ಶಿವಮೊಗ್ಗ; ರಾಕೇಶ್ ಟಿಕಾಯತ್ ವಿರುದ್ಧ ಪ್ರಕರಣ ದಾಖಲು
ಶಿವಮೊಗ್ಗ, ಮಾರ್ಚ್ 24: ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖ್ಯಸ್ಥ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ.
ದೆಹಲಿಯಲ್ಲಿ ರೈತರ ಆಂದೋಲನದ ನೇತೃತ್ವ ವಹಿಸಿಕೊಂಡಿರುವ ರಾಕೇಶ್ ಟಿಕಾಯತ್ ವಿರುದ್ಧ ಪೊಲೀಸರು ಸುಮೋಟೊ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮಾರ್ಚ್ 20ರ ಶನಿವಾರ ಟಿಕಾಯತ್ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಭಾಷಣ ಮಾಡಿದ್ದರು.
ಸೈನ್ಸ್ ಮೈದಾನದಲ್ಲಿ ನಡೆದ ರೈತ ಮಹಾಪಂಚಾಯತ್ ಸಮಾವೇಶದಲ್ಲಿ ರಾಕೇಶ್ ಟಿಕಾಯತ್ ಪಾಲ್ಗೊಂಡಿದ್ದರು. ಈ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿಕೊಳ್ಳಲಾಗಿದೆ.

ಯಾವ ಹೇಳಿಕೆ?; ರಾಕೇಶ್ ಟಿಕಾಯತ್ ತಮ್ಮ ಭಾಷಣದಲ್ಲಿ, ಈ ಆಂದೋಲನವು ದೊಡ್ಡಮಟ್ಟದಲ್ಲಿ ಸಾಗಬೇಕಿದೆ. ನೀವು ಕರ್ನಾಟಕದ ಒಳಗಡೆ ದೆಹಲಿ ಮಾಡಬೇಕಿದೆ. ನೀವು ಬೆಂಗಳೂರನ್ನು ದೆಹಲಿ ಮಾಡಬೇಕಿದೆ. ಬೆಂಗಳೂರನ್ನು ನಾಲ್ಕು ಕಡೆಯಿಂದ ಮುತ್ತಿಗೆ ಹಾಕಬೇಕಿದೆ. ಈ ಆಂದೋಲನ ಟ್ರಾಕ್ಟರ್ಗಳಿಂದ ಆಗುತ್ತದೆಯೇ ವಿನಃ ಗಾಡಿಗಳಿಂದ ಅಲ್ಲ. ದೆಹಲಿಯಲ್ಲಿ ಈಗ ಸುಮಾರು 25-30 ಸಾವಿರ ಟ್ರಾಕ್ಟರ್ಗಳು ನಾಲ್ಕು ದಿಕ್ಕುಗಳಲ್ಲಿ ಇವೆ. ನೀವು ಸಹ ಟ್ರಾಕ್ಟರ್ಗಳಿಂದ ಆಂದೋಲನ ಮಾಡಬೇಕಿದೆ" ಎಂಬ ಅರ್ಥ ಬರುವಂತೆ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಜನವರಿ 26ರಂದು ನವದೆಹಲಿಯಲ್ಲಿ ನಡೆದ ಹಿಂಸಾಚಾರದ ರೀತಿಯಲ್ಲೇ ಪ್ರೇರೇಪಿಸುವ ಮಾದರಿಯಲ್ಲಿ ರಾಕೇಶ್ ಟಿಕಾಯತ್ ಅವರು ಭಾಷಣದಲ್ಲಿ ಪ್ರಚೋದಿಸಿದ್ದಾರೆ.
ಈ ಭಾಷಣದಿಂದ ಸಾರ್ವಜನಿಕರು ಉದ್ರೇಕಗೊಂಡು ದೊಂಬಿ ನಡೆಸುವ ಸಾಧ್ಯತೆ ಇದ್ದು, ಉದ್ದೇಶಪೂರ್ವಕವಾಗಿ ಜನರನ್ನು ಪ್ರಚೋದಿಸಿದ್ದಾರೆ ಎಂದು ಕೋಟೆ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.












Click it and Unblock the Notifications