ಶಿವಮೊಗ್ಗದಲ್ಲಿ ಮಾಜಿ ಕಾರ್ಪೊರೇಟರ್ ಮನೆ ಕುಸಿದರೂ ನೆರವಿಗೆ ಧಾವಿಸದ ಕಾರ್ಫೋರೇಟರ್
ಶಿವಮೊಗ್ಗ, ಆಗಸ್ಟ್, 09: ಭಾರಿ ಮಳೆಗೆ ಶಿವಮೊಗ್ಗದಲ್ಲಿ ಕಳೆದ ರಾತ್ರಿ ಮಾಜಿ ಕಾರ್ಪೊರೇಟರ್ ಒಬ್ಬರ ಮನೆ ಕುಸಿದಿದೆ. ಆದರೆ ಈವರೆಗೂ ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಅವರ ನೆರವಿಗೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದ ಶೇಷಾದ್ರಿಪುರಂನ 2ನೇ ಅಡ್ಡರಸ್ತೆಯಲ್ಲಿ ನಾಲ್ಕು ಮನೆಗಳು ಕುಸಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಾಲ್ಕು ಮನೆಗಳ ಪೈಕಿ ಒಂದು ಮನೆ ಮಾಜಿ ಕಾರ್ಪೊರೇಟರ್ ರಂಗಮ್ಮ ಹನುಮಂತಪ್ಪ ಅವರಿಗೆ ಸೇರಿದೆ. ರಾತ್ರೋ ರಾತ್ರಿ ಮನೆ ಕುಸಿಯುತ್ತಿದ್ದಂತೆ ಮಾಜಿ ಕಾರ್ಪೊರೇಟರ್ ರಂಗಮ್ಮ ಹನುಮಂತಪ್ಪ ಅವರು ವಾರ್ಡ್ ಕಾರ್ಪೊರೇಟರ್, ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ ಈವರೆಗೂ ಯಾರು ಕೂಡ ನೆರವಿಗೆ ಬಂದಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.
ರಾತ್ರಿ ನಮ್ಮ ಮನೆ ಕುಸಿದ ತಕ್ಷಣ ಅಕ್ಕಪಕ್ಕದ ಹುಡುಗರೆಲ್ಲ ಬಂದು ನಮ್ಮನ್ನು ಕಾಪಾಡಿದರು. ಬಳಿಕ ಅಧಿಕಾರಿಗಳು, ಕಾರ್ಪೊರೇಟರ್ಗೆ ಕರೆ ಮಾಡಿದರೂ ಯಾರು ಕೂಡ ಸ್ಪಂದನೆ ನೀಡಲಿಲ್ಲ. ರಾತ್ರಿಯಿಂದಲೂ ಅವರು ಆಗ ಬಂದೆ, ಈಗ ಬಂದೆ ಎಂದು ಕಥೆ ಹೇಳುತ್ತಿದ್ದಾರೆ. ಯಾವುದೇ ದಾರಿ ಇಲ್ಲದೆ ಮಳೆಯಲ್ಲೇ ನೆನೆದುಕೊಂಡು ರಾತ್ರಿ ಕಳೆದಿದ್ದೇವೆ ಎಂದು ಮಾಜಿ ಕಾರ್ಪೊರೇಟರ್ ರಂಗಮ್ಮ ಹನುಮಂತಪ್ಪ ಅಳಲು ತೋಡಿಕೊಂಡರು.

ಕಾರ್ಪೋರೇಟರ್ ವಿರುದ್ಧ ಜನಾಕ್ರೊಶ
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಇದ್ದಾಗ ರಂಗಮ್ಮ ಹನುಮಂತಪ್ಪ ಅವರನ್ನು ಶಿವಮೊಗ್ಗ ಮಹಾನಗರ ಪಾಲಿಕೆಗೆ ಕಾರ್ಪೊರೇಟರ್ ಆಗಿ ನಾಮನಿರ್ದೇಶನ ಮಾಡಲಾಗಿತ್ತು. ನೆರವಿಗೆ ನಿಂತ ಸ್ಥಳೀಯರು: ರಾತ್ರಿ 10 ಗಂಟೆ ಸುಮಾರಿಗೆ 4 ಮನೆಗಳು ಕುಸಿದಿದ್ದು, ಜೋರು ಶಬ್ಧ ಬರುತ್ತಿದ್ದಂತೆ ಸ್ಥಳೀಯರು ಮನೆಗಳಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಅವರಿಗೆ ಸ್ಥಳೀಯರೇ ಆಶ್ರಯ ನೀಡಿದರು. ಆದರೆ ಮಾಹಿತಿ ತಿಳಿಸಿದರೂ ಪಾಲಿಕೆ ಅಧಿಕಾರಿಗಳು ಮಾತ್ರ ಘಟನೆ ಸ್ಥಳಕೆ ಭೇಟಿ ನೀಡಿಲ್ಲದಿರುವುದು, ಮನೆ ಕಳೆದುಕೊಂಡವರು ಮತ್ತು ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದೆ.

