ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಶುಭ ಸುದ್ದಿ
ಶಿವಮೊಗ್ಗ, ಏಪ್ರಿಲ್ 04; ಕೆಲವು ಮಾರ್ಪಾಡಿನೊಂದಿಗೆ ಶಿವಮೊಗ್ಗ-ತಿರುಪತಿ-ಚೆನ್ನೈ ರೈಲು ಸಂಚಾರ ಮತ್ತೆ ಆರಂಭವಾಗಲಿದೆ. ವಾರಕ್ಕೆ ಎರಡು ಬಾರಿ ಸಂಚಾರ ನಡೆಸುದ್ದ ರೈಲು ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡಿತ್ತು.
ಶಿವಮೊಗ್ಗದ ಸಂಸದ ಬಿ. ವೈ. ರಾಘವೇಂದ್ರ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. 2019-2020ರಲ್ಲಿ ಬಿ. ವೈ. ರಾಘವೇಂದ್ರ ಪ್ರಯತ್ನದ ಫಲವಾಗಿ ಶಿವಮೊಗ್ಗ-ರೇಣಿಗುಂಟ(ತಿರುಪತಿ) ಹಾಗೂ ಶಿವಮೊಗ್ಗ-ಬೆಂಗಳೂರು-ಮದ್ರಾಸ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾಗಿತ್ತು.
ವಾರಕ್ಕೆ ಎರಡು ಭಾರೀ ಸಂಚರಿಸುವ ರೈಲು ಸೇವೆ ಕೋವಿಡ್ ಪರಿಸ್ಥಿತಿಯಲ್ಲಿ ಸ್ಥಗಿತಗೊಂಡಿತ್ತು. ಈಗ ಕೋವಿಡ್ ಪರಿಸ್ಥಿತಿ ಹತೋಟಿಗೆ ಬಂದು ರೈಲು ಸೇವೆಗಳು ಆರಂಭವಾಗಿರುವ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಈ ರೈಲು ಸೇವೆಯನ್ನು ಪುನಃ ಆರಂಭಿಸಲಾಗುತ್ತಿದೆ.

ಈಗ ಏಪ್ರಿಲ್ 17ರಿಂದ ಶಿವಮೊಗ್ಗ-ಮದ್ರಾಸ್-ಶಿವಮೊಗ್ಗ(ವಯಾ-ರೇಣಿಗುಂಟ (ತಿರುಪತಿ) ಎಕ್ಸ್ಪ್ರೆಸ್ ರೈಲು ಸೇವೆ ಪುನಃ ಆರಂಭವಾಗುತ್ತಿದೆ. ಶಿವಮೊಗ್ಗದಿಂದ ಭಾನುವಾರ ಹಾಗೂ ಮಂಗಳವಾರ ಮತ್ತು ಮದ್ರಾಸ್ನಿಂದ ಸೋಮವಾರ ಮತ್ತು ಬುಧವಾರಗಳಂದು ಈ ರೈಲು ಸಂಚಾರ ನಡೆಸಲಿದೆ ಎಂದು ಮಾಹಿತಿ ನೀಡಲಾಗಿದೆ.
Summer Special Trains between #Secunderabad and #Tirupati" & Bi-Weekly Special Trains between #Shivamogga – #ChennaiCentral @VijayawadaSCR @drmgtl pic.twitter.com/KpxAadKQN2
— South Central Railway (@SCRailwayIndia) April 7, 2022
ವೇಳಾಪಟ್ಟಿ ಬದಲು; ಪರಿಷ್ಕೃತ ವೇಳಾಪಟ್ಟಿಯೊಂದಿಗೆ ರೈಲು ಸೇವೆ ಪುನಃ ಆರಂಭವಾಗುತ್ತಿದೆ. ವಾರಕ್ಕೆ ಎರಡು ದಿನ ಸಂಚರಿಸುವ ರೈಲು ಶಿವಮೊಗ್ಗದಿಂದ ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8.20ಕ್ಕೆ ರೇಣಿಗುಂಟ ಹಾಗೂ 11.10ಕ್ಕೆ ಮದ್ರಾಸ್ ತಲುಪುತ್ತದೆ. ಅದೇ ದಿನ ಮದ್ರಾಸ್ನಿಂದ ಸಂಜೆ 3.50ಕ್ಕೆ ಹೊರಡುವ ರೈಲು ರೇಣಿಗುಂಟಕ್ಕೆ ಸಂಜೆ 6.10 ಕ್ಕೆ ತಲುಪಲಿದೆ. ಮರುದಿನ ಬೆಳಗ್ಗೆ 7.55ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಮಲೆನಾಡು, ಕರಾವಳಿ ಹಾಗೂ ಶಿವಮೊಗ್ಗ ಭಾಗದ ಜನರು ರೇಣಿಗುಂಟಕ್ಕೆ ಮುಂಜಾನೆ ತಲುಪಿ ಸಂಜೆಯ ವೇಳೆಗೆ ತಿರುಪತಿಯಲ್ಲಿ ದೇವರ ದರ್ಶನ ಪಡೆದು ಅದೇದಿನ ರಾತ್ರಿ ಶಿವಮೊಗ್ಗ ಮರುಪ್ರಯಾಣ ಆರಂಭಿಸಲು ಅನುಕೂಲವಾಗಲಿದೆ.
