ಸೊರಬ ರಾಜಕಾರಣ : ರಾಜು ಎಂ.ತಲ್ಲೂರುಗೆ ಕಾಂಗ್ರೆಸ್ ಆಹ್ವಾನ
ಶಿವಮೊಗ್ಗ, ಡಿಸೆಂಬರ್ 29 : ಬಿಜೆಪಿ ತೊರೆದಿದ್ದ ಸೊರಬ ಕ್ಷೇತ್ರದ ಮುಖಂಡ ರಾಜು ಎಂ.ತಲ್ಲೂರು ಅವರಿಗೆ ಪಕ್ಷ ಸೇರಲು ಕಾಂಗ್ರೆಸ್ ಆಹ್ವಾನ ನೀಡಿದೆ. ಇದರಿಂದಾಗಿ ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ.
ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರುದ್ರುಗೌಡ ಸಿ.ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿ, 'ರಾಜು ಎಂ.ತಲ್ಲೂರು ಅವರು ಸೊರಬ ತಾಲೂಕಿನಲ್ಲಿ ನಿಸ್ವಾರ್ಥ ಸೇವೆ ಮೂಲಕ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಅವರು ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸಿದ್ದಾರೆ' ಎಂದರು. ಕಾಂಗ್ರೆಸ್ ಸೇರುವಂತೆ ಆಹ್ವಾನಿಸಿದರು.

'ರಾಜು ಎಂ.ತಲ್ಲೂರು ಅವರು ತಾಲೂಕಿನಲ್ಲಿ ಹಲವು ಜನಪರ ಕೆಲಸಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ. ಇಂತಹವರು ಕಾಂಗ್ರೆಸ್ ಸೇರ್ಪಡೆಯಾಗುವುದರಿಂದ ಪಕ್ಷಕ್ಕೆ ಬಲ ಹೆಚ್ಚಾಗುತ್ತದೆ' ಎಂದರು.
'ಗಾಮೀಣಾಭಿವೃದ್ಧಿ ಸಚಿವ ಎಚ್.ಕೆ ಪಾಟೀಲ್ ಅವರು ರಾಜು.ಎಂ.ತಲ್ಲೂರು ಅವರನ್ನು ಪಕ್ಷಕ್ಕೆ ಆಹ್ವಾನಿಸಲು ಮುಖಂಡರಿಗೆ ಸೂಚಿಸಿದ್ದಾರೆ. ಆದ್ದರಿಂದ ಆಹ್ವಾನ ನೀಡುತ್ತಿದ್ದೇನೆ' ಎಂದು ಹೇಳಿದರು.
ಡಿ.26ರಂದು ಪತ್ರಿಕಾಗೋಷ್ಠಿ ನಡೆಸಿದ್ದ ರಾಜು ಎಂ.ತಲ್ಲೂರು ಬಿಜೆಪಿಗೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದರು. ಕಾಂಗ್ರೆಸ್ ಆಹ್ವಾನಿಸಿದರೆ ಪಕ್ಷ ಸೇರುವೆ ಇಲ್ಲವಾದಲ್ಲಿ, ಪಕ್ಷೇತರ ಅಭ್ಯರ್ಥಿಯಾಗಿ 2108ರ ಚುನಾವಣೆಗೆ ಸ್ಪರ್ಧಿಸುವೆ ಎಂದು ಹೇಳಿದ್ದರು.
ಕ್ಷೇತ್ರದ ಕಾಂಗ್ರೆಸ್ ನಾಯಕ ಕುಮಾರ್ ಬಂಗಾರಪ್ಪ ಬಿಜೆಪಿ ಸೇರಿದ್ದಾರೆ. 2018ರ ಚುನಾವಣೆಗೆ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ರಾಜು ಎಂ.ತಲ್ಲೂರು ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯವು ಸಾಧ್ಯತೆ ಇದೆ.
ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್ನ ಮಧು ಬಂಗಾರಪ್ಪ. ಕುಮಾರ್ ಬಂಗಾರಪ್ಪ ಅವರು ಬಿಜೆಪಿಯಿಂದ ಕಣಕ್ಕಿಳಿದರೆ ಕ್ಷೇತ್ರದ ಚುನಾವಣೆಗೆ ಸಹೋದರರ ಸವಾಲ್ ಮೂಲಕ ಗಮನ ಸೆಳೆಯಲಿದೆ.












Click it and Unblock the Notifications