ಲೋಕಸಭೆ ಚುನಾವಣೆ: ಮೊದಲ ಅಭ್ಯರ್ಥಿ ಘೋಷಣೆ ಮಾಡಿದ ಜೆಡಿಎಸ್
ಶಿವಮೊಗ್ಗ, ಫೆಬ್ರವರಿ 25: ಲೋಕಸಭೆ ಚುನಾವಣೆಗೆ ಜೆಡಿಎಸ್ ತನ್ನ ಮೊದಲ ಅಭ್ಯರ್ಥಿಯನ್ನು ಪ್ರಕಟಿಸಿದೆ. ಉಪಚುನಾವಣೆಯಲ್ಲಿ ಸೋತಿದ್ದ ಮಧು ಬಂಗಾರಪ್ಪ ಅವರು ಮತ್ತೊಮ್ಮೆ ಶಿವಮೊಗ್ಗದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಶಿವಮೊಗ್ಗ ಕ್ಷೇತ್ರಕ್ಕೆ ಮಧು ಬಂಗಾರಪ್ಪ ಅವರೇ ಜೆಡಿಎಸ್ ಅಭ್ಯರ್ಥಿ ಎಂದು ದೇವೇಗೌಡ ಅವರು ಘೋಷಿಸಿದ್ದಾರೆ. ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಚಿಹ್ನೆಯಡಿ ಅವರು ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಎದುರಿಸಲಿದ್ದಾರೆ.
ಇಂದು ಮಧು ಬಂಗಾರಪ್ಪ ಅವರ ನಿವಾಸಕ್ಕೆ ದೇವೇಗೌಡ ಅವರು ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಮಧು ಬಂಗಾರಪ್ಪ ಅವರು ಮೈತ್ರಿಯ ಅಭ್ಯರ್ಥಿ ಎಂದು ಹೇಳಿದರು.

ಉಪಚುನಾವಣೆಯಲ್ಲಿ ಸೋತಿದ್ದ ಬಂಗಾರಪ್ಪ
ಉಪಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರ ಮೇಲೆ ಒತ್ತಡ ತಂದು ಚುನಾವಣೆಗೆ ನಿಲ್ಲಿಸಿದ್ದೆವು. ಅವರಿಗೆ ಹೆಚ್ಚಿನ ಸಮಯ ಸಹ ಇರಲಿಲ್ಲ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ನಾವು ಎಲ್ಲರೂ ಸೇರಿ ಪ್ರಯತ್ನ ಪಟ್ಟೆವು ಆದರೆ ಕಡಿಮೆ ಅಂತರದಲ್ಲಿ ಮಧು ಬಂಗಾರಪ್ಪ ಸೋತರು ಆದರೆ ಈ ಬಾರಿ ಹಾಗೆ ಆಗುವುದಿಲ್ಲ ಮಧು ಅವರು ಗೆಲ್ಲುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್ಗೆ ಅಭ್ಯರ್ಥಿಯ ಕೊರತೆ
ಮೈತ್ರಿ ಪಕ್ಷಗಳು ಸೀಟು ಹಂಚಿಕೆ ಬಗ್ಗೆ ಪೂರ್ಣವಾಗಿ ಮಾತುಕತೆ ಆಗುವ ಮೊದಲೇ ದೇವೇಗೌಡ ಅವರು ಅಭ್ಯರ್ಥಿಯನ್ನು ಘೋಷಿಸಿದ್ದಾರೆ. ಕಾಂಗ್ರೆಸ್ಗೆ ಶಿವಮೊಗ್ಗದಲ್ಲಿ ಗಟ್ಟಿ ಅಭ್ಯರ್ಥಿ ಕೊರತೆ ಇರುವ ಲಾಭವನ್ನು ಜೆಡಿಎಸ್ ಪಡೆದು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ.

ಶಿವಮೊಗ್ಗ ಲೋಕಸಭೆ ಕ್ಷೇತ್ರ
ಕಾಂಗ್ರೆಸ್ ಬೆಂಬಲದೊಂದಿಗೆ ಉಪಚುನಾವಣೆಯಲ್ಲಿ ಕಣಕ್ಕೆ ಇಳಿದಿದ್ದ ಮಧು ಬಂಗಾರಪ್ಪ ಬಿಜೆಪಿ ಭದ್ರಕೋಟೆ ಎನಿಸಿಕೊಂಡಿರುವ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ರಾಘವೇಂದ್ರ ಅವರಿಗೆ ಕಡು ಪೈಪೋಟಿ ನೀಡಿದ್ದರು. ಆದರೆ ಅಂತಮವಾಗಿ ಸುಮಾರು 30,000 ಮತಗಳ ಅಂತರದಿಂದಷ್ಟೆ ಸೋಲುಂಡರು.

ರಾಘವೇಂದ್ರ-ಮಧು ಮುಖಾ-ಮುಖಿ
ಮಧು ಬಂಗಾರಪ್ಪ ಅವರ ಹೆಸರು ಘೋಷಣೆ ಮೂಲಕ ಮತ್ತೆ ರಾಘವೇಂದ್ರ ಮತ್ತು ಮಧು ಬಂಗಾರಪ್ಪ ಅವರು ಮುಖಾ-ಮುಖಿ ಆಗುವ ಎಲ್ಲ ಸಂಭವಗಳೂ ಕಾಣುತ್ತಿವೆ. ರಾಘವೇಂದ್ರ ಅವರೇ ಶಿವಮೊಗ್ಗ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಆಗಲಿದ್ದಾರೆ.












Click it and Unblock the Notifications