ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸಾಲ ಕೊಟ್ಟ ಬಗ್ಗೆ ಸಿಬಿಐ ತನಿಖೆ!
ಶಿವಮೊಗ್ಗ, ಮೇ 30 : ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಮತ್ತೆ ಸುದ್ದಿಯಲ್ಲಿದೆ. ಬ್ಯಾಂಕ್ನಿಂದ 95 ಕೋಟಿ ರೂ. ಸಾಲ ನೀಡಿರುವ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸಲು ಪ್ರಗತಿ ಪರಿಶೀಲನಾ ಸಭೆಯಲ್ಲಿ ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಶುಕ್ರವಾರ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಕೊಟ್ಟ ಸಾಲದ ಬಗ್ಗೆಯೂ ಚರ್ಚಿಸಲಾಯಿತು.
ಡಿಸಿಸಿ ಬ್ಯಾಂಕ್ ಜಿಲ್ಲೆಯ ರೈತರಿಗೆ ನೆರವಾಗುವ ಯಾವುದೇ ಯೋಜನೆ ರೂಪಿಸಿಲ್ಲ. ಹೊರ ಜಿಲ್ಲೆಗಳ ಸಕ್ಕರೆ ಕಾರ್ಖನೆಗಳಿಗೆ 95 ಕೋಟಿಗಿಂತಲೂ ಹೆಚ್ಚಿನ ಸಾಲ ನೀಡಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ಅನೇಕ ಅಕ್ರಮಗಳು ನಡೆದಿದೆ ಎಂಬ ಅಂಶಗಳು ಪ್ರಸ್ತಾಪವಾದವು.

ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆಗರ ಜ್ಞಾನೇಂದ್ರ ಡಿಸಿಸಿ ಬ್ಯಾಂಕ್ ವಿಚಾರವನ್ನು ತ್ರೈ ಮಾಸಿಕ ಸಭೆಯಲ್ಲಿ ಮಂಡನೆ ಮಾಡಿದರು. ಅಂತಿಮವಾಗಿ ಸಾಲ ಕೊಟ್ಟ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಡಿಸಿಸಿ ಬ್ಯಾಂಕ್ನ ಶಿವಮೊಗ್ಗ ನಗರ ಶಾಖೆಯಲ್ಲಿ ನಡೆದ ಸುಮಾರು 62 ಕೋಟಿ ರೂ. ಹಗರಣದ ಬಗ್ಗೆ 2017ರಲ್ಲಿ ಭಾರಿ ಸುದ್ದಿಯಾಗಿತ್ತು. ಬ್ಯಾಂಕ್ ಅಧ್ಯಕ್ಷರಾಗಿದ್ದ ಆರ್. ಎಂ. ಮಂಜುನಾಥ ಗೌಡ ಮನೆ ಮೇಲೆ ಐಟಿ ದಾಳಿಯೂ ನಡೆದಿತ್ತು.
ಮೂರು ದಿನಗಳ ಹಿಂದೆ ಸಹಕಾರಿ ಸಚಿವ ಎಸ್. ಟಿ. ಸೋಮಶೇಖರ್, "ರಾಜ್ಯದಲ್ಲಿರುವ ಎಲ್ಲಾ 21 ಡಿಸಿಸಿ ಬ್ಯಾಂಕ್ಗಳ ಸಾಧನೆಯ ಪರಾಮರ್ಶೆಯಾಗಬೇಕಿದೆ. ಬ್ಯಾಂಕ್ಗಳ ಕಾರ್ಯ ನಿರ್ವಹಣೆ ಬಗ್ಗೆ ಉನ್ನತ ಅಧಿಕಾರಿಗಳ ಪ್ರಗರಿ ಪರಿಶೀಲನಾ ಸಭೆ ನಡೆಸುವಂತೆ" ಸೂಚನೆ ನೀಡಿದ್ದರು.
ಇದೇ ಸಭೆಯಲ್ಲಿ ಸಚಿವರು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅವ್ಯವಹಾರದ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು. 2004 ರಿಂದ 2013ರ ತನಕ ನಡೆದ 62.72 ಕೋಟಿ ಅವ್ಯವಹಾರದ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳನ್ನು ಕೇಳಿದ್ದರು.
13 ಜನ ನಿರ್ದೇಶಕರಲ್ಲಿ 8 ಮಂದಿಯಿಂದ ಅವ್ಯವಹಾರ ಆಗಿದೆ. ಅವರ ಸದಸ್ಯತ್ವ ರದ್ದು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರಿಗೆ ವಿವರಣೆ ನೀಡಿದ್ದರು.












Click it and Unblock the Notifications