'ಇನ್ನೊಬ್ಬರ ಹೆಗಲನ್ನು ಆಶ್ರಯಿಸುವುದೇ ಕುಮಾರಸ್ವಾಮಿ ಹವ್ಯಾಸವಾಗಿದೆ'
ಶಿವಮೊಗ್ಗ, ಫೆಬ್ರವರಿ 05: ಎರಡು ಬಾರಿ ಲಾಟರಿ ಹೊಡೆದಂತೆ ಸಿ.ಎಂ.ಆಗಿರುವ ಎಚ್.ಡಿ. ಕುಮಾರಸ್ವಾಮಿಯವರು ಅಂಗವಿಕಲ ಪಕ್ಷವಾಗಿರುವ ಜೆಡಿಎಸ್ ಪಕ್ಷದ ನೇತಾರರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು.
ಇಂದು ಮಂಗಳವಾರ ಶಿವಮೊಗ್ಗದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇನ್ನೊಬ್ಬರ ಹೆಗಲನ್ನು ಆಶ್ರಯಿಸುವುದೇ ಕುಮಾರಸ್ವಾಮಿ ಅವರ ಹವ್ಯಾಸವಾಗಿದೆ.ಇದೀಗ ಕಾಂಗ್ರೆಸ್ ಹೆಗಲ ಮೇಲೆ ಕೂತಿರುವ ಜೆಡಿಎಸ್ ನವರು ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅವಲಂಬಿಸಿದರೆ ಆಶ್ಚರ್ಯ ಪಡಬೇಕಿಲ್ಲ. ಆದ್ದರಿಂದಲೇ ನನ್ನ ಸರ್ಕಾರ ಪತನವಾಗುವ ಸಂದರ್ಭದಲ್ಲಿ ಬಿಜೆಪಿಯವರೇ ರಕ್ಷಿಸುತ್ತಾರೆ ಎಂದು ಹೇಳುತ್ತಿದ್ದಾರೆ ಎಂದರು.
ಮೋದಿ ತರಹ ಡೋಂಗಿ ಬಜೆಟ್ ಮಂಡಿಸುವುದಿಲ್ಲ ಎಂದು ರಾಜ್ಯದ ಡೋಂಗಿ ಮುಖ್ಯಮಂತ್ರಿ ಹೇಳಿದ್ದಾರೆ. ಮೋದಿ ಬಗ್ಗೆ ಡೋಂಗಿ ಪದ ಬಳಸಿರುವುದಕ್ಕೆ ಬೇಸರವಿದೆ. ಆದರೆ ಅವರು ಹೇಳಿರುವಂತೆ ಉತ್ತಮ ಬಜೆಟ್ ಕೊಡುತ್ತಾರೆಂಬ ನಿರೀಕ್ಷೆ ಇದೆ. ಕಳೆದ ಆರು ತಿಂಗಳ ಹಿಂದೆ ಡೋಂಗಿ ಬಜೆಟ್ ನೀಡಿದ ಮುಖ್ಯಮಂತ್ರಿಯಿಂದ 8ನೇ ತಾರೀಖು ಬಹುನಿರೀಕ್ಷಿತ ಬಜೆಟ್ ರಾಜ್ಯದ ಜನತೆ ನಿರೀಕ್ಷಿಸುತ್ತಿದ್ದಾರೆಂದರು.

ಕಾನೂನು ಸುವ್ಯವಸ್ಥೆ ಪರಿಶೀಲನೆಗಾಗಿ ಶಿವಮೊಗ್ಗಕ್ಕೆ ಆಗಮಿಸುವಂತೆ ಕೋರಿ ರಾಜ್ಯದ ಗೃಹ ಸಚಿವ ಎಂ.ಬಿ.ಪಾಟೀಲರಿಗೆ ಪತ್ರ ಬರೆದಿದ್ದೇನೆ. ಸುಸಂಸ್ಕೃತ ಹಾಗೂ ಶಾಂತಿಪ್ರಿಯ ಜಿಲ್ಲೆಯಾಗಿರುವ ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಅಯೋಮಯವಾಗಿದೆ. ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವರು ಒಮ್ಮೆ ಜಿಲ್ಲೆಗೆ ಭೇಟಿ ನೀಡಬೇಕೆಂದು ಪತ್ರ ಬರೆದಿದ್ದೇನೆ ಎಂದರು.












Click it and Unblock the Notifications