ನಿವೃತ್ತಿ ಹೊಂದಿದ ನೌಕರನಿಗೆ ಅದ್ದೂರಿಯಾಗಿ ಬೀಳ್ಕೊಟ್ಟ ಕಾಲೇಜು ಸಿಬ್ಬಂದಿ
Recommended Video

ಶಿವಮೊಗ್ಗ, ಜುಲೈ.02: ನಿವೃತ್ತಿ ಹೊಂದಿದ 'ಡಿ' ಗ್ರೂಪ್ ನೌಕರನಿಗೆ ತೆರೆದ ವಾಹನದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಿ, ಮನೆ ತನಕ ಹೋಗಿ ಬೀಳ್ಕೊಟ್ಟಿರುವ ಘಟನೆ ಶಿಕಾರಿಪುರದಲ್ಲಿ ನಡೆದಿದೆ.
ತಾವು ಮಾಡುವ ಕೆಲಸದ ಬಗ್ಗೆ ಶ್ರದ್ದೆ ಇದ್ದರೆ, ಸಮಾಜ ಅವರ ಕಾಯಕ, ನಿಷ್ಠೆ ಗುರುತಿಸುತ್ತದೆ ಎನ್ನುವುದಕ್ಕೆ ಶಿಕಾರಿಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ ಡಿ ಗ್ರೂಪ್ ನೌಕರ ಮಂಜುನಾಥ ಅವರೇ ಸಾಕ್ಷಿ.
ಶಿಕಾರಿಪುರ ಪಟ್ಟಣ ಜೂನಿಯರ್ ಕಾಲೇಜಿನಲ್ಲಿ ಅನೇಕ ವರ್ಷಗಳಿಂದ ಗ್ರೂಪ್ 'ಡಿ' ನೌಕರರಾಗಿ ಸೇವೆ ಸಲ್ಲಿಸಿದ ಮಂಜುನಾಥ್ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಪ್ರೀತಿ-ವಿಶ್ವಾಸದಿಂದ ಇದ್ದು, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರು.

ಅವರ ಈ ನಿಷ್ಠಾವಂತ ಸೇವೆ ಗುರುತಿಸಿದ ಕಾಲೇಜಿನ ಶಿಕ್ಷಕ ವೃಂದ ಅವರ ವೃತ್ತಿ ವಿದಾಯದ ಬೀಳ್ಕೊಡುಗೆ ಸಮಾರಂಭವನ್ನು ಅದ್ದೂರಿಯಾಗಿ ಏರ್ಪಡಿಸಿದ್ದರು. ಕಾಲೇಜಿನಿಂದ ಅವರ ಗ್ರಾಮ ಮುಡಬ ಸಿದ್ದಾಪುರವರೆಗೆ ಹೋಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಧನಾ ಅಕಾಡೆಮಿಯ ಮಂಜುನಾಥ, ಮನೆಗೆ ತೆರೆದ ಜೀಪಿನಲ್ಲಿ ಕರೆದೊಯ್ಯುತ್ತಿದ್ದೇವೆಂದರೆ ಅದು ಅವರ ಕರ್ತವ್ಯ ನಿಷ್ಠೆಗೆ ಹಿಡಿದ ಕೈಗನ್ನಡಿಯಾಗಿದೆ. ಅವರು ನಮಗೆಲ್ಲ ಮಾದರಿಯಾಗಿದ್ದಾರೆ.
ಪ್ರತಿದಿನ ನೂರಾರು ಸರ್ಕಾರಿ ನೌಕರರು ನಿವೃತ್ತಿಯಾಗುತ್ತಾರೆ ಅದು ಯಾರಿಗೂ ಗೊತ್ತಾಗುವುದಿಲ್ಲ. ನಾವು ಮಾಡುವ ಕೆಲಸ ಯಾವುದೇ ಇರಲಿ ಅದನ್ನು ಪ್ರೀತಿಸಬೇಕು. ನಮ್ಮ ಕಾಯಕದ ಬಗ್ಗೆ ನಮಗೆ ಪ್ರೀತಿ ಇರಬೇಕು. ಅವರ ಸಹೃದಯತೆ ಮೆಚ್ಚುವಂಥದ್ದು ಎಂದು ಪ್ರಶಂಸಿಸಿದರು.

ನಿವೃತ್ತ ನೌಕರ ಮಂಜುನಾಥ್ ಮಾತನಾಡಿ, ಸಹದ್ಯೋಗಿಗಳು, ಮಕ್ಕಳ ಪ್ರೀತಿ ನನ್ನನ್ನು ಮೂಕನನ್ನಾಗಿಸಿದೆ. ಬಹುಶಃ ಈ ರೀತಿಯ ವಿದಾಯ ನಾಡಿನ ಯಾರಿಗೂ ಸಿಕ್ಕಿಲ್ಲವೇನೋ. ಇದು ನನ್ನ ಪುಣ್ಯ ಎಂದು ಭಾವಿಸುತ್ತೇನೆ ಎಂದು ಭಾವುಕರಾಗಿ ನುಡಿದರು.












Click it and Unblock the Notifications