ಕಾಂಗ್ರೆಸ್ ಅನ್ನು ಕೇಳಿಯೇ ಅಭ್ಯರ್ಥಿ ಹಾಕಿದ್ದೇವೆ: ದೇವೇಗೌಡ
ಶಿವಮೊಗ್ಗ, ಅಕ್ಟೋಬರ್ 23: ಚುನಾವಣಾ ಮೈತ್ರಿ ಹಾಗೂ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಮೇಲೆ ಜೆಡಿಎಸ್ ಸವಾರಿ ಮಾಡುತ್ತಿದೆ ಎಂಬ ಆರೋಪವನ್ನು ಜೆಡಿಎಸ್ ವರಿಷ್ಠ ದೇವೇಗೌಡರು ತಳ್ಳಿ ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದವರು ಶಿವಮೊಗ್ಗ, ಮಂಡ್ಯ, ರಾಮನಗರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದ ಮೇಲಷ್ಟೆ ನಾವು ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ ಎಂದು ದೇವೇಗೌಡರು ಇಂದು ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು ವೇಣುಗೋಪಾಲ್, ಸಿದ್ದರಾಮಯ್ಯ, ನಾವು ಎಲ್ಲ ಸೇರಿ ಚರ್ಚೆ ನಡೆಸಿ ಐದೂ ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಒಕ್ಕೂರಲಿನಿಂದಲೇ ಚುನಾವಣೆಗೆ ಇಳಿದಿದ್ದೇವೆ ಎಂದು ಹೇಳಿದರು.

ಬಿಜೆಪಿಯ ಅಸಲಿ ಮುಖ ಗೊತ್ತಿದೆ
ಬಂಗಾರಪ್ಪ ಅವರನ್ನು ಬಿಜೆಪಿಗೆ ಕರೆದುಕೊಂಡು 79 ಸ್ಥಾನಗಳನ್ನು ಪಡೆದುಕೊಂಡ ಬಿಜೆಪಿ ಆ ನಂತರ ಪಕ್ಷಕ್ಕೆ ಕರೆದುಕೊಂಡ ರಾಮಕೃಷ್ಣ ಹೆಗಡೆ, ರಾಜಶೇಖರ ಮೂರ್ತಿ ಅವರುಗಳನ್ನು ಹೇಗೆ ನಡೆಸಿಕೊಂಡಿದೆ ಎಂದು ನಾವು ನೋಡಿದ್ದೇವೆ ಎಂದು ದೇವೇಗೌಡ ಬಿಜೆಪಿ ವಿರುದ್ಧ ಹರಿಹಾಯ್ದರು.

ಕಾರ್ಯಕರ್ತರಲ್ಲಿ ಗೊಂದಲ ಇರುವುದು ನಿಜ
ಮೈತ್ರಿ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಇದೆ. ಆದರೆ ಸಮಯ ಕಳೆದಂತೆ ಗೊಂದಲ ನಿವಾರಣೆ ಆಗಲಿದೆ. ಶಿವಮೊಗ್ಗದಲ್ಲಿ ನಡೆಯುವ ಎಲ್ಲ 23 ಸಮಾವೇಶಗಳಿಗೂ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಹೋಗಲಿದ್ದೇವೆ. ಕಾರ್ಯಕರ್ತರ ನಡುವಿನ ಸಮಸ್ಯೆಗಳನ್ನು ನಿವಾರಿಸಲಿದ್ದೇವೆ ಎಂದು ಅವರು ಹೇಳಿದರು.

ಶಿವಮೊಗ್ಗದಿಂದಲೇ ಆರಂಭವಾಗಲಿದೆ ಮೈತ್ರಿ
ಮುಂದಿನ ಲೋಕಸಭೆ ಚುನಾವಣೆಗೆ ಮೈತ್ರಿಯು ಶಿವಮೊಗ್ಗದಿಂದಲೇ ಆರಂಭವಾಗಲಿದೆ ಎಂದ ದೇವೇಗೌಡರು, ದೇಶದಲ್ಲಿ ಸದ್ಯಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಅತಿದೊಡ್ಡ ರಾಷ್ಟ್ರೀಯ ಪಕ್ಷಗಳು ಹಾಗಾಗಿ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ಗೆ ಆದ್ಯತೆ ನೀಡಲೇಬೇಕಾಗುತ್ತದೆ ಎಂದರು.

ಬಿಜೆಪಿ ಆಡಳಿತದಲ್ಲಿ ಅಶಾಂತಿ ಹೆಚ್ಚಾಗಿದೆ
ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಅಶಾಂತಿ ಹೆಚ್ಚಾಗಿದೆ. ಮುಸ್ಲಿಮರು, ಕ್ರಿಶ್ಚಿಯನ್ ಅವರುಗಳನ್ನು ಜೊತೆಯಾಗಿ ಕರೆದುಕೊಂಡು ಹೋಗುವ ಕೆಲಸ ಅವರು ಮಾಡಿಲ್ಲ ಎಂದು ಆರೋಪಿಸಿದ ದೇವೇಗೌಡರು. 2014 ರ ನಂತರ ನಡೆದ ಎಲ್ಲ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆ ಕೇವಲ ಒಂದು ಉಪಚುನಾವಣೆಯನ್ನು ಮಾತ್ರವೇ ಅದು ಗೆದ್ದಿದೆ ಎಂದು ದೇವೇಗೌಡರು ಹೇಳಿದರು.












Click it and Unblock the Notifications