ಅಂಚೆ ಇಲಾಖೆಯ 'ಜ್ಞಾನ ಅಂಚೆ' ಸೇವೆ ಆರಂಭ, ವಿವರ
ಶಿವಮೊಗ್ಗ, ಮೇ 04: ಭಾರತೀಯ ಅಂಚೆ ಇಲಾಖೆಯು ಮೇ 1ರಿಂದ 'ಜ್ಞಾನ ಅಂಚೆ' ಸೇವೆಯನ್ನು ಆರಂಭಿಸಿದೆ. ಇದರಿಂದಾಗಿ ಪಠ್ಯ ಪುಸ್ತಕ, ಗೈಡ್ ಮತ್ತು ಸಾಹಿತ್ಯ ಕೃತಿಗಳನ್ನು ಸುಲಭವಾಗಿ ರವಾನಿಸಬಹುದಾಗಿದೆ. ಈ ಮೊದಲು ಪಠ್ಯ ಪುಸ್ತಕ, ಗೈಡ್ ಮತ್ತು ಸಾಹಿತ್ಯ ಕೃತಿಗಳನ್ನು ಭಾರತೀಯ ಅಂಚೆಯ ಬುಕ್ ಪ್ಯಾಕೇಟ್ ಮತ್ತು ಬುಕ್ ಪೋಸ್ಟ್ಗಳ ಮೂಲಕ ಕಳುಹಿಸಬೇಕಿತ್ತು. ಕೇಂದ್ರದ ಸಂವಹನ ಮತ್ತು ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ಸೇವೆಗೆ ಚಾಲನೆಯನ್ನು ನೀಡಿದ್ದಾರೆ.
ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಜಿ. ಈ ಸೇವೆ ಕುರಿತು ಮಾಹಿತಿ ನೀಡಿದ್ದಾರೆ. ಭಾರತೀಯ ಅಂಚೆ ಕಾಯ್ದೆ 2023ರಲ್ಲಿ ತಿದ್ದುಪಡಿ ತರುವ ಮೂಲಕ 'ಬುಕ್ ಪ್ಯಾಕೇಟ್' ಸೇವೆಯನ್ನು 2024ರ ಜೂನ್ರಲ್ಲಿ ರದ್ದುಪಡಿಸಲಾಗಿತ್ತು ಹಾಗೂ 'ಬುಕ್ ಪೋಸ್ಟ್' ಸೇವೆಯ ಹೆಸರನ್ನು ಬದಲಿಸಿ, ದರವನ್ನು ಏರಿಕೆ ಮಾಡಲಾಗಿತ್ತು. ಈ ಸೇವೆಗಳ ರದ್ದತಿಯಿಂದ ಪುಸ್ತಕಗಳ ರವಾನೆ ದುಬಾರಿಯಾಗಿ, ಈ ಕುರಿತು ಪ್ರಕಾಶಕರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅಂಚೆ ಇಲಾಖೆಗೆ ಪತ್ರವನ್ನು ಬರೆದಿತ್ತು. ಈಗ ಭಾರತೀಯ ಅಂಚೆ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ 'ಜ್ಞಾನ ಅಂಚೆ' ಸೇವೆಯನ್ನು ಆರಂಭಿಸಿದೆ. ಈ ಸೇವೆ ಪಠ್ಯ ಪುಸ್ತಕ ಮತ್ತು ಸಾಹಿತ್ಯ ಕೃತಿಗಳಿಗಷ್ಟೇ ಮೀಸಲಾಗಿದ್ದು, ಬಿಲ್ ಬುಕ್ಗಳು, ಆಹ್ವಾನ ಪತ್ರಿಕೆಗಳು, ಕರಪತ್ರಗಳು, ನಿಯತಕಾಲಿಕೆಗಳಿಗೆ ಲಭ್ಯವಿರುವುದಿಲ್ಲ.

