ಶಿವಮೊಗ್ಗ; ಬ್ಯಾಂಕ್ಗೆ ನುಗ್ಗಿದ ಕಳ್ಳರು, ಹಣ ಬಿಟ್ಟು ಕಂಪ್ಯೂಟರ್ ಕದ್ದರು!
ಶಿವಮೊಗ್ಗ, ಆಗಸ್ಟ್ 12; ಬ್ಯಾಂಕ್ಗೆ ಕನ್ನ ಕೊರೆಯುವ ಕಳ್ಳರು ಹಣ ಕದ್ದೊಯ್ಯುವ ಪ್ರಕರಣಗಳು ವರದಿಯಾಗುತ್ತಿರುತ್ತದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಬ್ಯಾಂಕ್ಗೆ ಕಿಟಕಿ ಮುರಿದು ಒಳಗೆ ನುಗ್ಗಿದ್ದಾರೆ. ಆದರೆ ಹಣಕ್ಕೆ ಕೈ ಹಾಕಿಲ್ಲ. ಆದರೆ ಬ್ಯಾಂಕ್ನಲ್ಲಿದ್ದ ವಸ್ತುಗಳು ನಾಪತ್ತೆಯಾಗಿವೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ನಗರ ಹೋಬಳಿಯ ಅರಮನೆ ಕೊಪ್ಪ ಗ್ರಾಮದ ಕರ್ನಾಟಕ ಬ್ಯಾಂಕ್ನಲ್ಲಿ ಕಳ್ಳತನವಾಗಿದೆ. ಗ್ಯಾಸ್ ಕಟರ್ ಬಳಕೆ ಮಾಡಿಕೊಂಡು ಕಿಟಕಿಯ ಸರಳುಗಳನ್ನು ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ.
ದಾಖಲೆಗಳು ಚೆಲ್ಲಾಪಿಲ್ಲಿ; ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳು ಹಿಂದಿನ ದಿನ ಬೀಗ ಹಾಕಿ ತೆರೆಳಿದ್ದರು. ಮರುದಿನ ಬೆಳಗ್ಗೆ ಬಂದು ಬೀಗ ತೆಗೆದಾಗ ದಾಖಲೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಎಲ್ಲೆಡೆ ಪರಿಶೀಲಿಸಿದಾಗ ಕಿಟಕಿ ಸರಳುಗಳನ್ನು ಮುರಿದು ಕಳ್ಳರು ಒಳ ನುಗ್ಗಿರುವುದು ಪತ್ತೆಯಾಗಿದೆ.

ಹಣ ಮುಟ್ಟಿಲ್ಲ, ಆದರೂ 4.15 ಲಕ್ಷ ನಷ್ಟ; ಬ್ಯಾಂಕ್ಗೆ ನುಗ್ಗಿದ ಖದೀಮರು ಹಣ ಮುಟ್ಟಿಲ್ಲ. ಆದರೆ ಬ್ಯಾಂಕ್ನಲ್ಲಿದ್ದ 4.15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಒಂದು ಕಂಪ್ಯೂಟರ್ ಸೆಟ್, ಇಂಟರ್ ನೆಟ್ ರೂಟರ್ ಸೆಟ್, ಸಿಸಿಟಿವಿ ಕ್ಯಾಮರಾ, ಸಿಸಿಟಿವಿ ಡಿವಿಆರ್, ಅಲರಂ ಸೆಟ್ ಕದ್ದೊಯ್ದಿದ್ದಾರೆ.
ಕಳ್ಳತನದ ಸಂಬಂಧ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಹೆಗ್ಡೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಕಳ್ಳತನ; ಶಿವಮೊಗ್ಗದ ರವೀಂದ್ರ ನಗರದಲ್ಲಿ ಕಳ್ಳನೊಬ್ಬ ಬೆಳ್ಳಂಬೆಳಗ್ಗೆ, ಕಟ್ಟಡದ ಮೂರನೇ ಮಹಡಿಗೆ ತೆರಳಿ ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಕದ್ದೊಯ್ದಿದ್ದಾನೆ. ಪಿ. ಎಚ್. ಡಿ ಸ್ಕಾಲರ್ ಒಬ್ಬರ ಪ್ರಮುಖ ದಾಖಲೆಗಳು ಈ ಲ್ಯಾಪ್ ಟಾಪ್ ನಲ್ಲಿದ್ದವು ಎಂದು ತಿಳಿದು ಬಂದಿದೆ.
