ಶಿವಮೊಗ್ಗಗೂ ವಕ್ಕರಿಸಿದ ಕೊರೊನಾ: ಅನಗತ್ಯ ಓಡಾಟ ಬೇಡ ಎಂದ ಈಶ್ವರಪ್ಪ
ಶಿವಮೊಗ್ಗ, ಮೇ 11: ಇಷ್ಟು ದಿನ ಗ್ರೀನ್ ಝೋನ್ ನಲ್ಲಿದ್ದ ಶಿವಮೊಗ್ಗದಲ್ಲೂ ಮಾರಣಾಂತಿಕ ಕೊರೊನಾ ವೈರಸ್ ವಕ್ಕರಿಸಿದೆ. ಗುಜರಾತಿನ ಅಹಮದಾಬಾದ್ ನಿಂದ ಬಂದಿದ್ದ 9 ಜನರ ಪೈಕಿ 8 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
Recommended Video
8 ಮಂದಿ ಸೋಂಕಿತರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. 8 ಮಂದಿಯಿಂದ ಮತ್ಯಾರಿಗೂ ಸೋಂಕು ಹರಡದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸೋಂಕಿತರಿಗೆ ಚಿಕಿತ್ಸೆ ನೀಡಲು ಮೊದಲೇ ನಿಗದಿಯಾಗಿದ್ದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಮಾತ್ರ ಸೋಂಕಿತರಿರುವ ಐಸೋಲೇಷನ್ ವಾರ್ಡ್ ಒಳಗೆ ಹೋಗಲು ಅವಕಾಶ ನೀಡಲಾಗಿದೆ.

ವೈದ್ಯರು ಯಾರ ಸಂಪರ್ಕಕ್ಕೆ ಬರುವಂತಿಲ್ಲ.!
ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬೇರೆ ಯಾರನ್ನೂ ಸಂಪರ್ಕಿಸುವಂತಿಲ್ಲ. ತಮ್ಮ ತಮ್ಮ ಕುಟುಂಬಗಳು ಮತ್ತು ಇತರರನ್ನು ಸಂಪರ್ಕ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ. ಎಲ್ಲಾ ವೈದ್ಯಕೀಯ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಲಾಗಿದೆ.

ಆಸ್ಪತ್ರೆಯಲ್ಲಿ ಬೇರೆ ಯಾರಿಗೂ ಚಿಕಿತ್ಸೆ ಇಲ್ಲ
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದರಿಂದ, ಆಸ್ಪತ್ರೆಯಲ್ಲಿ ಬೇರೆ ಯಾವುದೇ ಚಿಕಿತ್ಸೆ ನೀಡಲು ಅವಕಾಶ ಇಲ್ಲ. ಮೆಗ್ಗಾನ್ ಆಸ್ಪತ್ರೆಯ ಹೊರ ರೋಗಿಗಳ ವಿಭಾಗವನ್ನು ಸುಬ್ಬಯ್ಯ ಆಸ್ಪತ್ರೆಗೆ ಸ್ಥಳಾಂತರಗೊಳಿಸಲಾಗಿದೆ.

ಭಯ ಪಡಬೇಡಿ
''ಶಿವಮೊಗ್ಗದ ಜನತೆ ಭಯ ಪಡುವಂತಿಲ್ಲ. ಈ ಸೋಂಕು ಹೊರಗಿನಿಂದ ಬಂದಿರುವವರಿಗೆ ಇದ್ದು, ಶಿವಮೊಗ್ಗದ ಯಾವುದೇ ಜನತೆಗೆ ಈ ಸೋಂಕು ತಗುಲಿಲ್ಲ. ಸೋಂಕಿತರನ್ನು ಮೆಗ್ಗಾನ್ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಶಿವಮೊಗ್ಗದ ಜನತೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು'' ಎಂದು ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ.

ಅನಗತ್ಯ ಓಡಾಟ ಬೇಡ
''ಶಿವಮೊಗ್ಗ ಜಿಲ್ಲೆ ಗ್ರೀನ್ ಝೋನ್ ನಲ್ಲಿ ಉಳಿಯುವಂತೆ ಜಿಲ್ಲಾಡಳಿತ ಕಾರ್ಯ ನಿರ್ವಹಿಸಲಿದೆ. ಭಯ ಪಡಬೇಡಿ.. ಅನಗತ್ಯ ಓಡಾಡಬೇಡಿ.. ಮಾಸ್ಕ್ ಧರಿಸಿ ಹಾಗೂ ಸ್ಯಾನಿಟೈಸರ್ ಬಳಸಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜವಾಬ್ದಾರಿ ಇಟ್ಟುಕೊಳ್ಳಿ'' ಎಂದಿದ್ದಾರೆ ಕೆ.ಎಸ್.ಈಶ್ವರಪ್ಪ.












Click it and Unblock the Notifications