ತೀರ್ಥಹಳ್ಳಿ; ನಂದಿತಾ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
ಶಿವಮೊಗ್ಗ, ಮೇ 21 : ತೀರ್ಥಹಳ್ಳಿ ರಾಜಕಾರಣದ ದಿಕ್ಕು ಬದಲಿಸಿದ್ದ ನಂದಿತಾ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ನಂದಿತಾ ಸಾವಿನ ಬಳಿಕ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಎಲ್ಲಾ ಪ್ರಕರಣಗಳು ರದ್ದುಗೊಂಡಿವೆ.
Recommended Video
ಕರ್ನಾಟಕ ಸರ್ಕಾರ ನಂದಿತಾ ಸಾವಿನ ಬಳಿಕ ನಡೆದ ಗಲಭೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಎಲ್ಲಾ 5 ಪ್ರಕರಣಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ತೀರ್ಥಹಳ್ಳಿ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದ್ದ ಪ್ರಕರಣಕ್ಕೆ ತೆರೆ ಬಿದ್ದಿದೆ.
ನಂದಿತಾ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಕ್ಲೀನ್ ಚಿಟ್ ನೀಡಿತ್ತು. ಆದ್ದರಿಂದ, ಸರ್ಕಾರ ನಂದಿತಾ ಸಾವಿನ ಬಳಿಕ ನಡೆದ ಗಲಭೆ ಕುರಿತು ದಾಖಲಾಗಿದ್ದ ಎಲ್ಲಾ ಪ್ರಕರಣ ರದ್ದುಗೊಳಿಸಿದೆ.
ನಂದಿತಾ ಸಾವಿನ ಪ್ರಕರಣದ ಬಳಿಕ ನಡೆದ ಗಲಭೆ ಕುರಿತು ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆಲವರು ಬಳ್ಳಾರಿ ಜೈಲಿಗೂ ಹೋಗಿದ್ದರು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಆದರೆ, ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಕಾರಣ ನ್ಯಾಯಾಲಯಕ್ಕೆ ಅಲೆದಾಡಬೇಕಿತ್ತು.

ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹ
2014ರ ನವೆಂಬರ್ 3ರಂದು ನಂದಿತಾ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ತೀರ್ಥಹಳ್ಳಿ ಪಟ್ಟಣದ ಸಂಸ್ಕೃತಿ ಮಂದಿರದ ಆವರಣದಲ್ಲಿ ಸೇರಿದ್ದ ಜನರು ಪ್ರತಿಭಟನೆ ನಡೆಸಿದ್ದರು. ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪ್ರತಿಭಟನೆ ನಡೆಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಆಗ ಗಲಭೆ ಉಂಟಾಗಿ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗಿತ್ತು. ಬಳಿಕ ಪಟ್ಟಣದಲ್ಲಿ ಕೋಮು ಗಲಭೆ ನಡೆದಿತ್ತು.

47 ಜನರ ವಿರುದ್ಧ ಜಾರ್ಜ್ ಶೀಟ್
ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕ ಆರಗ ಜ್ಞಾನೇಂದ್ರ (ಹಾಲಿ ಶಾಸಕ) ಸೇರಿದಂತೆ 47 ಜನರ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಶಾಂತಿ ಭಂಗ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ, ಪೊಲೀಸ್ ವಾಹನ ಜಖಂ, ಸೆಕ್ಷನ್ 144 ಉಲ್ಲಂಘನೆ ಸೇರಿದಂತೆ ವಿವಿಧ ಕಲಂ ಅನ್ವಯ ಪ್ರಕರಣ ದಾಖಲಾಗಿತ್ತು.

ಯಾರು ಈ ನಂದಿತಾ?
ನಂದಿತಾ ತೀರ್ಥಹಳ್ಳಿಯ ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ. 2014ರ ಅಕ್ಟೋಬರ್ 30ರಂದು ಶಾಲೆಗೆ ಹೋಗುವುದಾಗಿ ಬಾಳೇಬೈಲಿನ ಮನೆಯಿಂದ ಹೊರಟಿದ್ದಳು. ಮಧ್ಯಾಹ್ನ ಆಕೆ ಆನಂದಗಿರಿ ಗುಡ್ಡದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕಟ್ಟಿಗೆ ತರಲು ಹೋಗಿದ್ದ ಮಹಿಳೆಯರು ಆಕೆಯನ್ನು ನೋಡಿ ಮನೆಗೆ ಕರೆದುಕೊಂಡು ಬಂದಿದ್ದರು. ಮೂವರು ಕಾರಿನಲ್ಲಿ ತನ್ನನ್ನು ಅಪಹರಿಸಿದ್ದಾರೆ ಎಂದು ಆಕೆ ಮಾಹಿತಿ ನೀಡಿದ್ದಳು. ಬಳಿಕ ಅವರ ತಂದೆಯ ಜೊತೆ ಕಳುಹಿಸಿಕೊಡಲಾಗಿತ್ತು.

ಅಕ್ಟೋಬರ್ 31ರಂದು ಸಾವು
ಮನೆಗೆ ತೆರಳಿದ ನಂದಿತಾಗೆ ವಾಂತಿಯಾಗಿತ್ತು. ಆಕೆಗೆ ಪಟ್ಟಣದ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳಿಸಲಾಗಿತ್ತು. ಆದರೆ, ಅಲ್ಲಿಂದ ರಾತ್ರಿ ಮಣಿಪಾಲ್ಗೆ ಕಳಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಳು. ನಂದಿತಾ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲು ಅನ್ಯಕೋವಿನ ಯುವಕರು ಪ್ರಯತ್ನಿಸಿದ್ದಾರೆ ಎಂಬ ಸುದ್ದಿ ಪಟ್ಟಣದಲ್ಲಿ ಹಬ್ಬಿತ್ತು. ಇದರಿಂದಾಗಿ ಕೋಮುಗಲಭೆ ನಡೆದು ಹಲವು ದಿನ ಕರ್ಫ್ಯೂ ಜಾರಿಯಾಗಿತ್ತು. ಸರ್ಕಾರ ನಂದಿತಾ ನಿಗೂಢ ಸಾವಿನ ಪ್ರಕರಣದ ತನಖೆಯನ್ನು ಸಿಐಡಿಗೆ ವಹಿಸಿತ್ತು.












Click it and Unblock the Notifications