ರವೀಂದ್ರ ನಗರ ಎರಡನೇ ಮುಖ್ಯರಸ್ತೆಯ 6ನೇ ಕ್ರಾಸ್ನಲ್ಲಿ ಈ ಘಟನೆ ಸಂಭವಿಸಿದೆ. ಬೆಳಗ್ಗೆ 7.30ರ ಹೊತ್ತಿಗೆ ಕಳ್ಳತನವಾಗಿದೆ. ರಸ್ತೆಯಲ್ಲಿ ನಡೆದು ಬರುವ ಕಳ್ಳನೊಬ್ಬ ನೇರವಾಗಿ ಕಟ್ಟಡದೊಳಗೆ ಹೋಗಿ, ಮೂರನೇ ಮಹಡಿಗೆ ತಲುಪಿದ್ದಾನೆ.
ಮೂರನೇ ಮಹಡಿಯ ರೂಂನಲ್ಲಿ ಅರುಣ್ ಕುಮಾರ್ ಎಂಬುವವರಿಗೆ ಸೇರಿದ ಒಂದು ಡೆಲ್ ಲ್ಯಾಪ್ ಟಾಪ್, ಅವರ ಸ್ನೇಹಿತ ಜಗದೀಶ್ ಎಂಬುವವರಿಗೆ ಸೇರಿದ ಎರಡು ಮೊಬೈಲ್, ಶಿವರಾಜ್ ನಾಯ್ಕ ಎಂಬುವವರಿಗೆ ಸೇರಿದ ಒಂದು ಮೊಬೈಲ್ ಫೋನ್ ಕಳುವು ಮಾಡಿದ್ದಾನೆ. ಇವುಗಳ ಒಟ್ಟು ಮೌಲ್ಯ 77 ಸಾವಿರ ಎಂದು ಅಂದಾಜಿಸಲಾಗಿದೆ.
ದಾಖಲೆಗಳಿದ್ದವು; ಕಳುವಾಗಿರುವ ಲ್ಯಾಪ್ ಟಾಪ್ನಲ್ಲಿ ಅರುಣ್ ಕುಮಾರ್ಗೆ ಸಂಬಂಧಿಸಿದ ಪಿ. ಎಚ್. ಡಿ. ದಾಖಲೆಗಳಿದ್ದವು ಎಂದು ತಿಳಿದು ಬಂದಿದೆ. ಪಿ. ಎಚ್. ಡಿ ಸಂಶೋಧನೆ ಅಂತಿಮ ಹಂತಕ್ಕೆ ಬಂದಿದ್ದು, ಸಂಪೂರ್ಣ ದಾಖಲೆಗಳು ಲ್ಯಾಪ್ ಟಾಪ್ನಲ್ಲಿಯೇ ಇದ್ದವು.
ಸಿಸಿಟಿವಿಯಲ್ಲಿ ಸೆರೆ; ನೀಲಿ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಲ್ಯಾಪ್ ಟಾಪ್ ಕಳ್ಳತನ ಮಾಡಿಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಮೀಪದ ಕಟ್ಟಡವೊಂದರಲ್ಲಿ ಇದ್ದ ಸಿಸಿಟಿವಿಯಲ್ಲಿ ಖದೀಮನು ಲ್ಯಾಪ್ ಟಾಪ್ ಬ್ಯಾಗ್ ಹಾಕಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗೃಹಿಣಿ ಆತ್ಮಹತ್ಯೆ; ಗೃಹಿಣಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ನಡೆದಿದೆ. ಅನಾರೋಗ್ಯ ಕಾರಣ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮೃತಪಟ್ಟ ಮಹಿಳೆಯನ್ನು ಆಗುಂಬೆ ಸಮೀಪದ ಮಳಲಿ ಗ್ರಾಮದ ನಿವಾಸಿ ಪ್ರಭಾವತಿ (45) ಎಂದು ಗುರುತಿಸಲಾಗಿದೆ.












Click it and Unblock the Notifications