ಶಾಲೆ ಕಾಂಪೌಂಡ್ ನಿರ್ಮಾಣಕ್ಕೆ ಶ್ರಮದಾನ ಮಾಡಿದ ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ, ಏಪ್ರಿಲ್ 08: ಸಚಿವರು ಎಂದರೆ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿ ಫೋಟೋ ತೆಗೆಸಿಕೊಂಡು ಭಾಷಣ ಮಾಡಿ ಹೋಗುತ್ತಾರೆ ಎಂಬ ಮಾತಿದೆ. ಮತ್ತೆ ಅವರು ಬರುವುದು ಅದನ್ನು ಉದ್ಘಾಟನೆ ಮಾಡಲು. ಆದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ಮಾತನ್ನು ಸುಳ್ಳಾಗಿಸಿದ್ದಾರೆ. ಕಾಮಗಾರಿಗೆ ಚಾಲನೆ ನೀಡಿದ ಸಚಿವರು ಕಾರ್ಮಿಕರು, ಸ್ಥಳೀಯರ ಜೊತೆ ಸೇರಿ ಕೆಲಸ ಮಾಡಿದ್ದಾರೆ.
ಸೋಮವಾರ ಸಚಿವ ಮಧು ಬಂಗಾರಪ್ಪ ತಮ್ಮ ತವರು ಕ್ಷೇತ್ರ ಸೊರಬ ತಾಲೂಕು ಹುರುಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗೆ ನೂತನ ಶಾಲಾ ಕಾಂಪೌಂಡ್ ಮತ್ತು ಅಡುಗೆ ಕೋಣೆಯ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಿದರು. ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಕಿಕ ಖಾತೆ ಸಚಿವ ಡಿ. ಸುಧಾಕರ್ ಸಹ ಉಪಸ್ಥಿತರಿದ್ದರು.

ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿದ ಬಳಿಕ ಸಚಿವರು ಕಾರ್ಮಿಕರು, ಸ್ಥಳೀಯರೊಂದಿಗೆ ಶಾಲಾ ಕಾಂಪೌಂಡ್ ಮತ್ತು ಅಡುಗೆ ಕೋಣೆ ನಿರ್ಮಾಣಕ್ಕೆ ಶ್ರಮದಾನ ಮಾಡಿದರು. ಮಣ್ಣನ್ನು ಅಗೆದು, ಅದನ್ನು ಹೊತ್ತು ಹಾಕಿದರು. ನಂತರ ಗಿಡನೆಟ್ಟರು.
ನಮ್ಮೂರು, ನಮ್ಮ ಶಾಲೆ ಎಂಬ ಅಭಿಮಾನ: ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, "ಸಾರ್ವಜನಿಕವಾಗಿರುವ ಎಲ್ಲಾ ಕೆಲಸ ಕಾರ್ಯಗಳನ್ನು ಸರ್ಕಾರವೇ ಮಾಡಲೆಂದು ಅಪೇಕ್ಷಿಸದೆ ತಾವು ಕೂಡ ಸ್ವಯಂ ಪ್ರೇರಿತರಾಗಿ ಕೈಲಾದ ಸೇವೆ ಸಲ್ಲಿಸಲು ಸಿದ್ದರಾಗಬೇಕು. ಎಲ್ಲರಲ್ಲೂ ನಮ್ಮ ಊರು, ನಮ್ಮ ಶಾಲೆ ಎಂಬ ಅಭಿಮಾನವಿರಬೇಕು. ಮಕ್ಕಳ ಭವಿಷ್ಯ ರೂಪಿಸುವುದು ಮಾತ್ರವಲ್ಲ ಸರ್ಕಾರದ ಅಸ್ತಿಯ ರಕ್ಷಣೆಯ ಹೊಣೆಯೂ ನಮ್ಮೆಲ್ಲರದ್ದಾಗಿದೆ" ಎಂದು ಹೇಳಿದರು.
"ಶಾಲಾ ಸ್ವತ್ತು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ನೂತನ ಶಾಲಾ ಕೊಠಡಿಯ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗಿತ್ತು. ಪ್ರಸ್ತುತ ಹೆಚ್ಚುವರಿಯಾಗಿ ಎರಡು ಕೊಠಡಿಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುತ್ತೇನೆ" ಎಂದು ಸಚಿವರು ಭರವಸೆ ನೀಡಿದರು.
"ದೇಶದ ಉಜ್ವಲ ಭವಿಷ್ಯ ರೂಪಿಸುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವ ಶಿಕ್ಷಣ ಇಲಾಖೆ ಸಚಿವನಾಗಿ ಕಾರ್ಯನಿರ್ವಹಿಸುತ್ತಿರುವುದು ತೃಪ್ತಿ ತಂದಿದೆ. ಎಲ್ಲರಿಗೂ ಸ್ಫೂರ್ತಿ ದಾಯಕವಾದ ಇಂತಹ ಕಾರ್ಯಕ್ರಮದಲ್ಲಿ ಶ್ರಮದಾನಕ್ಕೆ ಭಾಗಿಯಾದ ತಮಗೆ ಅಭಿನಂದನೆಗಳು" ಎಂದು ತಿಳಿಸಿದರು.
