ಆಗುಂಬೆ ಘಾಟ್ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧ
ಶಿವಮೊಗ್ಗ, ಜುಲೈ 03 : ಶಿವಮೊಗ್ಗ-ಉಡುಪಿ ಸಂಪರ್ಕಿಸುವ ಆಗುಂಬೆ ಘಾಟ್ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ಕುರಿತು ಶಿವಮೊಗ್ಗ ಮತ್ತುತ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಲಾಗಿದೆ.
ಮಳೆಗಾಲ ಪೂರ್ಣಗೊಳ್ಳುವ ತನಕ ಶಿವಮೊಗ್ಗ-ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎನಲ್ಲಿ 12 ಟನ್ಗಿಂತ ಹೆಚ್ಚು ಜಾಸ್ತಿ ಭಾರದ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಆಗುಂಬೆ ಘಾಟ್ ರಸ್ತೆಯಲ್ಲಿ ಮಳೆಗಾಲದಲ್ಲಿ ಭಾರದ ವಾಹನಗಳಾದ ಜಲ್ಲಿ, ಎಮ್ ಸ್ಯಾಂಡ್ ಮತ್ತು ಇತರ ವಾಹನಗಳ ಸಂಚಾರದಿಂದ ರಸ್ತೆ ಬದಿಯ ಮಣ್ಣು ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ.

ಘಾಟ್ ರಸ್ತೆ ಕಿರಿದಾಗಿದ್ದು, ಭಾರದ ವಾಹನಗಳ ಸಂಚಾರ ತಡೆದುಕೊಳ್ಳುವ ಕ್ಷಮತೆ ಕ್ಷೀಣಿಸಿದೆ. ಘಾಟ್ ರಸ್ತೆಯಲ್ಲಿ ಮಣ್ಣು ಕುಸಿತ ಉಂಟಾದರೆ ಸಾರ್ವಜನಿಕ ವಾಹನ ಸಂಚಾರಕ್ಕೆ ಅಡಚಣೆಯಾಗಲಿದೆ.
ಆದ್ದರಿಂದ, 12 ಟನ್ಗಿಂತ ಹೆಚ್ಚಿನ ಭಾರದ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸುವಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಶೃಂಗೇರಿ ಉಪ ವಿಭಾಗದವರು ಕೋರಿದ್ದರು.
ಈ ಪತ್ರದ ಆಧಾರದ ಮೇಲೆ ಮಳೆಗಾಲ ಮುಗಿಯುವ ತನಕ ಭಾರಿ ವಾಹನ ಸಂಚಾರ ರದ್ದುಗೊಳಿಸಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ.
ಎಲ್ಲಾ ವಾಹನ ಸಂಚಾರ ಬಂದ್ ಆಗಿತ್ತು : 2019ರ ಏಪ್ರಿಲ್ 1 ರಿಂದ ಮೇ 15ರ ತನಕ ಆಗುಂಬೆ ಘಾಟ್ ರಸ್ತೆ ಎಲ್ಲಾ ವಾಹನಗಳ ಸಂಚಾರಕ್ಕೆ ಬಂದ್ ಆಗಿತ್ತು. ಗುಡ್ಡ ಕುಸಿದ ಕಡೆ ಶಾಶ್ವತ ಕಾಮಗಾರಿ ಕೈಗೊಳ್ಳಲು ವಾಹನ ಸಂಚಾರವನ್ನು ರದ್ದುಗೊಳಿಸಲಾಗಿತ್ತು.












Click it and Unblock the Notifications