ಶಿವಮೊಗ್ಗದಲ್ಲಿ ಈ ಬಾರಿ ಸರಳ ದಸರಾ; ಉತ್ಸವದ ಲೈವ್ ಸ್ಟ್ರೀಮಿಂಗ್
ಶಿವಮೊಗ್ಗ, ಸೆಪ್ಟೆಂಬರ್ 12: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಶಿವಮೊಗ್ಗ ನಗರದಲ್ಲಿ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಗುವುದು ಎಂದು ಮೇಯರ್ ಸುವರ್ಣಾ ಶಂಕರ್ ಅವರು ತಿಳಿಸಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ದಸರಾ ಹಬ್ಬದ ಆಯೋಜನೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿ, ಈ ಬಾರಿ ಮೆರವಣಿಗೆ ಇರುವುದಿಲ್ಲ. ಆದರೆ ಎಲ್ಲಾ ದೇವ ದೇವತೆಗಳನ್ನು ಒಂದು ಕಡೆ ಸೇರಿಸಿ ಬನ್ನಿ ಮುಡಿಯುವ ಕಾರ್ಯ ನಡೆಸಲಾಗುವುದು. ಹಿಂದಿನ ವರ್ಷದಂತೆ ಇಡೀ ನಗರವನ್ನು ದೀಪಾಲಂಕಾರ ಮಾಡಲಾಗುವುದು. ವಿಜಯ ದಶಮಿಗೆ ಸಂಬಂಧಿಸಿದಂತೆ ಇತರ ಯಾವುದೇ ದಸರಾ ಕಾರ್ಯಕ್ರಮಗಳು ಇರುವುದಿಲ್ಲ ಎಂದರು.
ಆಯುಕ್ತ ಚಿದಾನಂದ ವಟಾರೆ ಮಾತನಾಡಿ, "ಈ ಬಾರಿ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದೆ. ದಸರಾ ಆಚರಣೆ ಕುರಿತಾಗಿ ಇದುವರೆಗೆ ಸರ್ಕಾರದಿಂದ ಯಾವುದೇ ಮಾರ್ಗಸೂಚಿಗಳು ಬಂದಿಲ್ಲ. ಆದರೆ ಸರ್ಕಾರದ ಸೂಚನೆ ಪ್ರಕಾರ ಶಿವಮೊಗ್ಗದಲ್ಲಿ ಈ ಬಾರಿ ಸರಳವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಜನರು ಮನೆಯಲ್ಲಿಯೇ ಉತ್ಸವ ವೀಕ್ಷಿಸಲು ಅನುಕೂಲವಾಗುವಂತೆ ಕಾರ್ಯಕ್ರಮಗಳ ಲೈವ್ ಸ್ಟ್ರೀಮಿಂಗ್ ಸಹ ಮಾಡಬಹುದು" ಎಂದರು.

ಕಳೆದ ವರ್ಷ ದಸರಾ ಆಚರಣೆಗೆ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮುಖಾಂತರ 1.80 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ 1.63 ಕೋಟಿ ರೂ. ವೆಚ್ಚ ಮಾಡಲಾಗಿದ್ದು, 17 ಲಕ್ಷ ರೂ. ಉಳಿತಾಯವಿದೆ. ಈ ಅನುದಾನ ಹಾಗೂ ಇನ್ನಿತರ ಉಳಿಕೆ ಅನುದಾನ ಬಳಸಿಕೊಂಡು ದಸರಾ ಸಾಂಪ್ರದಾಯಿಕವಾಗಿ ಆಚರಿಸಬಹುದಾಗಿದೆ ಎಂದು ಸಭೆಗೆ ತಿಳಿಸಿದರು.












Click it and Unblock the Notifications