ತೀರ್ಥಹಳ್ಳಿ; ಅಡಿಕೆ ಸಸಿ ಹಿಡಿದು ಕಿಮ್ಮನೆ ಅಹೋರಾತ್ರಿ ಪ್ರತಿಭಟನೆ
ಶಿವಮೊಗ್ಗ, ಡಿಸೆಂಬರ್ 20: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿಯಲ್ಲಿ ಅಹೋರಾತ್ರಿ ಪ್ರತಿಭಟನೆಯನ್ನು ನಡೆಸಿದರು. ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ರಾತ್ರಿ ಅಡಿಕೆ ಸಸಿಯನ್ನು ಹಿಡಿದು ಪಟ್ಟದ ಪ್ರಮುಖ ರಸ್ತೆಯಲ್ಲಿ ಜಾಥಾ ನಡೆಸಿದ ಕಿಮ್ಮನೆ ರತ್ನಾಕರ್ ಬಳಿಕ ಅರಣ್ಯ ಇಲಾಖೆ ಕಚೇರಿಯೆದುರು ಧರಣಿ ನಡೆಸಿದರು. ಬಿಜೆಪಿ ಮತ್ತು ಬಿಜೆಪಿ ಬೆಂಬಲಿತ ಅಧಿಕಾರಿಗಳ ವಿರುದ್ಧ ವಾಗ್ದಾಳಿಯನ್ನು ನಡೆಸಿದರು.
ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನಲೆಯಲ್ಲಿ ರಾಜಕೀಯ ದ್ವೇಷಕ್ಕಾಗಿ 2 ಸಾವಿರ ಅಡಿಕೆ ಗಿಡಗಳನ್ನು ಅರಣ್ಯ ಇಲಾಖೆಯವರು ನಾಶ ಮಾಡಿದ್ದಾರೆ. ಇದಕ್ಕೆ ಬಿಜೆಪಿಯವರ ಒತ್ತಡವೇ ಕಾರಣ ಎಂದು ಆರೋಪಿಸಿದರು. ನೂರಾರು ಜನರು ಕಿಮ್ಮನೆ ರತ್ನಾಕರ ಅವರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಪ್ರತಿಭಟನೆಗೆ ಕಾರಣ; ಆರಗ ಸಮೀಪದ ಸುಪ್ರೀತಾ ರಂಜನ್ ಮಹಿಳಾ ಮೀಸಲಾತಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಕಣಕ್ಕಿಳಿದಿದ್ದಾರೆ. ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಲು ಅರಣ್ಯ ಅಧಿಕಾರಿಗಳ ಮೂಲಕ ಬಿಜೆಪಿಯವರು ಒತ್ತಡ ತಂದಿದ್ದಾರೆ.
ಇದಕ್ಕೆ ಅವರು ಒಪ್ಪದೇ ಇದ್ದಾಗ ಬೀಸು ಗ್ರಾಮದ ಸರ್ವೇ ನಂಬರ್ 26ರಲ್ಲಿ ಇರುವ ಜಮೀನಿನಲ್ಲಿದ್ದ 2 ಸಾವಿರ ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ. ಹೀಗೆ ನಾಶ ಮಾಡಿದ ಅಡಿಕೆ ಗಿಡಗಳನ್ನು ಹಿಡಿದುಕೊಂಡು ಕಿಮ್ಮನೆ ಅಹೋರಾತ್ರಿ ಧರಣಿಯನ್ನು ಮಾಡಿದರು.

ಆರಗ ಜ್ಞಾನೇಂದ್ರ ಪ್ರತಿಕ್ರಿಯೆ : ಕಿಮ್ಮನೆ ರತ್ನಾಕರ್ ಅವರು ಧರಣಿ ನಡೆಸಿ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಡಿಕೆ ಸಸಿಗಳನ್ನು ನಾಶ ಮಾಡಿದ ಕೃತ್ಯದ ಬಗ್ಗೆ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ. ಕಟು ಶಬ್ದಗಳಿಂದ ಅವರು ಅಧಿಕಾರಿಗಳ ಕ್ರಮವನ್ನು ಖಂಡಿಸಿದ್ದಾರೆ. ತಕ್ಷಣ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಇಲಾಖೆ ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.












Click it and Unblock the Notifications