ಶಿವಮೊಗ್ಗ ಜಿಲ್ಲೆಗೊಂದು ಹೊಸ ತಾಲೂಕು; ಸಿಎಂಗೆ ಬೇಡಿಕೆ
ಶಿವಮೊಗ್ಗ, ನವೆಂಬರ್ 30 : ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರವನ್ನು ಪ್ರತ್ಯೇಕ ತಾಲೂಕು ಆಗಿ ರಚನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಮನವಿ ಸಲ್ಲಿಸಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಭಾನುವಾರ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಆಗ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಕೆ. ಬಿ. ಅಶೋಕ್ ನಾಯ್ಕ ನೇತೃತ್ವದ ನಿಯೋಗ ಈ ಮನವಿ ಮಾಡಿದೆ.
ಶಿವಮೊಗ್ಗ ಗ್ರಾಮಾಂತರ ಮಂಡಲ ಹಾಗೂ ಹೊಳೆಹೊನ್ನೂರು ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರ ನಿಯೋಗ ಮುಖ್ಯಮಂತ್ರಿಗಳ ಮುಂದೆ ಹೊಸ ತಾಲೂಕಿನ ಬೇಡಿಕೆ ಇಟ್ಟಿದೆ.

ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳನ್ನು ವಿಭಜನೆ ಮಾಡಿ ಶಿವಮೊಗ್ಗ ಗ್ರಾಮಾಂತರ ತಾಲೂಕು ರಚನೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಎರಡೂ ತಾಲೂಕುಗಳಲ್ಲಿ ಜನಸಂಖ್ಯೆ ಹೆಚ್ಚಿದೆ. ಆದ್ದರಿಂದ, ವಿಭಾಗ ಮಾಡಿ ಹೊಸ ತಾಲೂಕು ರಚಿಸಬೇಕು ಎಂದು ಮನವಿ ಮಾಡಲಾಗಿದೆ.
ರಾಜ್ಯದಲ್ಲಿ ಕೆಲವು ದೊಡ್ಡ ತಾಲೂಕುಗಳನ್ನು ವಿಭಜನೆ ಮಾಡಿ ನಗರ ಮತ್ತು ಗ್ರಾಮೀಣ ತಾಲೂಕುಗಳನ್ನು ಮಾಡಲಾಗಿದೆ. ಅದೇ ಮಾದರಿಯಲ್ಲಿ ಶಿವಮೊಗ್ಗ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಪ್ರತ್ಯೇಕ ತಾಲೂಕು ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಶಿವಮೊಗ್ಗ ತಾಲೂಕಿನ ಹೊಳಲೂರು 1, ಹೊಳಲೂರು 2, ನಿದಿಗೆ 1, ನಿದಿಗೆ 2, ಆಯನೂರು, ಹಾರನಹಳ್ಳಿ ಮತ್ತು ಕುಂಸಿ ಹೋಬಳಿ ಬೇರ್ಪಡಿಸಬೇಕು. ಭದ್ರಾವತಿ ತಾಲೂಕಿನ ಹೊಳೆಹೊನ್ನೂರು 1, ಹೊಳೆಹೊನ್ನೂರು 2 ಮತ್ತು ಹೊಳೆಹೊನ್ನೂರು 3 ಹೋಬಳಿಗಳನ್ನು ಸೇರಿಸಿ ಶಿವಮೊಗ್ಗ ಗ್ರಾಮಾಂತರ ತಾಲೂಕು ಮಾಡಬಹುದು ಎಂದು ಉಲ್ಲೇಖಿಸಲಾಗಿದೆ.
ಈ ಮೊದಲು ಶಿವಮೊಗ್ಗ ಒಂದೇ ವಿಧಾನಸಭಾ ಕ್ಷೇತ್ರವಿತ್ತು. ಕ್ಷೇತ್ರ ಪುನರ್ ವಿಂಗಡನೆ ಸಮಯದಲ್ಲಿ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಗ್ರಾಮಾಂತರ ಎಂಬ 2 ವಿಧಾನಸಭಾ ಕ್ಷೇತ್ರಗಳನ್ನು ಮಾಡಲಾಗಿದೆ. ಈಗ ಗ್ರಾಮಾಂತರ ಕ್ಷೇತ್ರವನ್ನು ಪ್ರತ್ಯೇಕ ತಾಲೂಕು ಮಾಡಿ ಎಂದು ಬೇಡಿಕೆ ಇಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ, ಸಾಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ, ಭದ್ರಾವತಿ, ಹೊಸನಗರ ತಾಲೂಕುಗಳಿವೆ. ಆದರೆ, ಹೊಸನಗರ ವಿಧಾನಸಭಾ ಕ್ಷೇತ್ರವಲ್ಲ. ಶಿವಮೊಗ್ಗ ನಗರ ಮತ್ತು ಗ್ರಾಮೀಣ ಎಂಬ ಎರಡು ವಿಧಾನಸಭಾ ಕ್ಷೇತ್ರಗಳಿವೆ.












Click it and Unblock the Notifications