ಪರಪ್ಪನ ಅಗ್ರಹಾರ ಜೈಲಿನಿಂದ ಹರ್ಷ ಹತ್ಯೆ ಆರೋಪಿಗಳ ವಿಡಿಯೋ ಕಾಲ್: ಕುಟುಂಬ ಆಕ್ರೋಶ
ಶಿವಮೊಗ್ಗ,ಜು.5: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ಆರೋಪಿಗಳಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾಥಿತ್ಯ ನೀಡಲಾಗಿದೆ ಎಂಬ ಆಪಾದನೆ ಕೇಳಿ ಬಂದಿದೆ. ಜೈಲಿನಿಂದ ವಿಡಿಯೋ ಕಾಲ್ ಮಾಡಿ, ಆರೋಪಿಗಳು ತಮ್ಮ ಕುಟುಂಬದವರೊಂದಿಗೆ ಮಾತನಾಡಿದ ವಿಡಿಯೋಗಳು ವೈರಲ್ ಆಗಿದೆ.
ಹಿಂದೂ ಹರ್ಷ ಹತ್ಯೆ ಪ್ರಕರಣ ಸಂಬಂಧ ಬುದ್ಧನಗರದ ಮಹಮದ್ ಖಾಸೀಫ್ ಮತ್ತು ಆತನ 9 ಸಹಚರರನ್ನು ಬೆಂಗಳೂರಿನಲ್ಲಿ ಪರಪ್ಪನ ಅಗ್ರಹಾರದಲ್ಲಿ ಇಡಲಾಗಿದೆ. ಆರೋಪಿಗಳು ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದು, ಕುಟುಂಬದವರು, ಸ್ನೇಹಿತರ ಜೊತೆಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಹರ್ಷನ ತಂದೆ ನಾಗರಾಜ್ ಅವರು, "ಜೈಲು ಅಧಿಕಾರಿಗಳು ದುಡ್ಡಿಗಾಗಿ ಏನು ಬೇಕಾದರೂ ಮಾಡಲು ರೆಡಿ ಇದ್ದಾರೆ. ಹರ್ಷನ ಕೊಲೆ ಮಾಡಿದ ಆರೋಪಿಗಳು ಜೈಲಿನಲ್ಲಿ ಆರಾಮಾಗಿದ್ದಾರೆ. ತಪ್ಪಿತಸ್ಥ ಜೈಲು ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು," ಎಂದು ಆಗ್ರಹಿಸಿದ್ದಾರೆ.

ಆಕ್ರೋಶ ವ್ಯಕ್ತಪಡಿಸಿದ ಜನ
ಆರೋಪಿಗಳು ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಗೊತ್ತಾಗುತ್ತಿದ್ದಂತೆ ಶಿವಮೊಗ್ಗ ಮತ್ತು ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಆರೋಪಿಗಳಿಂದ ಮೊಬೈಲ್ ಫೋನ್'ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಹರ್ಷನ ಹತ್ಯೆ ಆರೋಪಿಗಳಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾಥಿತ್ಯ ನೀಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದೂ ಸಂಘಟನೆ ಮುಖಂಡರು, ಕಾರ್ಯಕರ್ತರು, ಹರ್ಷನ ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕೂಡಲೇ ಜೈಲರ್ ಸಸ್ಪೆಂಡ್ ಗೆ ಆಗ್ರಹ
ಹರ್ಷನ ತಾಯಿ ಪದ್ಮಾ ಮಾತನಾಡಿ, "ಆರೋಪಿಗಳಿಗೆ ಜೈಲಿನಲ್ಲಿ ಒಳ್ಳೆಯ ಉಪಚಾರ ಸಿಗುತ್ತಿದೆ. ಹಾಗಿದ್ದ ಮೇಲೆ ಅವರನ್ನು ಜೈಲಿನಲ್ಲಿ ಇಡುವ ಬದಲು ಹೊರಗೆ ಬಿಡುವುದೆ ಒಳ್ಳೆಯದು. ಸರ್ಕಾರ ಮತ್ತು ಕಾನೂನಿನ ಮೇಲೆ ನಂಬಿಕೆ ಇತ್ತು. ಈಗ ಆರೋಪಿಗಳು ಜೈಲಿನಲ್ಲಿ ಆರಾಮಾಗಿ ಇರುವುದನ್ನು ಗಮನಿಸಿ ಆ ನಂಬಿಕೆಯೆ ಹೊರಟು ಹೋಗಿದೆ," ಎಂದು ಕಣ್ಣೀರಿಟ್ಟರು.
ಹರ್ಷನ ಅಕ್ಕ ರಜನಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, "ಹರ್ಷನನ್ನು ಕೊಂದವರು ಜೈಲಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡು, ಹೆಂಡತಿ, ಮಕ್ಕಳ ಜೊತೆಗೆ ಮಾತನಾಡುತ್ತಿದ್ದಾರೆ. ಅವರಿಗೆ ಜೈಲಿನಲ್ಲಿ ಎಲ್ಲಾ ಸವಲತ್ತುಗಳು ಸಿಗುತ್ತಿವೆ. ಕೂಡಲೆ ಜೈಲರನ್ನು ಸಸ್ಪೆಂಡ್ ಮಾಡಬೇಕು," ಎಂದು ಆಗ್ರಹಿಸಿದರು.

