ಶಿವಮೊಗ್ಗ: ಪೇಂಟಿಂಗ್ ಗುತ್ತಿಗೆದಾರನಿಗೆ ಪೇಟಿಎಂ ಕಸ್ಟಮರ್ ಕೇರ್ ಹೆಸರಲ್ಲಿ ವಂಚನೆ
ಶಿವಮೊಗ್ಗ, ಏಪ್ರಿಲ್ 12: ಪೇಟಿಎಂ ಕಸ್ಟಮರ್ ಕೇರ್ ಸೆಂಟರ್ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಲಾಗಿದ್ದು, ಬ್ಯಾಂಕ್ ಖಾತೆಯಲ್ಲಿ ಪೂರ್ತಿ ಹಣ ಲಪಟಾಯಿಸಿ ಕೇವಲ 2 ರೂ. ಉಳಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಪೇಂಟಿಂಗ್ ಗುತ್ತಿಗೆದಾರ ಹೇಮಾಚಾರಿ ಎಂಬುವವರಿಗೆ ಪೇಟಿಎಂ ಕಸ್ಟಮರ್ ಕೇರ್ ಹೆಸರಿನಲ್ಲಿ ವಂಚಿಸಲಾಗಿದೆ. ಅವರ ಬ್ಯಾಂಕ್ ಖಾತೆಯಿಂದ 95 ಸಾವಿರ ಹಣವನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ.
ಏನಿದು ಪ್ರಕರಣ?
ಹೇಮಾಚಾರಿ ಅವರು ಪೇಂಟಿಂಗ್ ಗುತ್ತಿಗೆದಾರರಾಗಿದ್ದು, ತಮ್ಮೊಂದಿಗೆ ಕೆಲಸ ಮಾಡುವ ಸಂದೀಪ್ ಎಂಬವವರಿಗೆ ಹಣ ನೀಡಬೇಕಿತ್ತು. ಪೇಟಿಎಂ ಬಳಸಿ 25 ಸಾವಿರ ರೂ. ಹಣ ವರ್ಗಾಯಿಸಿದ್ದರು. ಆದರೆ ಸಂದೀಪ್ ಅವರ ಖಾತೆಗೆ ಹಣ ಬಂದಿರಲಿಲ್ಲ. ಇತ್ತ ಹೇಮಾಚಾರಿ ಅವರ ಖಾತೆಯಿಂದ 25 ಸಾವಿರ ರೂ. ಕಡಿತವಾಗಿತ್ತು.

ಕಸ್ಟಮರ್ ಕೇರ್ ನಂಬರ್
25 ಸಾವಿರ ರೂ. ಹಣದ ಕುರಿತು ಮಾಹಿತಿ ಪಡೆಯಲು ಹೇಮಾಚಾರಿ ಅವರು ಪೇಟಿಎಂ ಕಸ್ಟಮರ್ ಕೇರ್ ನಂಬರ್ ಹುಡುಕಿದ್ದಾರೆ. ಗೂಗಲ್ನಲ್ಲಿ ಸಿಕ್ಕ ಒಂದು ನಂಬರ್ಗೆ ಕರೆ ಮಾಡಿದ್ದಾರೆ. ತಾನು ಪೇಟಿಎಂ ಕಸ್ಟಮರ್ ಕೇರ್ ಸೆಂಟರ್ನ ಅಶ್ವಿನ್ ಕುಮಾರ್ ಎಂದು ವ್ಯಕ್ತಿಯೊಬ್ಬ ಮಾತನಾಡಿದ್ದಾನೆ. ಈ ವೇಳೆ ಹೇಮಾಚಾರಿ ಅವರು ತಮ್ಮ ಸಮಸ್ಯೆ ತಿಳಿಸಿದ್ದಾರೆ.
'ಮೊಬೈಲ್'ಗೆ ಬಂದ ನಂಬರ್ ಹೇಳಿ'
ಪೇಟಿಎಂ ಕಸ್ಟಮರ್ ಕೇರ್ ಸೆಂಟರ್ನವರಂತೆ ಮಾತನಾಡಿದ ವ್ಯಕ್ತಿ, ಹೇಮಾಚಾರಿ ಅವರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾನೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ನಂಬರ್ ಪಡೆದುಕೊಂಡಿದ್ದಾನೆ. 'ನಿಮ್ಮ ಹಣ ನಿಮ್ಮ ಖಾತೆಗೆ ಬರಲಿದೆ. ಇದಕ್ಕಾಗಿ ನಿಮ್ಮ ಮೊಬೈಲ್ಗೆ ಬಂದ ನಂಬರ್ನ್ನು ತಮಗೆ ಕಳುಹಿಸಿ' ಎಂದು ತಿಳಿಸಿದ್ದಾನೆ.

