ಸಿದ್ದರಾಮಯ್ಯ ಭೇಟಿ ಬಳಿಕ ಮಧು ಬಂಗಾರಪ್ಪ ಹೇಳಿದ್ದೇನು?
ಶಿವಮೊಗ್ಗ, ಮಾರ್ಚ್ 11; "ರಾಜ್ಯ ಮತ್ತು ದೇಶಕ್ಕೆ ಕಾಂಗ್ರೆಸ್ ಪಕ್ಷದ ಅಗತ್ಯವಿದೆ. ನನ್ನ ತಂದೆಯವರ ಅಭಿಮಾನಿಗಳ ಸಲಹೆಯಂತೆ ಪಕ್ಷ ಸೇರ್ಪಡೆಯಾಗುವ ತೀರ್ಮಾನವನ್ನು ಕೈಗೊಂಡಿದ್ದೇನೆ. ಇಂದಿನಿಂದೇ ಕೆಲಸವನ್ನು ಆರಂಭಿಸುತ್ತೇನೆ" ಎಂದು ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.
ಗುರುವಾರ ಬೆಂಗಳೂರಿನಲ್ಲಿ ಮಧು ಬಂಗಾರಪ್ಪ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದರು. "ಕಾಂಗ್ರೆಸ್ ಪಕ್ಷವನ್ನು ಸೇರಲು ತೀರ್ಮಾನ ಮಾಡಿಕೊಂಡು ಬಂದಿದ್ದೇನೆ. ಅಧಿಕೃತವಾಗಿ ಸೇರ್ಪಡೆಯಾಗುವ ದಿನಾಂಕ ನಂತರ ತಿಳಿಸುತ್ತೇನೆ" ಎಂದರು.
ಮಧು ಬಂಗಾರಪ್ಪ ಕಾಂಗ್ರೆಸ್ಗೆ; ಕುಮಾರಸ್ವಾಮಿ ಪ್ರತಿಕ್ರಿಯೆ
"ನಮ್ಮ ತಂದೆ ಬಂಗಾರಪ್ಪ ಅವರು ಕಾಂಗ್ರಸ್ ಪಕ್ಷದಲ್ಲಿದ್ದರು. ಅವರ ಅಭಿಮಾನಿಗಳು ಕಾಂಗ್ರೆಸ್ ಸೇರುವ ನನ್ನ ತೀರ್ಮಾನವನ್ನು ಒಪ್ಪಿದ್ದಾರೆ. ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿಗಳು, ಸಿಎಲ್ಪಿ ನಾಯಕರು ಅವರ ಜೊತೆ ಚರ್ಚೆ ನಡೆಸಿದ್ದೇನೆ" ಎಂದು ಮಧು ಬಂಗಾರಪ್ಪ ಹೇಳಿದರು.
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮೌನ ಮುರಿದ ಮಧು ಬಂಗಾರಪ್ಪ!
"ವೈಯಕ್ತಿಕವಾಗಿ ಎಚ್. ಡಿ. ಕುಮಾರಸ್ವಾಮಿ, ಎಚ್. ಡಿ. ದೇವೇಗೌಡರ ಮೇಲೆ ಅಪಾರವಾದ ಗೌರವವಿದೆ. ನನ್ನ ನೋವುನ್ನು ಸಾಕಷ್ಟು ಬಾರಿ ನಾನು ಹೇಳಿದ್ದೇನೆ. ಈಗ ಹೆಚ್ಚು ಅದರ ಬಗ್ಗೆ ಚರ್ಚೆಗಳು ಬೇಡ" ಎಂದು ತಿಳಿಸಿದರು.
ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ಓಕೆ ಎಂದ ಡಿಕೆ ಶಿವಕುಮಾರ್
ನಾನು ಸಮಯ ತೆಗೆದುಕೊಂಡೆ
"ನಾನು ತೀರ್ಮಾನವನ್ನು ತೆಗೆದುಕೊಳ್ಳಲು ಬಹಳ ಸಮಯ ತೆಗೆದುಕೊಂಡೆ. ಎರಡು ದಿನದ ಹಿಂದೆ ಭೇಟಿಯಾಗಬೇಕಿತ್ತು. ಶಿವರಾತ್ರಿ ಒಳ್ಳೆಯ ದಿನ ಇಂದು ಭೇಟಿ ಮಾಡಿದ್ದೇನೆ. ಇವತ್ತಿಂದಲೇ ಕೆಲಸ ಆರಂಭಿಸಲು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ನನ್ನ ಎಲ್ಲಾ ಸ್ನೇಹಿತರ, ಅಭಿಮಾನಿಗಳ ಸಲಹೆ ಪಡೆದು ಕಾಂಗ್ರೆಸ್ ಸೇರುವ ತೀರ್ಮಾನ ಕೈಗೊಂಡಿದ್ದೇನೆ" ಎಂದು ಮಧು ಬಂಗಾರಪ್ಪ ಹೇಳಿದರು.