ಅಂಥವರ ವಿರುದ್ಧ ಪ್ರಕರಣ ದಾಖಲು: ಗೃಹಸಚಿವ
ಇನ್ನು, ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, "ಕಾರಾಗೃಹದ ನಿಯಮಗಳನ್ನು ಉಲ್ಲಂಘಿಸಲೆಂದೇ ಕೆಲ ಸಿಬ್ಬಂದಿ ಅಲ್ಲಿದ್ದಾರೆ. ಅಂಥವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ. ಹರ್ಷ ಹತ್ಯೆ ಆರೋಪಿಗಳು ಮೊಬೈಲ್ ಬಳಕೆ ಮಾಡಿರುವ ಕುರಿತು ಪೊಲೀಸ್ ಮಹಾ ನಿರ್ದೇಶಕರಿಂದ ಮಾಹಿತಿ ಪಡೆದಿದ್ದೇನೆ," ಎಂದು ತಿಳಿಸಿದರು.
"ಮೊಬೈಲ್ ಬಳಕೆ ಮಾಡಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಜೈಲಿನ ಮೇಲೆ ದಾಳಿ ಮಾಡಲಾಗಿದೆ. ಈಗಾಗಲೇ ಹಲವು ಜೈಲು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಮುಂದಿನ ದಿನ ಜೈಲುಗಳಲ್ಲಿ ಜಾಮರ್ ಅಳವಡಿಕೆ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಬಜೆಟ್ನಲ್ಲಿ ಹಣ ಮೀಸಲಿಡಲಾಗಿದೆ," ಎಂದು ತಿಳಿಸಿದರು.

ಆರೋಪಿಗಳಿಗೆ ಜೈಲಿನಲ್ಲಿ ಮೊಬೈಲ್: ಮುತಾಲಿಕ್ ಕೆಂಡಾಮಂಡಲ
ಹರ್ಷ ಹತ್ಯೆ ಪ್ರಕರಣದ ಆರೋಪಿಗಳಿಗೆ ಜೈಲಿನಲ್ಲಿ ಮೊಬೈಲ್ ಸಿಕ್ಕಿರುವುದಕ್ಕೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕೆಂಡಾಮಂಡಲವಾಗಿದ್ದಾರೆ. ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಪ್ರಮೋದ್ ಮುತಾಲಿಕ್ ಅವರು, ಅಧಿಕಾರಿಗಳ ಮಕ್ಕಳಿಗೆ ಇಂತಹ ಸ್ಥಿತಿ ಬಂದಿದ್ದರೆ, ಇದೆ ರೀತಿಯ ಸವಲತ್ತು ಕೊಡುತ್ತಿದ್ದರಾ. ಇದೇನಾ ಬಿಜೆಪಿಯ ಶಿಕ್ಷೆ ಕೊಡಿಸುವ ಜವಾಬ್ದಾರಿ ಎಂದು ಪ್ರಶ್ನೆ ಮಾಡಿದ್ದಾರೆ.
ಹರ್ಷ ಹತ್ಯೆ ಆರೋಪಿಗಳಿಗೆ ಮೊಬೈಲ್ ಸಿಕ್ಕಿರುವುದು, ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿರುವುದು ಜೈಲು ವ್ಯವಸ್ಥೆ ಕುರಿತು ಚರ್ಚೆ ಹುಟ್ಟಿಸಿದೆ.












Click it and Unblock the Notifications