ಮೈದೊಳಲು ಗ್ರಾಮದಲ್ಲಿ ಕಾಲರಾ: ಜಿಲ್ಲಾಡಳಿತ ಘೋಷಣೆ
ಭದ್ರಾವತಿ, ಫೆಬ್ರವರಿ 14 : ಭದ್ರಾವತಿ ತಾಲೂಕು ಮೈದೊಳಲು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಸಾವನ್ನಪ್ಪಿದ ಘಟನೆಗೆ ಜಿಲ್ಲಾಡಳಿತ ಕಾಲರಾ ಕಾರಣವೆಂದು ಸ್ಪಷ್ಟಪಡಿಸಿದೆ.
ಕಲುಷಿತ ನೀರು ಸೇವನೆಯಿಂದ ಉಂಟಾಗಿರುವ ಸಾವು ನೋವುಗಳಿಗೆ 2 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಲೋಕೇಶ್ ತಿಳಿಸಿದ್ದಾರೆ. ರೋಗಿಗಳ ರಕ್ತ ಪರೀಕ್ಷೆಯ ಹಾಗೂ ನೀರಿನ ಸ್ಯಾಂಪಲ್ಸ್ ತೆಗೆದುಕೊಂಡು ಪರೀಕ್ಷೆಗೆ ಒಳಡಿಸಿದ್ದು ಕಾಲೆರಾ ಎಂದು ವರದಿ ಬಂದಿರುವ ಕಾರಣ ಮುಂಜಾಗ್ರತಾ ಕ್ರಮ ಜಿಲ್ಲಾಡಳಿತ ವಹಿಸಿದೆ.
ಮುಂಜಾಗ್ರತಾ ಕ್ರಮ: ಫೆ.15ರಿಂದ ಮೈದೊಳಲು ಗ್ರಾಮದಲ್ಲಿ ಕಾಲರಾ ಕುರಿತ ಶಿಬಿರಗಳನ್ನು ಏರ್ಪಡಿಸಲಾಗಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಲೆರಾ ಹರಡದಂತೆ ಮುಂಬರುವ ಜಾತ್ರೆಗೂ ಸಹ ಕ್ರಮ ಜರುಗಿಸಲಾಗಿದೆ.
ಕಾರಣ : ಕಳೆದ 15ದಿನಗಳ ಹಿಂದೆ ಇಲ್ಲಿ ಹೋಂ ಗಾರ್ಡ್ ಶಿಬಿರ ಏರ್ಪಡಿಸಲಾಗಿತ್ತು ಈ ಶಿಬಿರದಲ್ಲಿ ಶುಚಿತ್ವದ ಕೊರತೆ ಹಾಗೂ ಶೌಚಾಲಯದ ಕೊರತೆಯಿಂದ ಈ ರೋಗ ಹರಡಿರಬಹುದು ಎಂದು ಊಹಿಸಲಾಗಿದೆ. ಈ ಶಿಬಿರದಲ್ಲಿ ಕಾಲೆರಾ ಪೀಡಿತ ಭಾಗವಹಿಸಿರಬಹುದಾಗಿರುವುದರಿಂದ ಈ ಕಾಲೆರಾ ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಮೈದೊಳಲು ಗ್ರಾಮದಲ್ಲಿ ಫೆಬ್ರವರಿ ಪ್ರಥಮ ವಾರ ಹೋಂಗಾರ್ಡ್ ಅಭ್ಯರ್ಥಿಗಳಿಗೆ ಐದು ದಿನಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ 215 ಹೋಂಗಾರ್ಡ್ ಅಭ್ಯರ್ಥಿಗಳು ಭಾಗವಹಿಸಿದ್ದರು.
ಇವರಿಗೆ ಸಮರ್ಪಕವಾಗಿ ಶೌಚಾಲಯ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಶಿಬಿರದ ಸಂದರ್ಭದಲ್ಲಿ ಬಯಲು ಶೌಚದಿಂದಾಗಿ ಮಲಮೂತ್ರಗಳು ಕುಡಿಯುವ ನೀರಿಗೆ ಸೇರಿ ಕಲುಷಿತಗೊಂಡಿರುವುದು ದೃಢಪಟ್ಟಿದೆ.
ಪಿಡಿಒ ರಮೇಶ್ ಅಮಾನತು: ಕುಡಿಯುವ ನೀರಿನ ಪೈಪ್ ಗಳು ದುರಸ್ತಿ ಮಾಡುವಲ್ಲಿ ಪಿಡಿಒ ರಮೇಶ್ ಅವರನ್ನ ಕೆಲಸದಿಂದ ಅಮಾನತುಗೊಳಿಸಲಾಗಿದೆ. ಕುಡಿಯುವ ನೀರಿಗಾಗಿ ಹೊಸ ಬೋರ್ ವೆಲ್ ತೆಗೆಸಲಾಗುವುದು ಹಾಗೂ ದುರಸ್ತಿ ಕಂಡ ನೀರಿನ ಟ್ಯಂಕಿಗಳ ಪೈಪ್ ಲೈನ್ ದುರಸ್ತಿಗೊಳಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ತಿಳಿಸಿದ್ದಾರೆ.