ಮಲ್ಲಿಕಾ ಘಂಟಿ ಹತ್ಯೆಗೆ ಸಂಚು ರೂಪಿಸಿದ್ದ ಕುವೆಂಪು ವಿವಿ ಸಿಬ್ಬಂದಿ
ಶಿವಮೊಗ್ಗ, ಅಕ್ಟೋಬರ್ 08 : ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಅವರ ಹತ್ಯೆಗೆ ಸಂಚು ರೂಪಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹತ್ಯೆಯ ಸಂಚು ರೂಪಿಸಿದ್ದ ಕುವೆಂಪು ವಿವಿಯ ನಾಲ್ವರು ಸಿಬ್ಬಂದಿಗಳ ವಿರುದ್ಧ ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ಮಾದರಿಯಲ್ಲಿಯೇ ಮಲ್ಲಿಕಾ ಘಂಟಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿ ಈ ಕುರಿತು ಮಾತುಕತೆ ನಡೆಸಿದ್ದ ಆಡಿಯೋ ಟೇಪ್ ಬಹಿರಂಗಗೊಂಡಿದೆ. ಮಲ್ಲಿಕಾ ಘಂಟಿ ಅವರು ನೀಡಿದ್ದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ.[ಸಾಹಿತಿ ಎಂ.ಎಂ.ಕಲಬುರ್ಗಿ ಮೇಲೆ ಗುಂಡಿನ ದಾಳಿ, ಸಾವು]

ಭದ್ರಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕುವೆಂಪು ವಿವಿ ಪ್ರಾಣಿಶಾಸ್ತ್ರ ವಿಭಾಗದ ಪ್ರೊ. ಹೊಸಟ್ಟಿ, ಪರೀಕ್ಷಾ ವಿಭಾಗದ ವಿಜಯ, ಪ್ರಥಮ ದರ್ಜೆ ಸಹಾಯಕ ಸಿದ್ದಲಿಂಗಯ್ಯ ಮತ್ತು ಸಲೀಂ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಘಟನೆ ವಿವರ : ಸದ್ಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿರುವ ಪ್ರೊ. ಮಲ್ಲಿಕಾ ಘಂಟಿ ಅವರು ಹಿಂದೆ ಕುವೆಂಪು ವಿವಿ ಕುಲಸಚಿವೆಯಾಗಿದ್ದರು. ಈ ಸಂದರ್ಭದಲ್ಲಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು.
ಹತ್ಯೆಯ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ನಾಲ್ವರು ಆರೋಪಿಗಳು ಕಲಬುರ್ಗಿ ಅವರ ಹತ್ಯೆಯಂತೆ ಮಲ್ಲಿಕಾ ಘಂಟಿ ಅವರ ಹತ್ಯೆ ಮಾಡಬೇಕು ಎಂದು ಮಾತನಾಡಿದ್ದರಂತೆ. ಈ ಮಾತುಗಳನ್ನು ವಿವಿಯ ಸಿಬ್ಬಂದಿಯೊಬ್ಬರು ರೆಕಾರ್ಡ್ ಮಾಡಿಕೊಂಡು ಘಂಟಿ ಅವರಿಗೆ ಕಳುಹಿಸಿದ್ದರು. ಅವರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಎಫ್ಐಆರ್ ದಾಖಲು ಮಾಡಲಾಗಿದೆ.












Click it and Unblock the Notifications