ಸರ್ಕಾರಕ್ಕೆ ಸೆಡ್ಡು ಹೊಡೆದು ರಸ್ತೆ ಮಾಡಿದ ಗ್ರಾಮಸ್ಥರು!
ಶಿವಮೊಗ್ಗ, ಆಗಸ್ಟ್ 14 : ಸರ್ಕಾರದ ಕೆಲಸ ಎಂದರೆ ಹಾಗೇ. ತಕ್ಷಣಕ್ಕೆ ಆಗಿ ಬಿಡುತ್ತದೆ ಎಂಬ ಭರವಸೆಯನ್ನು ಎಂದಿಗೂ ಇಟ್ಟುಕೊಳ್ಳಬಾರದು. ರಸ್ತೆಗಾಗಿ ಸರ್ಕಾರದ ಮೊರೆ ಹೋಗಿದ್ದ ಗ್ರಾಮಸ್ಥರು, ಅದು ಕೈಗೂಡದಿದ್ದಾಗ ತಾವೇ ರಸ್ತೆ ನಿರ್ಮಿಸಿ ಸರ್ಕಾರದ ಕಣ್ಣು ತೆರೆಸಿದ್ದಾರೆ.
ಹೌದು, ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಹೋಬಳಿಯ ಬಿಸಿನಗದ್ದೆ ಗ್ರಾಮಸ್ಥರ ಮಾಡಿದ ಸಾಧನೆಯ ಕಥೆ. ಮಳೆಗಾಲದಲ್ಲಿ ಕೆಸರಿನಿಂದ ಆವೃತವಾಗಿದ್ದ ರಸ್ತೆಯನ್ನು ಗ್ರಾಮಸ್ಥರು ಅಭಿವೃದ್ಧಿ ಮಾಡಿದ್ದಾರೆ.
ಕೂಲಿ ಕಾರ್ಮಿಕರು, ರೈತರೇ ಹೆಚ್ಚಿರುವ ಬಿಸಿನಗದ್ದೆ ಎಂಬ ಹಳ್ಳಿಯ ರಸ್ತೆಯು ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಕೆಸರುಮಯವಾಗುತ್ತಿದ್ದು. ಇದರಿಂದ ಈ ಭಾಗದ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ವಿದ್ಯಾರ್ಥಿಗಳು, ಹಿರಿಯರು, ಮಹಿಳೆಯರು ಈ ರಸ್ತೆಯಲ್ಲಿ ಓಡಾಡುವುದಕ್ಕೆ ಹರಸಾಹಸ ಪಡಬೇಕಿತ್ತು.

ಗ್ರಾಮಸ್ಥರು ರಸ್ತೆಯ ಸ್ಥಿತಿ, ಜನರ ಸಂಕಷ್ಟದ ಬಗ್ಗೆ ಹಲವು ವರ್ಷಗಳಿಂದ ಸಂಬಂಧಪಟ್ಟವರಿಗೆ ಮನವಿ ಮಾಡುತ್ತಿದ್ದರು. ಸಮಸ್ಯೆ ಬಗೆಹರಿಸುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಆದರೆ, ಯಾರೂ ಸಹ ಸಮಸ್ಯೆ ಬಗರಹರಿಸುವ ಪ್ರಯತ್ನ ಮಾಡಲೇ ಇಲ್ಲ.
ಈ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಆದ್ದರಿಂದ, ರಸ್ತೆ ಸಂಪೂರ್ಣವಾಗಿ ಹದಗೆಟ್ಟಿತ್ತು. ಸಂಬಂಧಪಟ್ಟವರು ಇತ್ತ ತಿರುಗಿಯೂ ನೋಡಲಿಲ್ಲ. ಆದ್ದರಿಂದ, ಗ್ರಾಮಸ್ಥರು ತಾವೇ ಗುದ್ದಲಿ ಹಿಡಿದು ರಸ್ತೆಯನ್ನು ಸರಿಪಡಿಸುವ ಮೂಲಕ ಸರ್ಕಾರ ಮಾಡುವ ಕೆಲಸವನ್ನು ತಾವೇ ಮಾಡಿ ಮುಗಿಸಿದ್ದಾರೆ.

ಸಾಕಷ್ಟು ಶ್ರಮ : ರಸ್ತೆ ನಿರ್ಮಾಣಕ್ಕಾಗಿ ಇಲ್ಲಿನ ಯುವಕರು, ಹಿರಿಯರು ಸಾಕಷ್ಟು ಶ್ರಮ ಹಾಕಿದ್ದಾರೆ. ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬದಿಗೊತ್ತಿ ರಸ್ತೆ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಮಹಿಳೆಯರು, ಮಕ್ಕಳು ಈ ಕಾರ್ಯದಲ್ಲಿ ಕೈ ಜೋಡಿಸಿದರು.












Click it and Unblock the Notifications