ಭದ್ರಾವತಿಯಲ್ಲಿ ಭಾರಿ ಮಳೆ; ಹಳೇನಗರದ ಮನೆಗಳಿಗೆ ನುಗ್ಗಿದ ನೀರು
ಶಿವಮೊಗ್ಗ, ಅಕ್ಟೋಬರ್ 9: ಭದ್ರಾವತಿ ಪಟ್ಟಣದಲ್ಲಿ ನಿನ್ನೆ ಸಂಜೆ ಸುಮಾರು 2 ಗಂಟೆಗಳ ಕಾಲ ಎಡೆಬಿಡದೇ ಸುರಿದ ಭಾರೀ ಮಳೆಗೆ ಬಸವೇಶ್ವರ ವೃತ್ತ ಸೇರಿದಂತೆ ಪಟ್ಟಣದಲ್ಲಿನ ಕೆಲ ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಹಳೇನಗರದಲ್ಲಿ ಹಲವು ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಎನ್ ಎಸ್ ಟಿ ರಸ್ತೆಯಲ್ಲಿ ಸುಮಾರು ಒಂದು ಅಡಿಗೂ ಹೆಚ್ಚು, ಬಸವೇಶ್ವರ ಸರ್ಕಲ್ ಬಳಿಯ ರಸ್ತೆಯಲ್ಲಿ ಸುಮಾರು 2 ಅಡಿಗೂ ಅಧಿಕ ನೀರು ತುಂಬಿಕೊಂಡು, ಅಂಗಡಿ ಮುಂಗಟ್ಟುಗಳಿಗೆಲ್ಲಾ ನೀರು ನುಗ್ಗಿದೆ. ಎನ್ ಎಸ್ ಟಿ ರಸ್ತೆಯ ಪೊಲೀಸ್ ಠಾಣೆ ಸಮೀಪದ ನಾಲ್ಕೈದು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುತ್ತಿದ್ದಾರೆ. ನೀರೆತ್ತುವ ವಾಹನಗಳೊಂದಿಗೆ ಆಗಮಿಸಿದ ನಗರಸಭೆ ಸಿಬ್ಬಂದಿ ರಾತ್ರಿ 11.30ರವರೆಗೂ ನೀರು ಹೊರ ಹೊರಹಾಕುವ ಕಾರ್ಯಾಚರಣೆ ನಡೆಸಿದರು.

ನೀರು ನುಗ್ಗಲು ಕಾರಣವೇನು?
ಇಲ್ಲಿನ ನಿವಾಸಿಗಳ ಪ್ರಕಾರ, ಚರಂಡಿಯ ನೀರು ಹಿಮ್ಮುಖವಾಗಿ ಹರಿದಿದ್ದೇ ಮನೆಯೊಳಗೆ ನೀರು ನುಗ್ಗಲು ಕಾರಣ. ಮಳೆಗಾಲದ ಆರಂಭದಲ್ಲಿಯೂ ಒಮ್ಮೆ ಇದೇ ರೀತಿಯಾಗಿತ್ತು. ಒಳಚರಂಡಿ ವ್ಯವಸ್ಥೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿರುವುದೇ ಇದಕ್ಕೆಲ್ಲವೂ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜೊತೆಗೆ ಚರಂಡಿ ಸೇರಿದಂತೆ ರಾಜಕಾಲುವೆಗಳಲ್ಲಿನ ಹೂಳೆತ್ತೆದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ.












Click it and Unblock the Notifications