ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆ: ಡಿ.ಎಚ್.ಶಂಕರ ಮೂರ್ತಿ, ಈಶ್ವರಪ್ಪ ಮತದಾನ
ಶಿವಮೊಗ್ಗ, ಜೂನ್. 08: ನಗರದ ಬಾಲರಾಜ ಅರಸ್ ರಸ್ತೆಯಲ್ಲಿನ ಪಿಡಬ್ಲೂಡಿ ಕಛೇರಿಯಲ್ಲಿ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಸಭಾಪತಿ ಡಿ.ಎಚ್.ಶಂಕರ ಮೂರ್ತಿ ಮತದಾನ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಪದವಿಗೆ ಅಥವಾ ಹುದ್ದೆಗೆ ಆಕಾಂಕ್ಷಿ ಅಲ್ಲ. ಆದರೆ ಪಕ್ಷ ರಾಜ್ಯಪಾಲರ ಹುದ್ದೆ ನೀಡಿದರೆ ನಿರ್ವಹಿಸಲು ಸಿದ್ದ ಎಂದರು.
ಜುಲೈನಲ್ಲಿ ನನ್ನ ಅವಧಿ ಮುಗಿಯಲಿದೆ. ಆದರೆ ಸಾರ್ವಜನಿಕ ಕ್ಷೇತ್ರ ಮತ್ತು ರಾಜಕೀಯ ನಿವೃತ್ತಿ ಘೋಷಿಸಿರಲಿಲ್ಲ.
ನನಗೆ ಪಕ್ಷ ರಾಜ್ಯಪಾಲರ ಹುದ್ದೆಗೆ ಆಯ್ಕೆ ಮಾಡಿದಲ್ಲಿ ನಿರ್ವಹಿಸಲು ಸಿದ್ದನಿದ್ದೇನೆ ಎಂದರು. ನಾನು ಯೋಜನಾ ಆಯೋಗದ ಅಧ್ಯಕ್ಷ, ವಿಪಕ್ಷ ನಾಯಕನಾಗಿ ಈಗ ಸಭಾಪತಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಪಕ್ಷ ನೀಡಿದ ಎಲ್ಲಾ ಹುದ್ದೆಯನ್ನು ಅತ್ಯಂತ ಜವಬ್ದಾರಿಯುತವಾಗಿ ನಿರ್ವಹಿಸಿದ್ದೇನೆ ಎಂದರು.

ನೈರುತ್ಯ ಪದವೀಧರ ಕ್ಷೇತ್ರಕ್ಕೆ ನಾನು 9ನೇ ಬಾರಿ ಮತದಾನ ಮಾಡುತ್ತಿದ್ದು, ಕಳೆದ ನಾಲ್ಕು ಬಾರಿ ಜನಸಂಘ ಹಾಗೂ ನಂತರ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದ್ದೆ.
ಇದಾದ ನಂತರ ನಾನೇ ಅಭ್ಯರ್ಥಿ. 5 ಬಾರಿ ಅಭ್ಯರ್ಥಿಯಾಗಿ ಕಣದಲ್ಲಿ ಸ್ಪರ್ಧಿಸಿದ್ದೇನೆ, ಗೆದ್ದಿದ್ದೇನೆ. ಈಗ ಸಭಾಪತಿ ಆಗಿರುವುದರಿಂದ ಯಾರಿಗೆ ಮತ ಹಾಕಿದ್ದೇನೆ ಎಂಬುದನ್ನು ಹೇಳುವ ಹಾಗಿಲ್ಲ ಎಂದರು. ಮಗನಿಗೆ ಪಕ್ಷ ಜವಬ್ದಾರಿ ನೀಡಿದರೆ ನಿರ್ವಹಿಸಲು ಶಕ್ತನಿದ್ದಾನೆ ಎಂದರು.

ಶಿವಮೊಗ್ಗ ನವುಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.












Click it and Unblock the Notifications