ಸಿಎಂ ತವರು ಜಿಲ್ಲೆ ಶಿವಮೊಗ್ಗಕ್ಕೂ ಕಾಲಿಟ್ಟ ಕೊರೊನಾ ವೈರಸ್
ಶಿವಮೊಗ್ಗ, ಮೇ 10: ಇಲ್ಲಿಯವರೆಗೂ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 8 ಜನರಿಗೆ ಕೊರೊನಾ ವೈರಸ್ ಸೋಂಕು ಕಂಡುಬಂದಿರುವುದು ಮಲೆನಾಡಿಗರಲ್ಲಿ ಆತಂಕವನ್ನುಂಟು ಮಾಡಿದೆ.
ಮಲೆನಾಡಿಗರು ಇಷ್ಟು ದಿನ ನಾವು ಸೇಫ್ ಝೋನ್ ನಲ್ಲಿದ್ದೇವೆ ಎಂದು ನಿಟ್ಟುಸಿರು ಬಿಡುತ್ತಿದ್ದರು. ಆದರೆ ಗುಜರಾತಿನ ಅಹಮದಾಬಾದ್ ನಿಂದ ಮೊನ್ನೆ ತಡರಾತ್ರಿ ಶಿವಮೊಗ್ಗಕ್ಕೆ ಬಂದಿದ್ದ 9 ತಬ್ಲಿಘಿಗಳಲ್ಲಿ 8 ಜನರಿಗೆ ಇಂದು ಕೊರೊನಾ ವೈರಸ್ ಸೋಂಕು ದೃಢವಾಗಿದೆ.
ಅಹಮದಾಬಾದ್ ನಿಂದ ಬಂದಿದ್ದ 9 ಜನರನ್ನು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪರೀಕ್ಷೆ ನಡೆಸಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಇಂದು ಕೊರೊನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಕೋವಿಡ್ ವಾರ್ಡ್ ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

7 ಜನ ಸೋಂಕಿತರು ಶಿಕಾರಿಪುರವರು:
ಅಹಮದಾಬಾದ್ ಗೆ ತೆರಳಿದ 9 ಜನ ತಬ್ಲಿಘಿಗಳಲ್ಲಿ 8 ಜನ ಶಿಕಾರಿಪುರವರಾಗಿದ್ದು, ಕೊರೊನಾ ಸೋಂಕಿತ 7 ಜನರು ಕೂಡ ಶಿಕಾರಿಪುರದವರು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ತಬ್ಲಿಘಿ ಸಂಪರ್ಕದಿಂದ ಜಿಲ್ಲೆಗೆ ಕೊರೊನಾ ವೈರಸ್ ಕಾಲಿಟ್ಟಿದ್ದು, ಶಿವಮೊಗ್ಗ ಜಿಲ್ಲೆಯ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಹೊರಗಡೆಯಿಂದ ಬಂದಿರುವವರಿಂದ ಸೋಂಕು ಬಂದಿದ್ದು, ಇಲ್ಲಿನ ಜನರು ಹೆಚ್ಚು ಜಾಗೃತವಾಗಿರಬೇಕು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.












Click it and Unblock the Notifications