"ಅಜೀಮ್ ಪ್ರೇಮ್ ಜಿ ಫೌಂಡೇಶನ್ ಅವರ 1591 ಕೋಟಿ ರೂ. ಗಳ ಆರ್ಥಿಕ ನೆರವಿನೊಂದಿಗೆ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದ ಆರು ದಿನಗಳು ಪೌಷ್ಠಿಕ ಆಹಾರ ಮೊಟ್ಟೆ, ಹಾಲು, ರಾಗಿಮಾಲ್ಟ್, ನೀಡಲಾಗುತ್ತಿದೆ. ಅಲ್ಲದೆ ಬಟ್ಟೆ, ಶೂ, ಸಾಕ್ಸ್ ಮತ್ತಿತರ ಸೌಲಭ್ಯಗಳೊಂದಿಗೆ ಶಾಲೆಗೆ ಉಚಿತ ವಿದ್ಯುತ್ ಮತ್ತು ನೀರನ್ನು ಒದಗಿಸಲಾಗುತ್ತಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುವಂತೆ" ಸಚಿವರು ಮನವಿ ಮಾಡಿದರು.
"ಇಂದಿನ ಮಕ್ಕಳು ದೇಶದ ಅತ್ಯಂತ ಉನ್ನತ ಸ್ಥಾನ ಅಲಂಕರಿಸಿ ಸೇವೆ ನೀಡುವಂತಾಗಬೇಕು. ರಾಜ್ಯದ ಎಲ್ಲಾ ವರ್ಗದ ಜನರಿಗೆ ಮದ್ಯವರ್ತಿಗಳ ನೆರವಿಲ್ಲದೆ ಗ್ಯಾರಂಟಿ ಯೋಜನೆಗಳ ಲಾಭ ದೊರೆಯುತ್ತಿದೆ. ರಾಜ್ಯದ ಪ್ರತಿ ಮನೆಗೂ ಯೋಜನೆಯ ಲಾಭ ದೊರೆತಿದೆ. ಮುಂದಿನ ದಿನಗಳಲ್ಲಿ ಜನರ ಅಶೋತ್ತರಾಗಳಿಗೆ ಪೂರಕವಾಗಿ ಇನ್ನಷ್ಟು ಸೇವೆ ಮಾಡುವ ಉತ್ಸಾಹ ಬಂದಿದೆ" ಎಂದರು.
ಸಚಿವ ಡಿ. ಸುಧಾಕರ್ ಮಾತನಾಡಿ, "ರಾಜ್ಯದ ಪ್ರಗತಿಗೆ ಮುಖ್ಯಮಂತ್ರಿ ದೇವರಾಜ ಅರಸು ಅವರ ನಂತರ ಎಸ್. ಬಂಗಾರಪ್ಪ ಅವರು ಮೇಲ್ಪಂಕ್ತಿಯಲ್ಲಿ ಗುರುತಿಸಲಾಗುತ್ತಿದೆ. ಅವರ ಉಚಿತ ವಿದ್ಯುತ್ ನೀಡುವ ಯೋಜನೆ ಇಂದಿಗೂ ಪ್ರಚಲಿತದಲ್ಲಿದೆ. ದೇವಸ್ಥಾನಕ್ಕಿಂತ ಶಾಲಾ ಕಟ್ಟಡ ನಿರ್ಮಾಣ ಅತ್ಯಂತ ಪುಣ್ಯದ ಕಾರ್ಯ. ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿರುವ ಸಚಿವ ಮಧು ಅವರು ಅಭಿನಂದನಾರ್ಹರು" ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಆರ್. ಎಂ. ಮಂಜುನಾಥ ಗೌಡ ಮಾತನಾಡಿ, "ಶ್ರಮಿಕ ವರ್ಗಕ್ಕೆ ಬಲ ತುಂಬುವ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ದೂರದೃಷ್ಟಿಯ ಯೋಜನೆ ನರೇಗಾ ಅತ್ಯದ್ಭುತ ಯೋಜನೆಯಾಗಿದೆ. ಹಲವು ದಶಕಗಳ ನಂತರವು ಯೋಜನೆ ಪ್ರಚಲಿತದಲ್ಲಿರುವುದು ಯೋಜನೆಯ ಮಹತ್ವವನ್ನು ಸಾರಿ ಹೇಳುತ್ತದೆ" ಎಂದು ತಿಳಿಸಿದರು.












Click it and Unblock the Notifications