ಈ ಮೊದಲು ರೈಲು ಶಿವಮೊಗ್ಗದಿಂದ ಮುಂಜಾನೆ ಹೊರಡುತ್ತಿತ್ತು. ಇದರಿಂದಾಗಿ ಶಿವಮೊಗ್ಗದಿಂದ ತಿರುಪತಿಗೆ ತೆರಳಬೇಕಿದ್ದ ಜನರು ಇಡೀ ದಿನ ಪ್ರಯಾಣ ಮಾಡಬೇಕಿತ್ತು. ಬದಲಾದ ಸಮಯದಿಂದ ರಾತ್ರಿ ಪ್ರಯಾಣದ ಮೂಲಕ ತಿರುಪತಿಯನ್ನು ತಲುಪಬಹುದಾಗಿದೆ.
ಶಿವಮೊಗ್ಗದಿಂದ ಹೊರಡುವ ರೈಲು ಚಿತ್ರದುರ್ಗ, ಬಳ್ಳಾರಿ, ಗುಂತಕಲ್ ಮೂಲಕ ರೇಣಿಗುಂಟ ಹಾಗೂ ಮದ್ರಾಸ್ಗೆ ಸಂಚಾರ ನಡೆಸಲಿದೆ. ಇದರಿಂದಾಗಿ ಮಲೆನಾಡು, ಬಯಲು ಸೀಮೆ ಜನರಿಗೆ ಸಹಾಯಕವಾಗಲಿದೆ.
ಶಿವಮೊಗ್ಗದಿಂದ ಹೊರಡುವ ರೈಲು ಭದ್ರಾವತಿ, ತರೀಕೆರೆ, ಬೀರೂರು, ಅಜ್ಜಂಪುರ, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಕೂರು, ರಾಯದುರ್ಗ, ಬಳ್ಳಾರಿ, ಗುಂತಕಲ್, ತಾಡಪತ್ರಿ, ಗುತ್ತಿ, ಯರಗುಂಟ, ಕಡಪ, ರಾಯಪೇಟ, ರೇಣಿಗುಂಟ, ಅರಕೋಣಂ, ಪರಂಬೂರ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಹಿಂದಿನ ವೇಳಾಪಟ್ಟಿ; ಹಿಂದೆ ಶಿವಮೊಗ್ಗದಿಂದ ತಿರುಪತಿಗೆ ಹೊರಡುವ ರೈಲು ಬೆಳಗ್ಗೆ ಶಿವಮೊಗ್ಗದಿಂದ ಹೊರಟು ರಾತ್ರಿ 8 ಗಂಟೆಗೆ ರೇಣಿಗುಂಟವನ್ನು ತಲುಪಿ ಅರ್ಧ ಗಂಟೆಯ ನಂತರ ಕೂಡಲೇ ಶಿವಮೊಗ್ಗಕ್ಕೆ ಮರು ಪ್ರಯಾಣವನ್ನು ಆರಂಭಿಸುತ್ತಿತ್ತು. ಇದರಿಂದಾಗಿ ಜನರಿಗೆ ಅನುಕೂಲವಾಗುತ್ತಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸಂಸದ ಬಿ. ವೈ. ರಾಘವೇಂದ್ರ ಶಿವಮೊಗ್ಗ-ಬೆಂಗಳೂರು ಮದ್ರಾಸ್ ಎಕ್ಸ್ಪ್ರೆಸ್ ಹಾಗೂ ಶಿವಮೊಗ್ಗ-ರೇಣಿಗುಂಟ(ತಿರುಪತಿ) ರೈಲುಗಳನ್ನು ಒಗ್ಗೂಡಿಸಿ ಶಿವಮೊಗ್ಗದಿಂದ ತಿರುಪತಿ ಹಾಗೂ ಮದ್ರಾಸ್ಗೆ ತೆರಳುವ ಯಾತ್ರಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲಿನ ಸಮಯ ಹಾಗೂ ಮಾರ್ಗವನ್ನು ಬದಲಿಸಲು ಮನವಿ ಮಾಡಿದ್ದರು.
ಶಿವಮೊಗ್ಗ-ರೇಣಿಗುಂಟ-ಮದ್ರಾಸ್ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಆರಂಭಿಸುವಂತೆ ರೈಲ್ವೆ ಸಚಿವರನ್ನು ಒತ್ತಾಯಿಸಿದ್ದರು. ಈಗ ಪರಿಷ್ಕೃತ ಮಾರ್ಗ, ವೇಳಾಪಟ್ಟಿಯೊಂದಿಗೆ ರೈಲು ಸಂಚಾರ ನಡೆಸಲಿದೆ.
ಏಪ್ರಿಲ್ 8ರಿಂದ ರೈಲು ಸಂಚಾರ; ನೈಋತ್ಯ ರೈಲ್ವೆ ಬೆಂಗಳೂರು-ಹಾಸನ ನಡುವೆ ಡೆಮು ರೈಲು ಸಂಚಾರವನ್ನು ಏಪ್ರಿಲ್ 8ರ ಶುಕ್ರವಾರದಿಂದ ಆರಂಭಿಸಲಿದೆ. ಕೋವಿಡ್ ಪರಿಸ್ಥಿತಿಗೂ ಮೊದಲು ಯಶವಂತಪುರ-ಹಾಸನ ನಡುವೆ ಸಂಚಾರ ನಡೆಸುತ್ತಿದ್ದ ರೈಲು ಈಗ ಕೆಎಸ್ಆರ್ ಬೆಂಗಳೂರು-ಹಾಸನ ನಡುವೆ ಸಂಚಾರ ನಡೆಸಲಿದೆ.












Click it and Unblock the Notifications