ಶುಕ್ರವಾರ ಡಿ. ಕೆ. ಶಿವಕುಮಾರ್ ಭೇಟಿ
"ಶುಕ್ರವಾರ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡುತ್ತೇನೆ. ಅವರು ನೀಡುವ ಸಲಹೆ ಆಧರಿಸಿ ಮುಂದಿನ ತೀರ್ಮಾನವನ್ನು ಕೈಗೊಳ್ಳುವೆ. ಅಧಿಕೃತವಾಗಿ ಸೇರ್ಪಡೆಯಾಗುವ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದರೆ, ಇಂದಿನಿಂದಲೇ ಕೆಲಸ ಆರಂಭಿಸುತ್ತೇನೆ" ಎಂದು ಮಧು ಬಂಗಾರಪ್ಪ ಹೇಳಿದರು.
ಕೊಡುಗೆ ಒಂದು ಕಡೆಯಿಂದ ಇರಲ್ಲ
"ಎಚ್. ಡಿ. ಕುಮಾರಸ್ವಾಮಿ ಅವರು ತುಂಬಾ ಹಿರಿಯರು ನನಗೆ ವೈಯಕ್ತಿಕವಾಗಿ ಅವರ ಮೇಲೆ ಅಪಾರವಾದ ಗೌರವವಿದೆ. ಒಂದು ವರುಷ ನಾನು ಮೌನವಾಗಿದ್ದೆ. ಬೆನ್ನಿಗೆ ಚೂರಿ ಹಾಕಿದ್ದೇನೆ ಎಂದು ಎಲ್ಲಾ ಅಂದು ಕೊಳ್ಳುವುದು ಬೇಡ. ಪಕ್ಷ ಬಿಡುತ್ತೇನೆ ಎಂದರೆ ಕೊಡಗೆ ಎರಡೂ ಕಡೆ ಇಂದ ಇರುತ್ತದೆ" ಎಂದು ಮಧು ಬಂಗಾರಪ್ಪ ತಿಳಿಸಿದರು.
ಹಿಂದೆಯೇ ಆಹ್ವಾನ ಬಂದಿತ್ತು
2019ರ ಲೋಕಸಭೆ ಚುನಾವಣೆ ಸೋಲಿನ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ, "ಚುನಾವಣೆ ಒಂದು ಪರೀಕ್ಷೆ ಥರ. ಒಬ್ಬರೇ ಪಾಸ್ ಆಗೋದು, ಎಲ್ಲರೂ ಪಾಸ್ ಆಗುವುದಕ್ಕೆ ಆಗಲ್ಲ. ಪಾಸ್ ಆಗಲಿಲ್ಲ ಎಂದರೆ ನಾಯಕತ್ವ ಮುಗೀತು ಎಂದು ಅರ್ಥವಲ್ಲ. ನಾಯಕತ್ವ ಅನ್ನೋದು ವೈಯಕ್ತಿಕವಾದದ್ದು. ನನಗೆ ಕಾಂಗ್ರೆಸ್ ಸೇರಲು ಬಹಳ ಹಿಂದೆಯೇ ಆಹ್ವಾನ ಬಂದಿತ್ತು" ಎಂದರು.
ಅಧಿಕಾರ ಅನುಭವಿಸಿಲ್ಲ
ಎಚ್. ಡಿ. ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ. "ಪಕ್ಷದಲ್ಲಿ ನಾನು ಅಧಿಕಾರ ಅನುಭವಿಸಿ ಹೋಗುತ್ತಿಲ್ಲ. ಸೋತ ಶಾಸಕ ನಾನು, ನನಗೆ ಅಧಿಕಾರ ಸಿಕ್ಕಿಲ್ಲ. ಕುಮಾರಸ್ವಾಮಿ, ದೇವೇಗೌಡರಿಗೆ ವೈಯಕ್ತಿಕವಾಗಿ ಗೌರವ ಕೊಡುತ್ತೇನೆ. ಪಕ್ಷದಲ್ಲಿ ಇರುವುದಿಲ್ಲ ಅಷ್ಟೇ" ಎಂದು ಹೇಳಿದರು.
ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ
"ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಅಧಿಕೃತ ದಿನಾಂಕ ಇನ್ನೂ ನಿಗದಿ ಮಾಡಿಲ್ಲ. ಏಪ್ರಿಲ್ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ ದೊಡ್ಡ ಸಮಾವೇಶ ನಡೆಸಿ ಸೇರಬೇಕು ಎಂದು ಅಂದುಕೊಂಡಿದ್ದೇನೆ. ಅಧ್ಯಕ್ಷರನ್ನು ಭೇಟಿ ಮಾಡಿದ ಬಳಿಕ ತೀರ್ಮಾನ ಮಾಡುತ್ತೇನೆ" ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.