ಶಿವಮೊಗ್ಗ: ಬಂಗಾರಪ್ಪ ಪುತ್ರಿ ಗೀತಾ ನಾಮಪತ್ರ ಸಲ್ಲಿಕೆ
ಶಿವಮೊಗ್ಗ, ಮಾ 24: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರಿ ಹಾಗೂ ಖ್ಯಾತ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಸೋಮವಾರ ಮಧ್ಯಾಹ್ನ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಗೆ ಪತಿ ಶಿವರಾಜ್ ಹಾಗೂ ಸೋದರ ಮಧು ಬಂಗಾರಪ್ಪ ಅವರ ಜತೆ ತೆರಳಿ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಗೀತಾ ಶಿವರಾಜ್ ಕುಮಾರ್ ದಂಪತಿ ಸೋಮವಾರ ಬೆಳಗ್ಗೆ ಕೋಟೆ ಗಣೇಶನ ಗುಡಿ, ಮಾರಿಕಾಂಬ ದೇವಾಲಯ, ಸೇಕ್ರೇಡ್ ಹಾರ್ಟ್ ಚರ್ಚ್ ಹಾಗೂ ಮಸೀದಿಗೆ ತೆರಳಿ ವಿಶೇಷ ಪೂ, ಪ್ರಾರ್ಥನೆ ಸಲ್ಲಿಸಿದ ಬಳಿಕ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಗೀತಾ ಅವರಿಗೆ ಪತಿ ಶಿವರಾಜ್ ಕುಮಾರ್ ಹಾಗೂ ಸಹೋದರ ಮಧು ಬಂಗಾರಪ್ಪ ಹಾಗೂ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರು ಸಾಥ್ ನೀಡಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಅಮ್ಮನ ಆಸೆ ಈಡೇರಿಸಲು ಹಾಗೂ ಅಪ್ಪ ಬಂಗಾರಪ್ಪ ಅವರು ಬಿಟ್ಟು ಹೋಗಿರುವ ಅಪೂರ್ಣವಾದ ಕೆಲಸಗಳನ್ನು ಪೂರ್ಣ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಬೇರೆ ಯಾವುದೇ ಆಸೆ ಇಲ್ಲ. ರಾಜಕೀಯ ರಂಗ ನನಗೇನು ಹೊಸದೇನಲ್ಲ. ನನಗೆ ಜನರ ಕಷ್ಟಗಳ ಅರಿವಿದೆ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದರು.

ಜನತೆಗೆ ನನ್ನ ಬಗ್ಗೆ ತಿಳಿದಿದೆ: ಶಿವಮೊಗ್ಗ ಜಿಲ್ಲೆಯ ಜನರಿಗೆ ಬಂಗಾರಪ್ಪ ಏನು ಎಂಬುದು ಚೆನ್ನಾಗಿ ಗೊತ್ತಿದೆ. ಅಷ್ಟೇ ಅಲ್ಲ ಬಂಗಾರಪ್ಪನವರ ಮಕ್ಕಳು ಏನು ಎಂಬುದು ಅರ್ಥವಾಗಿದೆ. ಆದ್ದರಿಂದ ನಾನು ಎಲ್ಲವನ್ನು ಬಿಡಿಸಿ ಹೇಳಬೇಕಾಗಿಲ್ಲ.
ಯಾವುದೇ ಕಾರಣಕ್ಕೂ ಡಾ.ರಾಜ್ ಕುಮಾರ್ ಕುಟುಂಬದ ವಿಚಾರಗಳನ್ನಾಗಲೀ ತಂದೆ ಬಂಗಾರಪ್ಪ ಕುಟುಂಬದ ವಿಚಾರಗಳನ್ನಾಗಲೀ ಚುನಾವಣೆಯ ಸಂದರ್ಭದಲ್ಲಿ ಪ್ರಸ್ತಾಪ ಮಾಡಲು ಹೋಗುವುದಿಲ್ಲ ಎಂದರು. ನನ್ನ ತಂದೆ ಮಾಡಿರುವ ಕೆಲಸಗಳು ನನ್ನ ಗೆಲುವಿಗೆ ಸಹಕಾರಿಯಾಗುತ್ತದೆ. ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸವಿದೆ.
ನನ್ನ ಸಹೋದರ ನನ್ನ ಬಗ್ಗೆ ಮಾತನಾಡಿರುವುದಕ್ಕೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಬಗ್ಗೆ ನಾನೇನು ತಲೆ ಕೆಡಿಸಿಕೊಂಡಿಲ್ಲ. ಎಲ್ಲರಿಗೂ ಸ್ಪರ್ಧೆ ಮಾಡುವ ಹಾಗೂ ಮಾತನಾಡುವ ಹಕ್ಕಿದೆ. ಮಾತನಾಡಲಿ ಎಂದು ಅವರು ಹೇಳಿದ್ದಾರೆ.












Click it and Unblock the Notifications