ಕಟೀಲ್ ಆಡಿಯೋ ವೈರಲ್: ಅಧಿಕಾರ ಹೋದರೆ ಗೂಟ ಹೋಯಿತು ಅಂದುಕೊಳ್ಳುತ್ತೇನೆ
ಶಿವಮೊಗ್ಗ, ಜುಲೈ 19: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎಂದು ಹೇಳಲಾಗುತ್ತಿರುವ ಆಡಿಯೋ ವೈರಲ್ ಬೆನ್ನಿಗೇ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಕೆ.ಎಸ್.ಈಶ್ವರಪ್ಪ, "ಸಚಿವ ಸ್ಥಾನಕ್ಕೆ ತಾವು ಅಂಟಿ ಕುಳಿತಿಲ್ಲ, ಗೂಟ ಶಾಶ್ವತವಲ್ಲ ಎಂದು ತಮಗೆ ಗೊತ್ತಿದೆ,'' ಎಂದು ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎಂದು ಹೇಳಲಾಗುತ್ತಿರುವ ಫೋನ್ ಸಂಭಾಷಣೆ ಬಿಜೆಪಿ ವಲಯದಲ್ಲಿ ಕಿಡಿ ಹೊತ್ತಿಸಿದೆ.
ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ಭಾನುವಾರ ಸಂಜೆ ವೈರಲ್ ಆಗಿದ್ದು, "ಈ ಆಡಿಯೋ ನನ್ನದಲ್ಲ, ಇದನ್ನು ಯಾರು ಮಾಡಿದ್ದಾರೋ ನನಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಮಾತೇ ಇಲ್ಲ. ಸಿಎಂ ಯಡಿಯೂರಪ್ಪ ಪಕ್ಷದ ಆತ್ಮ ಹಾಗೂ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪ ಪಕ್ಷದ ಕಣ್ಣುಗಳಿದ್ದಂತೆ,'' ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಅದಾಗ್ಯೂ ಸಚಿವ ಕೆ.ಎಸ್. ಈಶ್ವರಪ್ಪ ಸೋಮವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಗೂಟ ಹೋದರೆ ಹೋಗಲಿ
"ನಾನು ಆರ್ಎಸ್ಎಸ್ ಹಿನ್ನೆಲೆಯಿಂದ ಬಂದಿದ್ದು, ಸಂಘ ಮತ್ತು ಹಿರಿಯರು ವಹಿಸಿದ ಜವಾಬ್ದಾರಿ ನಿಭಾಯಿಸಿದ್ದೇನೆ. ಈಗ ಸಚಿವ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದಿಲ್ಲ. ಪಕ್ಷ, ಸಂಘಟನೆ ಸೂಚಿಸಿದರೆ ಅಧಿಕಾರ ತೊರೆಯುತ್ತೇನೆ. ಅಧಿಕಾರ ಶಾಶ್ವತವೇನಲ್ಲ. ಹೋದರೆ ಒಂದು ಗೂಟ ಹೋಯಿತು ಎಂದು ಕೊಳ್ಳುತ್ತೇನೆ,'' ಎಂದರು.

ಆಡಿಯೋ ಬಗ್ಗೆ ತನಿಖೆಯಾಗಲಿ
"ಆಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, ""ನಳಿನ್ ಕುಮಾರ್ ಈಗಾಗಲೇ ಆ ಆಡಿಯೋ ತಮ್ಮದಲ್ಲ ಎಂದು ಹೇಳಿದ್ದಾರೆ. ಯಾರೋ ಹುಚ್ಚ ಅದನ್ನು ವೈರಲ್ ಮಾಡಿದ್ದಾನೆ. ಹಾಗಾಗಿ ಆಡಿಯೋ ವೈರಲ್ ವಿಚಾರವಾಗಿ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ,'' ಎಂದು ಹೇಳಿದರು.

ಹಿಂದೂ ಧರ್ಮದ ಏಳಿಗೆಗೆ ಶ್ರಮಿಸುತ್ತೇನೆ
ಮುಂಚಿನಿಂದಲೂ ನಾನು ದೇಶದ ಅಭಿವೃದ್ಧಿಯ ಯೋಚನೆ ಮಾಡಿದ್ದೇನೆ. ಹಿಂದೂ ಧರ್ಮದ ಏಳಿಗೆಗಾಗಿ ಶ್ರಮಿಸುತ್ತಿದ್ದೇನೆ. ಅಧಿಕಾರ ಹೋದರೂ ನಾನು ಸಂಘಟನೆ ಮಾಡುತ್ತೇನೆ. ದೇಶದ ಅಭಿವೃದ್ಧಿ, ಹಿಂದೂ ಧರ್ಮದ ಏಳಿಗೆಯ ಕಾರ್ಯ ಮುಂದುವರೆಸುತ್ತೇನೆ,'' ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ಯುವಕರಿಗೆ ಆದ್ಯತೆ ನೀಡುತ್ತೇವೆ
"ಬಿಜೆಪಿ ಪಕ್ಷದ ಸಂಘಟನೆಯ ದೃಷ್ಟಿಯಿಂದ ಯುವಕರಿಗೆ ಆದ್ಯತೆ ನೀಡಬೇಕಿದೆ. ಆದ್ದರಿಂದ ತಾವು ಅಧಿಕಾರ ಕಳೆದುಕೊಂಡರೂ ಯುವಕರಿಗೆ ಅವಕಾಶ ಸಿಗಬೇಕು. ಪಕ್ಷ ಮತ್ತು ಸಂಘಟನೆಯ ನಿರ್ಧಾರದಂತೆ ತಾವು ಮುಂದಿನ ಹೆಜ್ಜೆ ಇಡುತ್ತೇನೆ,'' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು. ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ ಸೇರಿದಂತೆ ಹಲವರು ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು.












Click it and Unblock the Notifications