ಶಿವಮೊಗ್ಗ; ತರಕಾರಿ ಹಾರ ಧರಿಸಿ, ರಸ್ತೆಯಲ್ಲಿ ಅಡುಗೆ ಮಾಡಿ ಪ್ರತಿಭಟನೆ
ಶಿವಮೊಗ್ಗ, ಮಾರ್ಚ್ 06; ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶಿವಮೊಗ್ಗದಲ್ಲಿ ವಿನೂತನ ಪ್ರತಿಭಟನೆ ನಡೆಯಿತು. ತರಕಾರಿ ಹಾರ ಧರಿಸಿ ಪ್ರತಿಭಟನಾನಿರತರು ಗಮನ ಸೆಳೆದರು.
ಶಿವಮೊಗ್ಗ ಕಾಂಗ್ರೆಸ್ ಪಕ್ಷದ ವತಿಯಿಂದ ಶನಿವಾರ ವಿನೂತನ ಪ್ರತಿಭಟನೆ ನಡೆಸಲಾಯಿತು. ನಡು ರಸ್ತೆಯಲ್ಲೇ ಸೌದೆ ಒಲೆ ಹಚ್ಚಿ, ಅಡುಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಿವಪ್ಪನಾಯಕ ಪ್ರತಿಮೆ ಬಳಿ ರಸ್ತೆಯಲ್ಲೇ ಒಲೆ ಹಚ್ಚಿ ವಿಭಿನ್ನವಾಗಿ ಪ್ರತಿಭಟಿಸಲಾಯಿತು. ಬೋಂಡ ಕರಿದು, ಟೀ ಮಾಡಿ ಎಲ್ಲರಿಗೂ ಹಂಚಲಾಯಿತು. ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವಂತೆ ಆಗ್ರಹಿಸಲಾಯಿತು.

ತರಕಾರಿ ನೆಕ್ಲೆಸ್; ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ತರಕಾರಿಯನ್ನೇ ನೆಕ್ಲೆಸ್ ರೀತಿ ತೊಟ್ಟಿದ್ದರು. ತರಕಾರಿಗೆ ಚಿನ್ನದಷ್ಟು ಬೆಲೆ ಬಂದಿದೆ. ಹಾಗಾಗಿ ತರಕಾರಿ ಸರವನ್ನು ತೊಡುವಂತಾಗಿದೆ ಎಂದು ಹೇಳಿದರು.
"ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜನ ಸಾಮಾನ್ಯರ ಬಗ್ಗೆ ಕಾಳಜಿ ಇಲ್ಲವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಈ ತನಕ ಸರ್ಕಾರ ಕ್ರಮ ಕೈಗೊಂಡಿಲ್ಲ. ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಎಸ್. ಸುಂದರೇಶ್ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್. ಸಿ. ಯೋಗೇಶ್, ಯಮುನಾ ರಂಗೇಗೌಡ, ಮಂಜುಳಾ ಶಿವಣ್ಣ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಪಿ. ಗಿರೀಶ್ ಮುಂತಾದವರಿದ್ದರು.












Click it and Unblock the Notifications