ಮನೆ ಗೋಡೆ ಕುಸಿದು ಮಹಿಳೆ ಸಾವು
ಭದ್ರಾವತಿ ತಾಲೂಕಿನ ಕಾಚಿಗೊಂಡನಹಳ್ಳಿ ಗ್ರಾಮದಲ್ಲಿ ಭಾರಿ ಮಳೆಗೆ ಮನೆ ಗೋಡೆ ಕುಸಿದ್ದಿದ್ದು, 55 ವರ್ಷದ ಭಾಗ್ಯಮ್ಮ ಎಂಬ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಊಟ ಮುಗಿಸಿ ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭದಲ್ಲಿ ಗೋಡೆ ಕುಸಿದಿದೆ ಎಂದು ತಿಳಿದುಬಂದಿದೆ. ಇನ್ನು ಘಟನೆಯಲ್ಲಿ ಕೃಷ್ಣಮೂರ್ತಿ ಎಂಬುವವರು ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಳೆದ 24 ಗಂಟೆಯಲ್ಲಿ ದಾಖಲಾದ ಮಳೆ
ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಅಬ್ಬರಿಸಿದೆ. ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 100 ಮಿಲಿ ಮೀಟರ್ಗಿಂತಲೂ ಹೆಚ್ಚಿನ ಮಳೆ ಸುರಿದಿದೆ. ಹೀಗೆ ಮಳೆ ಸುರಿದಿದ್ದು, ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಅವಾಂತರಗಳು ಸೃಷ್ಟಿಯಾಗಿವೆ. ನಾಲ್ಕು ಕುಟುಂಬಗಳು ಬೀದಿಗೆ ಬಿದ್ದಿದ್ದು, ಅವರ ನೆರವಿಗೆ ಇದುವರೆಗೂ ಯಾವ ಅಧಿಕಾರಿಗಳು ಧಾವಿಸಿಲ್ಲ. ಆ ಕುಟುಂಬಗಳು ಅಕ್ಷರಸಃ ನಲುಗಿ ಹೋಗಿದ್ದು, ಕೊನೆಗೆ ಸಹಾಯಕ್ಕೆ ಗ್ರಾಮಸ್ಥರೇ ಬರಬೇಕಾಯಿತು.

ಹಲವು ನಗರದಲ್ಲಿ ದಾಖಲಾದ ಮಳೆ
ಹೊಸನಗರ ತಾಲೂಕಿನ ಮೇಲಿನಬೆಸಿಗೆಯಲ್ಲಿ 220 ಮಿಲಿ ಮೀಟರ್, ಸುಳಗೋಡು 143 ಮಿಲಿ ಮೀಟರ್, ಕೋಡೂರು 128 ಮಿಲಿ ಮೀಟರ್, ನಿಟಿರು 124 ಮಿಲಿ ಮೀಟರ್, ಅಂಡಗದದೂರು 124 ಮಿಲಿ ಮೀಟರ್, ಸೋನಲೆ 124 ಮಿಲಿ ಮೀಟರ್, ತೀರ್ಥಹಳ್ಳಿಯ ಹೊನ್ನೇತಾಳು 127 ಮಿಲಿ ಮೀಟರ್, ಹಾದಿಗಲ್ಲು 126 ಮಿಲಿ ಮೀಟರ್, ಆರಗದಲ್ಲಿ 124 ಮಿಲಿ ಮೀಟರ್ ಮಳೆಯಾಗಿದೆ. ಮತ್ತು ಸಾಗರದ ಖಾಂಡಿಕೆಯಲ್ಲಿ 127 ಮಿ.ಮೀ ಮಳೆ ಸುರಿದಿದೆ.
ಹೀಗೆ ಶಿವಮೊಗ್ಗ, ಭದ್ರಾವತಿಯಲ್ಲಿ ಭಾರೀ ಮಳೆ ಸುರಿದಿದ್ದು, ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಶಿವಮೊಗ್ಗದಲ್ಲಿ ಮಾಜಿ ಕಾರ್ಪೋರೇಟರ್ ಮನೆ ಕುಸಿದಿದ್ದು, ಅವರ ಸಹಾಯಕ್ಕೆ ಕಾರ್ಪೋರೇಟರ್ಗಳೇ ಧಾವಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications