ಸಿದ್ದರಾಮಯ್ಯ ಕೆಳಗೆ ಬಿದ್ದರೆಂದು ನಾನೊಂದು ಕಲ್ಲು ಹೊಡೆಯಲ್ಲ; ಈಶ್ವರಪ್ಪ
ಶಿವಮೊಗ್ಗ, ಸೆಪ್ಟೆಂಬರ್ 28: ಯಾವಾಗಲೂ ಸಿದ್ದರಾಮಯ್ಯ ಬಗ್ಗೆ ಕಿಡಿಕಾರುತ್ತಿದ್ದ ಸಚಿವ ಕೆ.ಎಸ್. ಈಶ್ವರಪ್ಪ ಈಗ ಸಿದ್ದರಾಮಯ್ಯ ಅವರ ಬಗ್ಗೆ ಮೃದು ಮಾತುಗಳನ್ನು ಆಡಿದ್ದಾರೆ. "ಯಾವುದೇ ವ್ಯಕ್ತಿ ಹಾಗೂ ಸ್ಥಾನಮಾನ ಯಾವುದೂ ಶಾಶ್ವತವಲ್ಲ. ನನ್ನನ್ನೂ ಸೇರಿದಂತೆ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಯಾರೇ ಆಗಲಿ ಇದನ್ನ ಅರ್ಥ ಮಾಡ್ಕೋಬೇಕು. ಸಿದ್ದರಾಮಯ್ಯ ಕೆಳಗೆ ಬಿದ್ದಿದ್ದಾರೆ ಎಂದು ನಾನೊಂದು ಕಲ್ಲು ಹೊಡಿಯೋದಿಲ್ಲ" ಎಂದಿದ್ದಾರೆ ಅವರು.
"ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪಕ್ಷದೊಂದಿಗೆ ಇದ್ದ ಅವರ ಸಂಬಂಧ ಹೇಗಿತ್ತು ಈಗ ಗೊತ್ತಾಗುತ್ತಿದೆ. ಸರ್ವಾಧಿಕಾರಿ ಧೋರಣೆ ಮಾಡ್ಕೊಂಡು ಅಧಿಕಾರ ನಡೆಸಿದರು. ಕುತಂತ್ರ ರಾಜಕಾರಣವೇ ಕಾಂಗ್ರೇಸ್ ನಿರ್ನಾಮಕ್ಕೆ ಕಾರಣ. ಈಗ ಸರ್ಕಾರವೇ ಬಿದ್ದೋಯ್ತು. ಇದು ಎಲ್ಲಾ ಪಕ್ಷದವರಿಗೂ ಪಾಠ. ಸಿದ್ದರಾಮಯ್ಯನವರಿಗೆ ಮಾತ್ರ ಅಲ್ಲ, ಯಾವುದೇ ವ್ಯಕ್ತಿ ಪಕ್ಷದ ಬೆಂಬಲ ಇಲ್ಲದೇ ಅಧಿಕಾರಕ್ಕೆ ಏರಲು ಆಗಲ್ಲ. ಸಂಘಟನೆ ಮೀರಿ ಯಾವುದೇ ವ್ಯಕ್ತಿ ಉದ್ಧಾರ ಆಗಲು ಸಾಧ್ಯವಿಲ್ಲ. ಹಾಗೆ ಹೋದರೆ ಅವರೇ ನಾಶವಾಗ್ತಾರೆ ವಿನಃ ಸಂಘಟನೆಯಲ್ಲ" ಎಂದು ಹೇಳಿದರು.

ಈ ಸಂದರ್ಭದಲ್ಲಿ ಮರು ಖಾತೆ ಹಂಚಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, "ನನಗೆ ಯುವಜನ ಹಾಗೂ ಕ್ರೀಡಾ ಇಲಾಖೆಯನ್ನು ಸಿಎಂ ನೀಡಿದ್ದಾರೆ. ಸಿಎಂ ಬಳಿ ಚರ್ಚಿಸಿ, ಜವಾಬ್ದಾರಿ ವಹಿಸಿಕೊಳ್ಳಬೇಕೋ ಬೇಡವೋ ನಿರ್ಧಾರ ಮಾಡುತ್ತೇನೆ. ಅನರ್ಹ ಶಾಸಕರ ಬಗ್ಗೆ ನ್ಯಾಯಾಲಯದಲ್ಲಿ ಏನು ತೀರ್ಪು ಬರುತ್ತದೆ ಯಾರೂ ಹೇಳಲು ಸಾಧ್ಯವಿಲ್ಲ. ಆದರೆ ಮೊನ್ನೆ ಸುಪ್ರೀಂ ಕೋರ್ಟ್ ತೆಗೆದುಕೊಂಡ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಸಿದ್ದರಾಮಯ್ಯನವರ ಮಾತು ಕೇಳಿ, ಆಗಿನ ಸ್ಪೀಕರ್ ಈ ನಿರ್ಧಾರ ಕೈಗೊಂಡಿದ್ದರು. ಅಂತಿಮವಾಗಿ ನ್ಯಾಯಾಲಯದಲ್ಲಿ ಅನರ್ಹರಿಗೆ ನ್ಯಾಯ ಸಿಗುವ ವಿಶ್ವಾಸವಿದೆ" ಎಂದರು.












Click it and Unblock the Notifications