ನರಸೀಪುರದ ನಾಟಿ ಔಷಧಿ ಇನ್ನು ಶಿವಗಂಗೆಯಲ್ಲಿ ಲಭ್ಯ
ಶಿವಮೊಗ್ಗ, ಅಕ್ಟೋಬರ್ 30: ಶಿವಮೊಗ್ಗದ ವೈದ್ಯ ನರಸೀಪುರ ನಾರಾಯಣ ಮೂರ್ತಿ ವಿಧವಶರಾಗಿದ್ದಾರೆ. ಇನ್ನು ಮುಂದೆ ನಾಟಿ ಔಷಧಿ ನರಸೀಪುರದ ಬದಲು ಶಿವಗಂಗೆಯಲ್ಲಿ ಲಭ್ಯವಾಗಲಿದೆ.
ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದ ನಾರಾಯಣ ಮೂರ್ತಿ ಅವರ ಬಳಿ ಕ್ಯಾನ್ಸರ್ಗೆ ಚಿಕಿತ್ಸೆಗೆ ಔಷಧಿ ಪಡೆಯಲು ದೇಶದ ವಿವಿಧ ಭಾಗದಿಂದ ಜನರು ಆಗಮಿಸುತ್ತಿದ್ದರು. ನಾರಾಯಣ ಮೂರ್ತಿ ಅವರ ಕುಟುಂಬಸ್ಥರು ಇನ್ನು ಔಷಧಿಯನ್ನು ನೀಡಲಿದ್ದಾರೆ.
ಶಿವಗಂಗೆಯ ನಿರ್ಜನ ಪ್ರದೇಶದಲ್ಲಿ ದಿ. ನಾರಾಯಣ ಮೂರ್ತಿ ಅವರ ಕುಟುಂಬದವರು ಔಷಧಿಯನ್ನು ನೀಡಲಿದ್ದಾರೆ. ಗುರುವಾರ ನೂರಾರು ಜನರು ಇಲ್ಲಿಗೆ ಆಗಮಿಸಿ ಮೊದಲ ಬಾರಿಗೆ ಔಷಧಿ ಪಡೆದುಕೊಂಡಿದ್ದಾರೆ.

ನರಸೀಪುರದಲ್ಲಿಯೇ ಔಷಧವನ್ನು ನೀಡಲು ತೀರ್ಮಾನಿಸಿದ್ದರು. ಆದರೆ, ಗ್ರಾಮಸ್ಥರ ವಿರೋಧದ ಕಾರಣದಿಂದಾಗಿ ಶಿವಗಂಗೆಯಲ್ಲಿ ಇನ್ನು ಮುಂದೆ ಔಷಧಿ ನೀಡಲಾಗುತ್ತದೆ. ಶಿವಂಗಗೆ ಗ್ರಾಮಕ್ಕೆ ಔಷಧ ವಿತರಣಾ ಕೇಂದ್ರವನ್ನು ಸ್ಥಳಾಂತರ ಮಾಡಲಾಗಿದೆ.
ಆನಂದಪುರ-ಶಿಕಾರಿಪುರ ಹೆದ್ದಾರಿಯಿಂದ 3 ಕಿ. ಮೀ. ದೂರದ ಮಲಂದೂರು ಮತ್ತು ಹೊಸಕೊಪ್ಪ ನಡುವಿನ ನಿರ್ಜನ ಪ್ರದೇಶದಲ್ಲಿ ಗೋದಾಮು ನಿರ್ಮಾಣ ಮಾಡಲಾಗಿದ್ದು, ಇಲ್ಲಿಯೇ ಇನ್ನು ಮುಂದೆ ಔಷಧಿ ದೊರೆಯಲಿದೆ.
ನರಸೀಪುರ ಗ್ರಾಮದಲ್ಲಿ ಔಷಧ ವಿತರಣೆಗೆ ಜನರು ವಿರೋಧ ಮಾಡಿದ್ದರು. ಔಷಧಿ ಪಡೆಯಲು ಬರುವವರು ಸ್ವಚ್ಛತೆ ಕಾಪಾಡುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಬೇರೆ-ಬೇರೆ ಪ್ರದೇಶದಿಂದ ಜನರು ಬರುವುದರಿಂದ ಸೋಂಕು ಹರಡುವ ಆತಂಕ ವ್ಯಕ್ತಪಡಿಸಿದ್ದರು.
ಜೂನ್ನಲ್ಲಿ ನಾರಾಯಣಮೂರ್ತಿ ಅವರು ನಿಧನರಾದ ಬಳಿಕ ಆಗಸ್ಟ್ನಲ್ಲಿ ಔಷಧಿ ವಿತರಣೆಯನ್ನು ಕುಟುಂಬದವರು ಆರಂಭಿಸಿದ್ದರು. ಆದರೆ, ಗ್ರಾಮಸ್ಥರು ಪ್ರತಿಭಟನೆ ಮಾಡಿದ ಕಾರಣಕ್ಕೆ ಔಷಧ ಕೇಂದ್ರವನ್ನು ಸ್ಥಳಾಂತರ ಮಾಡಲಾಗಿದೆ.
ಶಿವಗಂಗೆಯಲ್ಲಿ ಔಷಧ ವಿತರಣೆ ಮಾಡಲು ಸರ್ಕಾರದ ಅನುಮತಿ ಕೇಳಿದ್ದರು. ಅನುಮತಿ ಸಿಕ್ಕಿದ್ದು, ಗುರುವಾರದಿಂದ ಔಷಧ ವಿತರಣೆ ಆರಂಭಿಸಲಾಗಿದೆ. ಗುರುವಾರ 600ಕ್ಕೂ ಅಧಿಕ ಜನರು ಔಷಧಿ ಪಡೆದುಕೊಂಡಿದ್ದಾರೆ.
"ಗುರುವಾರ ಮತ್ತು ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ವಿತರಣೆ ಮಾಡಲಾಗುತ್ತದೆ. ತಂದೆ ನೀಡಿದ ತರಬೇತಿ, ಮಾರ್ಗದರ್ಶನದಂತೆ ಇದನ್ನು ಮುಂದುವರೆಸುತ್ತೇವೆ" ಎಂದು ನಾರಾಯಣಮೂರ್ತಿ ಅವರ ಪುತ್ರ ಎನ್. ರಾಘವೇಂದ್ರ ಹೇಳಿದ್ದಾರೆ.












Click it and Unblock the Notifications