ಕಾಂಗ್ರೆಸ್ ವಕ್ತಾರರಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇಮಕ
ಶಿವಮೊಗ್ಗ, ಸೆಪ್ಟೆಂಬರ್ 22: ಮಾಜಿ ಸಚಿವ, ಮಲೆನಾಡು ಭಾಗದ ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ರನ್ನು ಕಾಂಗ್ರೆಸ್ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ. 2018ರ ಚುನಾವಣೆಯಲ್ಲಿ ಕಿಮ್ಮನೆ ರತ್ನಾಕರ್ ಸೋಲು ಅನುಭವಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಮಾಧ್ಯಮಗಳಲ್ಲಿ ನಮ್ಮ ವಿಚಾರ ಮತ್ತು ದೃಷ್ಟಿಕೋನ ಪರಿಣಾಮಕಾರಿಯಾಗಿ ಬಿಂಬಿತವಾಗಬೇಕಿರುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.
ತಮಗಿರುವ ಅನುಭವ, ತಿಳುವಳಿಕೆಗಳೊಂದಿಗೆ ವಿಷಯವನ್ನು ಸಮರ್ಥವಾಗಿ ಮಂಡಿಸುವ ಸಾಮರ್ಥ್ಯವನ್ನು ಗಮನಿಸಿ ನಿಮ್ಮನ್ನು ಕೆಪಿಸಿಸಿ ವಕ್ತಾರರಾಗಿ ನೇಮಕಮಾಡಲಾಗಿದೆ ಎಂದು ಡಿ. ಕೆ. ಶಿವಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.
ಈ ಜವಾಬ್ದಾರಿಯನ್ನು ನೀವು ವಹಿಸಿಕೊಂಡು ಕೆಪಿಸಿಸಿಯ ಸಂವಹನ ಮತ್ತು ಮಾಧ್ಯಮ ಮುಖ್ಯಸ್ಥರು ನೀಡುವ ಸಲಹೆ, ಸೂಚನೆ ಮತ್ತು ಮಾರ್ಗದರ್ಶನಗಳ ಮೇಲೆ ತಕ್ಷಣವೇ ಕಾರ್ಯಪ್ರವೃತ್ತವಾಗಬೇಕು ಎಂದು ಆದೇಶದಲ್ಲಿ ಕೋರಲಾಗಿದೆ.

ಪಕ್ಷ ಸಂಘಟನೆ ಜವಾಬ್ದಾರಿ
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಲೆನಾಡು ಭಾಗದ ಸರಳ ರಾಜಕಾರಣಿಗಳಲ್ಲಿ ಒಬ್ಬರು. ಮಾಜಿ ಸಚಿವರಿಗೆ ಕೆಪಿಸಿಸಿ ವಕ್ತಾರ ಹುದ್ದೆಯನ್ನು ನೀಡುವ ಮೂಲಕ ಪಕ್ಷ ಸಂಘಟನೆ, ಕಾಂಗ್ರೆಸ್ ಪಕ್ಷದ ಚಿಂತನೆಗಳನ್ನು ರಾಜ್ಯದ ಜನರ ಮುಂದಿಡುವ ಅವಕಾಶವನ್ನು ಪಕ್ಷ ನೀಡಿದೆ.

ಶಿಕ್ಷಣ ಸಚಿವರಾಗಿದ್ದರು
2013ರ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಿಮ್ಮನೆ ರತ್ನಾಕರ್ ಗೆಲುವು ಸಾಧಿಸಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಕಿಮ್ಮನೆ ರತ್ನಾಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಖಾತೆ ಜವಾಬ್ದಾರಿ ನೀಡಿದ್ದರು.

ಮತ್ತೆ ವಕೀಲ ವೃತ್ತಿ ಆರಂಭ
ರಾಜಕೀಯಕ್ಕೆ ಬರುವ ಮೊದಲಿನಿಂದಲೂ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿಯಲ್ಲಿ ವಕೀಲರಾಗಿ ಚಿರಪರಿಚಿತರು. ಸಚಿವ ಸ್ಥಾನ ಕಳೆದುಕೊಂಡು, 2018ರ ಚುನಾವಣೆಯಲ್ಲಿ ಸೋತ ಬಳಿಕ ಕಿಮ್ಮನೆ ರತ್ನಾಕರ್ ವಕೀಲ ವೃತ್ತಿ ಮುಂದುವರೆಸಿದ್ದಾರೆ. ಅಧ್ಯಯನಶೀಲತೆ ಮತ್ತು ಅಪಾರ ಜ್ಞಾನ ಹೊಂದಿರುವ ರಾಜಕೀಯ ನಾಯಕರಲ್ಲಿ ಕಿಮ್ಮನೆ ರತ್ನಾಕರ ಸಹ ಒಬ್ಬರು.

2018ರ ಚುನಾವಣೆ ಸೋಲು
2013ರ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಕಿಮ್ಮನೆ ರತ್ನಾಕರ್ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ ವಿರುದ್ಧ ಸೋಲು ಕಂಡಿದ್ದಾರೆ. ಪ್ರವಾಹ, ಕೋವಿಡ್ ಪರಿಸ್ಥಿತಿ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸಂಚಾರ ನಡೆಸಿ ಜನರ ಅಹವಾಲುಗಳನ್ನು ಆಲಿಸಿದ್ದಾರೆ. ಸಂಕಷ್ಟ ಬಗೆಹರಿಸಲು ಪ್ರಯತ್ನ ನಡೆಸಿದ್ದಾರೆ.












Click it and Unblock the Notifications