'ಕಾಂಗ್ರೆಸ್ ಪಕ್ಷಕ್ಕೆ ಸೋಲು ತಾತ್ಕಾಲಿಕ ಹಿನ್ನಡೆ ಮಾತ್ರ'
ಶಿವಮೊಗ್ಗ, ಡಿಸೆಂಬರ್ 28 : 'ಪ್ರಸ್ತುತ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಹಿನ್ನಡೆ ಆಗಿರಬಹುದು. ಆದರೆ, ಮುಂದಿನ ದಿನಗಳಲ್ಲಿ ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ' ಎಂದು ಸಚಿವ ಕಾಗೋಡು ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಸಂಸ್ಥಾಪನಾ ದಿನವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ, 'ಕಾಂಗ್ರೆಸ್ ಎಲ್ಲ ಜನಾಂಗ, ಧರ್ಮದವರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಇರುವಷ್ಟು ಕಾರ್ಯಕ್ರಮಗಳು ಬೇರೆ ಪಕ್ಷದಲ್ಲಿಯೂ ಇಲ್ಲ' ಎಂದರು.

'ಕಾಂಗ್ರೆಸ್ ಪಕ್ಷವನ್ನು ನಾಶಮಾಡಲು ಯಾರಿಗೂ ಸಾಧ್ಯವಿಲ್ಲ. ಪಕ್ಷದ ವ್ಯಾಪ್ತಿ ಹೆಚ್ಚಾಗಿದ್ದು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಅಸಮಾನತೆ, ಬಡತನ ದೂರ ಮಾಡಲು ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತದಿಂದ ಮಾತ್ರ ಸಾಧ್ಯವಿದೆ' ಎಂದು ಹೇಳಿದರು.
'ಪಕ್ಷದ ತತ್ವ, ಸಿದ್ದಾಂತದಲ್ಲಿ ಬದ್ಧತೆ ಮತ್ತು ನಂಬಿಕೆ ಇಡಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ. ಪಕ್ಷದ ಬೆಳವಣಿಗೆ ಜೊತೆಗೆ ಜನರ ಸಮಸ್ಯೆಗಳನ್ನು ಸರಿಪಡಿಸಲು ಹೋರಾಟ ನಡೆಸಬೇಕೆಂದು' ಕರೆ ನೀಡಿದರು.
'ಮಹದಾಯಿ ಸಮಸ್ಯೆಯನ್ನು 15 ದಿನಗಳೊಳಗೆ ಬಗೆಹರಿಸಲು ಸಾಧ್ಯವಿಲ್ಲ. ಅದಕ್ಕೊಂದು ಕಾನೂನು ಇದೆ. ಅದು ಅಂತರರಾಜ್ಯ ಸಮಸ್ಯೆಯಾಗಿದೆ. ನ್ಯಾಯಾಧೀಕರಣದ ಸಲಹೆ, ಸೂಚನೆ ಪಾಲಿಸಬೇಕಿದೆ. ರಾಜ್ಯ ಸರ್ಕಾರಗಳ ಜವಾಬ್ದಾರಿ ಇದೆ. ಎಲ್ಲರೂ ಕುಳಿತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ' ಎಂದರು.
'ಎಲ್ಲಾ ರಾಜ್ಯಗಳಿಗೂ ತಮ್ಮದೇ ಆದ ಹಿತಾಸಕ್ತಿಗಳಿರುತ್ತವೆ. ಅದೇ ರೀತಿ ಎಲ್ಲರಿಗೂ ಗುರುತರವಾದ ಜವಾಬ್ದಾರಿ ಇರುತ್ತದೆ. ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ' ಎಂದು ತಿಳಿಸಿದರು.
'ಕೇಂದ್ರ ಸಚಿವರಾಗಿರುವ ಅನಂತ್ ಕುಮಾರ್ ಹೆಗ್ಡೆ ಕಿಚ್ಚು ಹಚ್ಚುವ ಹೇಳಿಕೆ ನೀಡುತ್ತಿದ್ದರೂ ಬಿಜೆಪಿ ಮೌನ ವಹಿಸಿರುವುದನ್ನು ನೋಡಿದರೆ ಆ ಪಕ್ಷದ ಮನಸ್ಥಿತಿ ಏನೆಂಬುದು ಅರ್ಥವಾಗುತ್ತದೆ' ಎಂದು ಟೀಕಿಸಿದರು.












Click it and Unblock the Notifications