಾಥ ಗೌಡರನ್ನು ಬ್ಯಾಂಕ್ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ನಿರ್ದೇಶಕರ ಸ್ಥಾನ ಕಳೆದುಕೊಂಡ ಮಂಜುನಾಥ ಗೌಡರು ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಡಿಸಿಸಿ ಬ್ಯಾಂಕ್ ಅವ್ಯವಹಾರದ ಕುರಿತು ತನಿಖೆ ನಡೆಸುವಂತೆ ಬಿಜೆಪಿ ಮುಖಂಡರು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ಗೆ ಮನವಿ ಮಾಡಿದ್ದರು. ಇದಾದ ಕೆಲವು ದಿನಗಳ ಬಳಿಕ ಅಧಿಕಾರಿಗಳು ಕಡತ ಪರಿಶೀಲಿಸಿದ್ದರು.












Click it and Unblock the Notifications