ಒಂದಲ್ಲ, ಎರಡಲ್ಲ ಹತ್ತು ಭಾರಿ ಹಣ ಕಟ್
ಹೇಮಾಚಾರಿ ಅವರ ಮೊಬೈಲ್ ನಂಬರ್ಗೆ ಐದಾರು ಬಾರಿ ನಂಬರ್ ಬಂದಿದ್ದು ಅದನ್ನು ಪೇಟಿಎಂ ಕಸ್ಟಮರ್ ಕೇರ್ ಸೆಂಟರ್ನದ್ದು ಎಂದು ಹೇಳಲಾದ ನಂಬರ್ಗೆ ಕಳುಹಿಸಿದ್ದಾರೆ. ಇದಾಗಿ ಕೆಲವೇ ಸೆಕೆಂಡುಗಳಲ್ಲಿ ಹೇಮಾಚಾರಿ ಅವರ ಮೊಬೈಲ್ ನಂಬರ್ಗೆ ಎಸ್ಎಂಎಸ್ಗಳು ಬಂದಿವೆ. ಮೊದಲ ಬಾರಿ 40 ಸಾವಿರ ರೂ., ನಂತರ 9988 ರೂ., 5 ಸಾವಿರ ರೂ., ಮೂರು ಬಾರಿ 4998 ರೂ., 4896 ರೂ., ಎರಡು ಬಾರಿ 9999 ರೂ., 1700 ರೂ. ಕಡಿತವಾಗಿರುವ ಸಂದೇಶವಿತ್ತು.
ಉಳಿದದ್ದು ಎರಡೇ ರುಪಾಯಿ
ಹೇಮಾಚಾರಿ ಅವರ ಖಾತೆಯಿಂದ ಹತ್ತು ಭಾರಿ ಹಣ ಕಡಿತವಾಗಿತ್ತು. ಕೆಲವೇ ನಿಮಿಷದಲ್ಲಿ ಒಟ್ಟು 96,576 ರೂ. ಹಣ ಯಾವುದೋ ಖಾತೆಗೆ ವರ್ಗಾವಣೆಯಾಗಿತ್ತು. ಕೊನೆಗೆ ಹೇಮಾಚಾರಿ ಅವರ ಖಾತೆಯಲ್ಲಿ 2 ರೂ. ಮಾತ್ರ ಉಳಿದಿತ್ತು. ತಾವು ವಂಚನೆಗೊಳಗಾಗಿರುವ ಶಂಕೆ ವ್ಯಕ್ತವಾಗಿದೆ. ತಾವು ಕಳುಹಿಸಿದ ನಂಬರ್ ಒಟಿಪಿ ಎಂದು ಹೇಮಾಚಾರಿ ಅವರಿಗೆ ತಡವಾಗಿ ಅರ್ಥವಾಗಿದೆ. ಕೂಡಲೆ ಪೇಟಿಎಂ ಕಸ್ಟಮರ್ ಕೇರ್ ಎಂದು ಹೇಳಲಾದ ನಂಬರ್ಗೆ ಕರೆ ಮಾಡಿದ್ದಾರೆ. ಆದರೆ ಆತ ಕರೆ ಸ್ವೀಕರಿಸಲಿಲ್ಲ.
25 ಸಾವಿರ ವಾಪಸ್ ಬಂತು
ಇನ್ನು, ಹೇಮಾಚಾರಿ ಅವರು ತಮ್ಮ ಸ್ನೇಹಿತ ಸಂದೀಪ್ಗೆ ಪೇಟಿಎಂ ಮೂಲಕ ವರ್ಗಾಯಿಸಿದ್ದ 25 ಸಾವಿರ ಹಣ ಹಿಂತಿರುಗಿ ಬಂದಿದೆ. ಮೂರು ದಿನ ಬಳಿಕ ಹೇಮಾಚಾರಿ ಅವರ ಖಾತೆಗೆ ಹಣ ಹಿಂತಿರುಗಿದೆ.
ಇತ್ತ ವಂಚನೆಗೊಂಡಿರುವುದಾಗಿ ಗೊತ್ತಾದ ಕೂಡಲೇ ಹೇಮಾಚಾರಿ ಅವರು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications