ಶಿವಮೊಗ್ಗ : ಶಾಲಾ ಮಕ್ಕಳಿಗೆ ಬಾದಾಮಿ ಹಾಲಿನ ಭಾಗ್ಯ
ಶಿವಮೊಗ್ಗ, ಜೂನ್ 3 : ಕ್ಷೀರಭಾಗ್ಯ ಯೋಜನೆಯಲ್ಲಿ ಮಕ್ಕಳಿಗೆ ಇನ್ನು ಮುಂದೆ ಬಾದಾಮಿ ಸೇರಿದಂತೆ ಪ್ರತಿದಿನವೂ ಒಂದೊಂದು ಸುವಾಸಿತ ಪೌಷ್ಠಿಕ ಹಾಲು ವಿತರಣೆ ಮಾಡಲು ಶಿವಮೊಗ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ನಿಯಮಿತ ನಿರ್ಧರಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 51,000 ಶಾಲೆಗಳ 40ಲಕ್ಷ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಸೋಮವಾರ ಶಿವಮೊಗ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ನಿಯಮಿತ (ಶಿಮೂಲ್) ಹಮ್ಮಿಕೊಂಡಿದ್ದ ವಿಶ್ವ ಹಾಲು ದಿನಾಚರಣೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮಕ್ಕಳಿಗೆ ಸುವಾಸಿತ ಹಾಲು ವಿತರಣೆ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಪ್ರಸ್ತುತ ಸರ್ಕಾರ ಜಾರಿಗೆ ತಂದಿರುವ ಕ್ಷೀರಭಾಗ್ಯ ಯೋಜನೆಯನ್ನು ಮತ್ತಷ್ಟು ಉತೃಷ್ಟಗೊಳಿಸಲು ನಂದಿನಿ ಹಾಲಿಗೆ ಪೋಷಕಾಂಶಯುಕ್ತ ಬಾದಾಮಿ, ಮತ್ತಿತರ ಸುವಾಸಿತ ಪೌಷ್ಠಿಕಾಂಶಗಳನ್ನು ಸೇರಿಸಿ, ಮಕ್ಕಳಿಗೆ ವಿತರಿಸುವುದರಿಂದ ಮಕ್ಕಳೂ ಸಂತೋಷದಿಂದ ಕುಡಿಯುತ್ತಾರೆ ಎಂಬ ಅಂಶವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು. [ಕ್ಷೀರಭಾಗ್ಯ ಯೋಜನೆ ಆರು ದಿನಗಳಿಗೆ ವಿಸ್ತರಣೆ?]
ಕ್ಷೀರಭಾಗ್ಯ ಯೋಜನೆಯಿಂದ ಮಕ್ಕಳ ಅಪೌಷ್ಠಿಕ ಕೊರತೆ ಪೂರ್ಣವಾಗಿ ನಿವಾರಣೆಯಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ 51,000 ಶಾಲೆಗಳ 40ಲಕ್ಷ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ತಿಳಿಸಿದರು. ಸದ್ಯ ಜಿಲ್ಲೆಯಲ್ಲಿ 7ಲಕ್ಷ ಟನ್ ನಂದಿನಿ ಹಾಲಿನ ಪುಡಿಯನ್ನು ಯೋಜನೆಗಾಗಿ ಬಳಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ರಾಮಕೃಷ್ಣಾಶ್ರಮದ ವಿನಯಾನಂದ ಸರಸ್ವತಿ ಸ್ವಾಮಿಜಿ, ದೇಶದಲ್ಲಿ ಸತ್ಯ, ಧರ್ಮ ಹಾಗೂ ಪ್ರಾಮಾಣಿಕತೆ ನೆಲೆಸಿರುವುದರಿಂದ ನೆಮ್ಮದಿ ಪ್ರಾಪ್ತಿಯಾಗಲಿದೆ. ಈ ಹಿನ್ನೆಲೆಯಲ್ಲಿ ಗೋ ಸಂರಕ್ಷಣೆ ಹಾಗೂ ಗೋಮಾಳಗಳ ರಕ್ಷಣೆ ಅಗತ್ಯವಿದ್ದು, ದೇಶದ ಸಮೃದ್ಧಿಯನ್ನು ಸಾರುವ ಕ್ಷೀರ ಕ್ರಾಂತಿಯಾಗಬೇಕು ಎಂದು ಅಭಿಪ್ರಾಯಪಟ್ಟರು.












Click it and Unblock the Notifications