ಹುಲಿಕಲ್ ಘಾಟ್ ನಲ್ಲಿ 400 ಅಡಿ ಆಳಕ್ಕೆ ಉರುಳಿದ ಲಾರಿ: ಅಚ್ಚರಿಯಾಗಿ ಬದುಕಿ ಬಂದ ಚಾಲಕ
ಶಿವಮೊಗ್ಗ, ಅಕ್ಟೋಬರ್ 1: ಶಿವಮೊಗ್ಗ ಜಿಲ್ಲೆಯ ಹುಲಿಕಲ್ ಘಾಟಿಯಲ್ಲಿ 400 ಅಡಿ ಎತ್ತರದಿಂದ ಲಾರಿವೊಂದು ಉರುಳಿ ಕೆಳಗೆ ಬಿದ್ದರೂ, ಸಣ್ಣಪುಟ್ಟ ಗಾಯಗಳೊಂದಿಗೆ ಲಾರಿ ಚಾಲಕ ಬದುಕಿ ಬಂದಿದ್ದಾನೆ.
ಸೆ.30 ರ ಬೆಳಗಿನ ಜಾವ 3 ಗಂಟೆಯ ಸಮಯ, ಹುಲಿಕಲ್ ಘಾಟಿಯಲ್ಲಿ ಎಪಿ 29 ಡಬ್ಲ್ಯೂ 0051 ಸಂಖ್ಯೆಯ ಲಾರಿ ಮಂಗಳೂರು ಬಂದರಿನಿಂದ ಶಿವಮೊಗ್ಗದ ಮಾಚೇನಹಳ್ಳಿಯಲ್ಲಿನ ಕೋಕ್ ಸಂಸ್ಥೆಗೆ ಮಾಲು ಹೊತ್ತುಕೊಂಡು ಹುಲಿಕಲ್ ಘಾಟಿಯಲ್ಲಿ ಬರುತ್ತಿತ್ತು.
ಹುಲಿಕಲ್ ಘಾಟಿಯ ಚಂಡಿಕಾಂಬ ದೇವಾಲಯದ ಹಿಂಭಾಗದ ತಿರುವಿನಲ್ಲಿ ಎದುರಿನಿಂದ ದಟ್ಟವಾದ ಹೆಡ್ ಲೈಟ್ ಹಾಕಿಕೊಂಡು ಬಂದ ವಾಹನವೊಂದಕ್ಕೆ ಸೈಡ್ ಕೊಡಲು ಹೋಗಿ ಲಾರಿ ಘಾಟಿಯಿಂದ ಉರುಳಿಬಿದ್ದಿದೆ.

ಅಚಾನಕ್ಕಾಗಿ ನಡೆದ ಘಟನೆಯಲ್ಲಿ ಲಾರಿ 400 ಅಡಿ ಎತ್ತರದಿಂದ ಉರುಳಿ ಬಿದ್ದರೂ, ಆಶ್ಚರ್ಯಕರ ರೀತಿಯಲ್ಲಿ ಚಾಲಕ ಲೋಕೇಶ್ ಎಂಬಾತ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಎದ್ದು ಬಂದಿದ್ದಾನೆ.

ಶಿವಮೊಗ್ಗ ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈತ ಸೊರಬದ ಮಾಗಡಿ ನಿವಾಸಿಯಾಗಿದ್ದಾನೆ. ನಗರ ಠಾಣೆಯ ಪಿಎಸ್ಐ ಕೊಪ್ಪದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.












Click it and Unblock the Notifications