ಪುಸ್ತಕ ಕಳಿಸುವುದು ಹೇಗೆ?; 'ಜ್ಞಾನ ಅಂಚೆ' ಸೇವೆಯಡಿಯಲ್ಲಿ ಪುಸ್ತಕಗಳನ್ನು ಕಳುಹಿಸುವವರು ಅದರ ಮೇಲೆ 'ಜ್ಞಾನ ಅಂಚೆ' ಎಂದು ಕಡ್ಡಾಯವಾಗಿ ನಮೂದಿಸಿರಬೇಕು. ಜೊತೆಗೆ ಕಳುಹಿಸುವವರು, ಪಡೆಯುವವರ ಮತ್ತು ಪ್ರಕಾಶಕರ ಹೆಸರು ಹಾಗೂ ವಿಳಾಸ ಇರಬೇಕು.
ಯಾವುದೇ ವಾಣಿಜ್ಯ ಉದ್ದೇಶದ ಕರಪತ್ರ ಮತ್ತು ಬರಹ ಇರಬಾರದು. ಕನಿಷ್ಠ 300 ಗ್ರಾಂ ನಿಂದ ಗರಿಷ್ಟ 5 ಕೆಜಿ ವರೆಗಿನ ಪಾರ್ಸಲ್ಗಳನ್ನು ಮಾತ್ರ 'ಜ್ಞಾನ ಅಂಚೆ' ಎಂದು ಪರಿಗಣಿಸಲಾಗುತ್ತದೆ. ಈ ಷರತ್ತುಗಳನ್ನು ಉಲ್ಲಂಘಿಸಿದ ಪಾರ್ಸಲ್ಗಳನ್ನು ಭಾರತೀಯ ಅಂಚೆ ಪಾರ್ಸಲ್ ಎಂದು ಪರಿಗಣಿಸಲಾಗುತ್ತದೆ ಮತ್ತು ಅಂತಹ ಪಾರ್ಸಲ್ಗಳಿಗೆ ಜ್ಞಾನ ಅಂಚೆ ಶುಲ್ಕ ಮತ್ತು ಭಾರತೀಯ ಅಂಚೆ ಪಾರ್ಸಲ್ ಶುಲ್ಕದ ನಡುವಣ ವ್ಯತ್ಯಾಸ ಎರಡು ಪಟ್ಟು ದಂಡ ವಿಧಿಸಲಾಗುತ್ತದೆ.
ಈ 'ಜ್ಞಾನ ಅಂಚೆ' ಅಡಿ ಭಾರತದೆಲ್ಲೆಡೆ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪುಸ್ತಕಗಳ ವಿತರಣೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಉದ್ದೇಶಿಸಲಾಗಿದೆ. ಈ ಸೇವೆ ಶಿಕ್ಷಣವನ್ನು ಬೆಂಬಲಿಸುವ ಮತ್ತು ದೇಶದ ಪ್ರತಿಯೊಂದು ಭಾಗದಲ್ಲಿಯೂ ಕಲಿಯುವವರಿಗೆ ಪುಸ್ತಕವನ್ನು ತಲುಪಿಸುವ ಭಾರತದ ಅಂಚೆಯ ಬದ್ಧತೆಯನ್ನು ಹೊಂದಿದೆ.
ಶಿಕ್ಷಣವು ಭವಿಷ್ಯದ ದೃಢವಾದ ಆಧಾರವಾಗಿದೆ, ಆದರೆ ಕಲಿಕೆಯ ಸಂಪತ್ತುಗಳಿಗೆ ಪ್ರದೇಶ, ಭೌಗೋಳಿಕತೆ ಅಥವಾ ಕೈಗೆಟುಕುವಿಕೆಗೆ ಅವಲಂಬಿತವಾಗಿರಬಾರದು. 'ಜ್ಞಾನ ಅಂಚೆ' ಸೇವೆಯನ್ನು ಈ ನಂಬಿಕೆಯಿಂದಲೇ ರಚಿಸಲಾಗಿದೆ, ಪಠ್ಯಪು ಸ್ತಕ, ತಯಾರಿ ಮಾರ್ಗದರ್ಶಿ ಅಥವಾ ಸಾಂಸ್ಕೃತಿಕ ಪುಸ್ತಕವು ದೇಶದ ಅತಿ ದೂರದ ಹಳ್ಳಿಯನ್ನೂ ತಲುಪಬೇಕಿದೆ.
ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, "ಹೊಸ ಶಿಕ್ಷಣ ನೀತಿ ಮತ್ತು ಪಠ್ಯಕ್ರಮದ ಅಡಿಯಲ್ಲಿ ಜ್ಞಾನ ಅಂಚೆ ಶಿಕ್ಷಣವನ್ನು ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸಲು ಅಗತ್ಯವಿರುವ ವಿತರಣಾ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಹೇಳಿದರು.
"ಕಲಿಕೆ ಮತ್ತು ಜ್ಞಾನ ಹಂಚಿಕೊಳ್ಳುವುದನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ಇದು ವಿಶಾಲವಾದ ಭಾರತದ ಅಂಚೆ ಜಾಲದ ಮೂಲಕ ಪುಸ್ತಕಗಳು ಮತ್ತು ಮುದ್ರಿತ ಶೈಕ್ಷಣಿಕ ಸಾಮಗ್ರಿಗಳನ್ನು ಕಳುಹಿಸಲು ಕೈಗೆಟುಕುವ ದರದ ಆಯ್ಕೆಯನ್ನು ನೀಡುತ್ತದೆ" ಎಂದರು.
'ಜ್ಞಾನ ಅಂಚೆ' ಅಡಿಯಲ್ಲಿ ಕಳುಹಿಸಲಾದ ಪುಸ್ತಕಗಳು ಮತ್ತು ಮುದ್ರಿತ ಶೈಕ್ಷಣಿಕ ಸಾಮಗ್ರಿಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ. ಪ್ಯಾಕೇಜುಗಳನ್ನು ಅತ್ಯಂತ ಕಡಿಮೆ ದರದಲ್ಲಿ ಕಳುಹಿಸಬಹುದು, 300 ಗ್ರಾಂ ವರೆಗೆ ಪ್ಯಾಕೆಟ್ಗಳಿಗೆ ಕೇವಲ ರೂ. 20 ರಿಂದ ಪ್ರಾರಂಭವಾಗಿ 5 ಕಿಲೋಗ್ರಾಂ ವರೆಗೆ ಪ್ಯಾಕೆಟ್ಗಳಿಗೆ ಗರಿಷ್ಠ ರೂ. 100 ದರವನ್ನು ನಿಗದಿ ಮಾಡಲಾಗಿದೆ.
ಈ ಸೇವೆ ಮೂಲಕ ಭಾರತದ ಅಂಚೆ ಇಲಾಖೆ ತನ್ನ ಶಾಶ್ವತ ಸಾರ್ವಜನಿಕ ಸೇವಾ ಬದ್ಧತೆಯನ್ನು ಪುನಃ ದೃಢಪಡಿಸುತ್ತದೆ, ಪ್ರತಿಯೊಂದು ಪುಸ್ತಕದ ಮೂಲಕ ಶಿಕ್ಷಣದ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಲಿಕೆಯ ಸಂಪತ್ತನ್ನು ಹೆಚ್ಚು ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಲಭ್ಯವಾಗುವಂತೆ ಮಾಡುವ ಮೂಲಕ ಅಂಚೆ ಇಲಾಖೆ ದೇಶಾದ್ಯಂತ ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಸಬಲಗೊಳಿಸುವ ತನ್ನ ಪರಂಪರೆಯನ್ನು ಮುಂದುವರಿಸುತ್ತಿದೆ.
'ಜ್ಞಾನ ಅಂಚೆ' ಮೇ 1 ರಿಂದ ಭಾರತಾದ್ಯಂತ ಎಲ್ಲಾ ಅಂಚೆ ಇಲಾಖೆ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ವಿವರಕ್ಕೆ ಹತ್ತಿರದ ಕಛೇರಿಯನ್ನು ಸಂಪರ್ಕಿಸಿ ಅಥವ www.indiapost.gov.in ವೆಬ್ಸೈಟ್ ನೋಡಿ.












Click it and Unblock the Notifications